Assam Assembly Elections 2026: ಅಸ್ಸಾಂ ಚುನಾವಣೆ: ಎನ್ಡಿಎಗೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ: ಸಿಎಂ ಹೇಳಿಕೆಗಳೇ ಸವಾಲು
Assam Assembly Elections 2026: ಅಸ್ಸಾಂ ವಿಧಾನಸಭೆಯ ಚುನಾವಣೆ ಮತದಾನವು ಏಪ್ರಿಲ್ 9ರಂದು ನಡೆದಿದ್ದು, ಅಸ್ಸಾಂನಲ್ಲಿ ಹ್ಯಾಟ್ರಿಕ್ ಮೂರನೇ ಬಾರಿ ಅಧಿಕಾರಕ್ಕೇರುವ ಕನಸಿನಲ್ಲಿ ಎನ್ಡಿಎ ಇದೆ. ಈ ಬಾರಿ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಅಸ್ಸಾಂನ ಈ ಬಾರಿ ಒಂದೇ ಹಂತದಲ್ಲಿ 126 ವಿಧಾನಸಭಾ ಕ್ಷೇತ್ರಗಳ ಮತದಾನ ನಡೆದಿದೆ. ಈ ಬಾರಿ ದಾಖಲೆಯ ಮತದಾನ ಅಸ್ಸಾಂ ರಾಜ್ಯದಲ್ಲಿ ಆಗಿದೆ. 2026ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಶೇ 85.21% ಮತದಾನವಾಗಿದೆ. 2021 ರ ಚುನಾವಣೆಯಲ್ಲಿ ಶೇ 82.04% ಮತದಾನವಾಗಿತ್ತು. ಈ ಬಾರಿ ದಾಖಲೆಯ ಮತದಾನವಾಗಿದೆ.
ಅಸ್ಸಾಂ ರಾಜ್ಯದಲ್ಲಿ 35 ಜಿಲ್ಲೆಗಳಿದ್ದು, 126 ವಿಧಾನಸಭಾ ಕ್ಷೇತ್ರಗಳಿವೆ. ಅಸ್ಸಾಂ ವಿಧಾನಸಭೆಯ ಮ್ಯಾಜಿಕ್ ಸಂಖ್ಯೆ 64 ಆಗಿದೆ. ಬಿಜೆಪಿ ನೇತೃತ್ವದ ಮಿತ್ರ ಪಕ್ಷಗಳು ಮತ್ತು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಬಣದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಒಂದೇ ಹಂತದ ಚುನಾವಣೆಯಲ್ಲಿ ಒಟ್ಟು 722 ಅಭ್ಯರ್ಥಿಗಳು ಕಣದಲ್ಲಿದ್ದರು.

ಏಪ್ರಿಲ್ 9 ರಂದು ಅಸ್ಸಾಂನಲ್ಲಿ ಹದಿನಾರನೇ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮತ್ತೊಮ್ಮೆ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆ. 2015 ರಲ್ಲಿ ಕಾಂಗ್ರೆಸ್ನಿಂದ ಭಾರತೀಯ ಜನತಾ ಪಕ್ಷಕ್ಕೆ ಪಕ್ಷಾಂತರಗೊಂಡ ಶರ್ಮಾ ಅವರು ಬಿಜೆಪಿಯಲ್ಲಿ ಇರುವವರಿಗಿಂತಲೂ ಬಿಜೆಪಿ ನಾಯಕರಾಗುತ್ತಿದ್ದಾರೆ ಎನ್ನುವ ಮಾತಿದೆ.
ಇದಕ್ಕೆ ಮುಖ್ಯ ಕಾರಣ ಈ ಬಾರಿ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಅವರು ಮಾಡಿರುವ ಭಾಷಣ, ಮಾತು ಹಾಗೂ ಹೇಳಿಕೆಗಳು. ಹಿಂದೂ - ಮುಸ್ಲಿಂ ವಿಚಾರವು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾದ ವಿಷಯವಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ, "ನೋ ಕರುಣೆ" ಎಂಬ ಶೀರ್ಷಿಕೆಯೊಂದಿಗೆ ಮುಖ್ಯಮಂತ್ರಿ ಇಬ್ಬರು ಮುಸ್ಲಿಂ ಪುರುಷರ ಚಿತ್ರಕ್ಕೆ ಗುಂಡು ಹಾರಿಸುತ್ತಿರುವ AI- ರಚಿತ ವೀಡಿಯೊವನ್ನು ಬಿಜೆಪಿ ಹಂಚಿಕೊಂಡಿತ್ತು.
ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಮೇಲೆ ಡಿಲೀಟ್ ಮಾಡಲಾಗಿತ್ತು. ಅಸ್ಸಾಂನ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಚಾರ ಸಭೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹಲವು ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದರು. ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು (ಮಿಯಾಸ್) ಉದ್ದೇಶಿಸಿ, "ನಾನು ಅಧಿಕಾರದಲ್ಲಿ ಇರುವವರೆಗೂ ಅವರು ತೊಂದರೆ ಅನುಭವಿಸುತ್ತಾರೆ" ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಇದು ರಾಜ್ಯದ ಬಂಗಾಳಿ ಮುಸ್ಲಿಮರ ವಿರುದ್ಧದ ಕಾಮೆಂಟ್ ಎಂದು ಹೇಳಲಾಗಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು "ಪಾಗಲ್" (ಹುಚ್ಚ) ಎಂದೂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು. ಕಳೆದ ಐದು ವರ್ಷಗಳಲ್ಲಿ ಅಸ್ಸಾಂನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಮೂವತ್ತು ಸಾವಿರಕ್ಕೂ ಹೆಚ್ಚು ವಿದೇಶಿಯರೆಂದು ಗುರುತಿಸಲ್ಪಟ್ಟವರಲ್ಲಿ ಸಾವಿರಾರು ಜನರನ್ನು ಗಡೀಪಾರು ಮಾಡಲಾಗಿದೆ.
ಈ ಬಾರಿ ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿಯ ನೇರ ಹಣಾಹಣಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹಲವು ಸರಣಿ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಅಸ್ಸಾಂ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗಿದ್ದ ರಾಹುಲ್ ಗಾಂಧಿ ಅವರು, ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭಾರತದ ಅತ್ಯಂತ ಭ್ರಷ್ಟ ಮತ್ತು ದ್ವೇಷವನ್ನು ಹರಡುವ ಮುಖ್ಯಮಂತ್ರಿ ಎಂದು ಕರೆದಿದ್ದರು. ಕೊನೆಯದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಅವರು ಮುಸ್ಲಿಮರು ಮನೆಯಲ್ಲಿ ಗೋಮಾಂಸ ಸೇವಿಸಬಹುದು ಎಂದು ಹೇಳಿದ್ದರು.
Assam Assembly Elections 2026: ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಚರ್ಚೆಯಾದ ವಿಷಯಗಳು
ಅಕ್ರಮ ವಲಸೆ ಮತ್ತು ಪೌರತ್ವ
ಬಾಲ್ಯ ವಿವಾಹದ ವಿರುದ್ಧದ ಕ್ರಮ
ಗೋಮಾಂಸ ಸೇವನೆ ವಿಚಾರ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ
ಹಿಂದೂ - ಮುಸ್ಲಿಂ ವಿಚಾರ














Click it and Unblock the Notifications