Arvind Kejriwal: ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ದಾಳಿ
ಆಮ್ ಆದ್ಮಿ ಪಕ್ಷ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಮನೆ-ಮನೆ ಪ್ರಚಾರದ ವೇಳೆ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲ್ ಅವರ ಕಾರಿಗೆ ಕಲ್ಲು ಎಸೆಯುವ ಮೂಲಕ ಪಕ್ಷದ ಪ್ರಚಾರಕ್ಕೆ ಅಡ್ಡಿಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದೆ. ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಪರ್ವೇಶ್ ವರ್ಮಾ ಅವರು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ನ ಸಂದೀಪ್ ದೀಕ್ಷಿತ್ ವಿರುದ್ಧ ಚುನಾವಣಾ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರವೇಶ್ ವರ್ಮಾ ಅವರ ಬೆಂಬಲಿಗರು ಕೇಜ್ರಿವಾಲ್ ಪ್ರಚಾರ ಮಾಡುತ್ತಿದ್ದಾಗ ಅವರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆದಿದ್ದಾರೆ ಎಂದು ಎಎಪಿ ದೂರಿದೆ.

ಸೋಲಿನ ಭಯದಿಂದ ಬಿಜೆಪಿಗೆ ಗಾಬರಿಯಾಗಿದೆ. ಈ ಕಾರಣದಿಂದ ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ಮಾಡಲು ತನ್ನ ಗೂಂಡಾಗಳನ್ನು ಕಳುಹಿಸಿದೆ. ಕೇಜ್ರಿವಾಲ್ ಪ್ರಚಾರವನ್ನು ಮುಂದುವರಿಸದಂತೆ ತಡೆಯಲು ಪ್ರಯತ್ನಿಸಿದೆ. ಈ ಹೇಡಿತನದ ದಾಳಿಯ ಹೊರತಾಗಿಯೂ, ಕೇಜ್ರಿವಾಲ್ ಅವರು ಹೆದರುವುದಿಲ್ಲ. ದೆಹಲಿಯ ಜನರು ನಿಮಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಆಮ್ ಆದ್ಮಿ ಪಕ್ಷ ಎಕ್ಸ್ನಲ್ಲಿ ತಿಳಿಸಿದೆ. ಜೊತೆಗೆ ಕೇಜ್ರಿವಾಲ್ ಕಾರಿನ ಮೇಲೆ ದಾಳಿ ಘಟನೆಯ ವೀಡಿಯೊವನ್ನು ಸಹ ಹಂಚಿಕೊಂಡಿದೆ.
ವಿಡಿಯೋದಲ್ಲಿ ಕೇಜ್ರಿವಾಲ್ ಅವರ ಬೆಂಗಾವಲು ಪಡೆಯ ಬಳಿ ಜನಸಮೂಹವು ಕಪ್ಪು ಬಾವುಟವನ್ನು ಬೀಸುತ್ತಿರುವುದನ್ನು ಸಹ ಕಂಡುಬಂದಿದೆ. ಎಎಪಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಘಟನೆಯನ್ನು ವಿವರಿಸಿದೆ. ಆದರೆ, ಬಿಜೆಪಿಯ ಪರ್ವೇಶ್ ವರ್ಮಾ ಅವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಕೇಜ್ರಿವಾಲ್ ಅವರ ವಾಹನ ಇಬ್ಬರು ಯುವಕರಿಗೆ ಹಾನಿ ಮಾಡಿದೆ ಎಂದು ಪರ್ವೇಶ್ ವರ್ಮಾ ಹೇಳಿದ್ದಾರೆ. ವರ್ಮಾ ಕೂಡ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಜನರು ಪ್ರಶ್ನೆಗಳನ್ನು ಕೇಳುತ್ತಿದ್ದಾಗ ಅರವಿಂದ್ ಕೇಜ್ರಿವಾಲ್ ತಮ್ಮ ಕಾರಿನಿಂದಲೇ ಇಬ್ಬರು ಯುವಕರನ್ನು ಹೊಡೆದಿದ್ದಾರೆ. ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದಿದ್ದಾರೆ.
ಕೇಜ್ರಿವಾಲ್ ಅವರು ಹತಾಶೆಯಲ್ಲಿ ಜನರ ಜೀವದ ಮೌಲ್ಯವನ್ನು ಮರೆತಿದ್ದಾರೆ. ನಾನು ಆ ಯುವಕರನ್ನು ನೋಡಲು ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಪರ್ವೇಶ್ ವರ್ಮಾ, ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ ಎಲ್ಲರೂ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಸದ್ಯ ಮೂವರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಂದಿನ ಘಟನೆಯು ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ.












Click it and Unblock the Notifications