ಮೊಘಲರು ಬೆಂಕಿ ಹಚ್ಚಿದ್ದ ವಿಶ್ವವಿದ್ಯಾಲಯ ಪುನರಾರಂಭ
ಪಾಟ್ನಾ, ಸೆ 2 (ಐಎಎನ್ಎಸ್) : ಸುಮಾರು ಎಂಟು ಶತಮಾನಗಳ ನಂತರ ದೇಶದ ಮೂರು ಅತ್ಯಂತ ಪ್ರಾಚೀನ ಮತ್ತು ಐತಿಹಾಸಿಕ ವಿವಿಗಳಲ್ಲೊಂದಾದ ಮತ್ತು ವಸತಿ ಸೌಕರ್ಯವನ್ನೂ ಹೊಂದಿದ್ದ 'ನಳಂದ ವಿಶ್ವವಿದ್ಯಾಲಯ' ಸೋಮವಾರ (ಸೆ 1) ಪುನರಾರಂಭಗೊಂಡಿದೆ.
ಗೌತಮ ಬುದ್ದ ಧ್ಯಾನ ಮಾಡಿದ ಸ್ಥಳದಲ್ಲಿ ಜ್ಞಾನಪೀಠವಿರುವ ಈ ಈ ವಿಶ್ವವಿದ್ಯಾಲಯಕ್ಕೆ ಮೊಘಲರ ಆಡಳಿತದಲ್ಲಿ ಬೆಂಕಿ ಹಚ್ಚಲಾಗಿತ್ತು ಎನ್ನುತ್ತದೆ ಇತಿಹಾಸ.
ಇತಿಹಾಸದಲ್ಲಿ ನಮೂದಿತವಾದ ನಮ್ಮ ದೇಶದ ಅತಿ ಶ್ರೇಷ್ಠ ವಿಶ್ವವಿದ್ಯಾಲಯ ಎಂದು ಕರೆಯಲ್ಪಡುವ ಈ ವಿವಿ ಐದನೇ ಶತಮಾನದಲ್ಲಿ ಗುಪ್ತರ ಸಾಮ್ರಾಜ್ಯದಲ್ಲಿ ಆರಂಭಗೊಂಡಿತ್ತು. ಈ ವಿಶ್ವವಿದ್ಯಾಲಯವನ್ನು ಶಕ್ರಾದಿತ್ಯ ಯಾನೆ ಕುಮಾರಗುಪ್ತ ಮಹಾರಾಜನು ಕಟ್ಟಿಸಿದ್ದನು.
ಸುಮಾರು 446 ಎಕರೆ ವಿಶಾಲ ಪ್ರದೇಶದ ರಾಜಗಿರಿಯಲ್ಲಿರುವ ಈ ವಿವಿ ಸೋಮವಾರ ಮತ್ತೆ ಪುನರಾರಂಭಗೊಂಡಿದೆ ಎಂದು ವಿವಿಯ ಕುಲಪತಿ ಗೋಪ ಶಬರ್ವಾಲ್ ತಿಳಿಸಿದ್ದಾರೆ. ಹತ್ತು ಸಾವಿರ ವಿದ್ಯಾರ್ಥಿಗಳಗೆ ಏಕಕಾಲಕ್ಕೆ ಪಾಠ ಮಾಡಬಹುದಾದ ವಿಶ್ವವಿದ್ಯಾಲಯ ಇದಾಗಿದೆ.
ಸಮಾನತೆಯನ್ನೇ ಪ್ರಮುಖ ಮಾನದಂಡವನ್ನಾಗಿಸಿ, ಭಾರತೀಯರ ಜೊತೆಗೆ ವಿದೇಶಿಯರಿಗೂ ನಮ್ಮ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ನೀಡಲಿದ್ದೇವೆ ಎಂದು ಕುಲಪತಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ. ವಿವಿಯಲ್ಲಿ ಉಪನ್ಯಾಸಕ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ವಿದ್ಯಾರ್ಥಿಗಳ ಬೇಡಿಕೆಗೆ ಅನುಸಾರವಾಗಿ ವಿವಿಧ ಕೋರ್ಸುಗಳನ್ನು ಆರಂಭಿಸಲಾಗುವುದು ಎಂದು ವಿವಿಯ ಕುಲಪತಿಗಳು ಹೇಳಿದ್ದಾರೆ.
ಐತಿಹಾಸಿಕ ನಳಂದ ವಿಶ್ವವಿದ್ಯಾಲಯದ ಬಗ್ಗೆ ಒಂದು ಕಿರುಪರಿಚಯ, ಸ್ಲೈಡಿನಲ್ಲಿ ..
ಮೊಘಲರು ಬೆಂಕಿ ಹಚ್ಚಿದ್ದ ವಿವಿ
ನಳಂದ ವಿಶ್ವವಿದ್ಯಾಲಯದ ಮಹಡಿಯಲ್ಲಿದ್ದ ಗ್ರಂಥಾಲಯವು ಎಷ್ಟು ದೊಡ್ಡದಿತ್ತೆಂದರೆ, ಮೊಘಲರು ಅಲ್ಲಿ ಬೆಂಕಿ ಹಚ್ಚಿದ ಮೂರು ತಿಂಗಳವರೆಗೂ ಆ ಸ್ಥಳವು ಉರಿಯುತ್ತಿತ್ತು ಎನ್ನುತ್ತದೆ ಇತಿಹಾಸ. ಸ್ಥಳದಿಂದ ಸಂತರನ್ನು ಹೊರಗೆ ಕಳಿಸಿ, ಮಠಗಳನ್ನು ನಾಶಮಾಡಿದ್ದರು ಎನ್ನುತ್ತದೆ ಇತಿಹಾಸದ ಪುಟಗಳು (ಮಾಹಿತಿ, ಚಿತ್ರ : ವಿಕಿಪೀಡಿಯಾ)
ಚರಿತ್ರೆಕಾರರ ಪ್ರಕಾರ ಹೀಗೂ ಇದೆ
ಭಾರತೀಯ ಚರಿತ್ರೆಕಾರರ ಪ್ರಕಾರ, ಸುಮಾರು 10ನೆಯ ಶತಮಾನದ ಸಮಯದಲ್ಲಿ ನಳಂದ ಮೇಲಿನ ಒತ್ತಡ ಹೆಚ್ಚತೊಡಗಿತು. ಚರಿತ್ರೆಕಾರ ಪ್ರಕಾಶ್ ಪ್ರಕಾರ, ಹಿಂದುಗಳಿಂದ ಮಾಡಲ್ಪಟ್ಟ ಒಂದು ಯಜ್ಞದ ಅಗ್ನಿ ಮಹಾಜ್ವಾಲೆಯಾಗಿ ಮಾರ್ಪಟ್ಟು ಅದು ನಳಂದದ ಒಂಬತ್ತು ಮಹಡಿಯ ಗ್ರಂಥಾಲಯವಾದ ರತ್ನಭೋದಿಯನ್ನು ನಾಶಪಡಿಸಿತು. (ಮಾಹಿತಿ, ಚಿತ್ರ : ವಿಕಿಪೀಡಿಯಾ)
ವಿದೇಶಾಂಗ ಸಚಿವರ ಭೇಟಿ
ಬಿಹಾರದ ರಾಜಧಾನಿ ಪಾಟ್ನಾದಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಈ ವಿಶ್ವವಿದ್ಯಾಲಯ ಹನ್ನೆರಡನೇ ಶತಮಾನದವರೆಗೆ ಪ್ರಪಂಚದ ವಿದ್ಯಾರ್ಥಿಗಳಿಗೆ ವಿದ್ಯಾಕೇಂದ್ರವಾಗಿತ್ತು. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇದೇ ಹದಿನಾಲ್ಕರಂದು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಅದ್ದೂರಿ ಸಮಾರಂಭವನ್ನು ಆಯೋಜಿಸಲು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ. (ಐಎಎನ್ಎಸ್ ವರದಿ, ಚಿತ್ರ : ವಿಕಿಪೀಡಿಯಾ)
ಸಾವಿರಾರು ಅಪ್ಲಿಕೇಶನ್
ವಿವಿಗೆ ಭರ್ತಿಯಾಗಲು ನಲವತ್ತು ದೇಶದ ಸುಮಾರು 1100 ವಿದ್ಯಾರ್ಥಿಗಳಿಂದ ಅರ್ಜಿಗಳು ಬಂದಿದ್ದವು. ಆದರೆ ಇದರಲ್ಲಿ ಕೇವಲ ಹದಿನೈದು ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆಮಾಡಲಾಗಿದೆ. ಇದರಲ್ಲಿ ಜಪಾನ್, ಭೂತಾನ್ ದೇಶದ ತಲಾ ಒಬ್ಬರು ವಿದ್ಯಾರ್ಥಿಗಳು ಸೇರಿದ್ದಾರೆ. ಇವರಲ್ಲಿ ಐವರು ವಿದ್ಯಾರ್ಥಿನಿಯರು ಮತ್ತು ಆಯ್ಕೆಯಾದ ಹದಿನೈದು ವಿದ್ಯಾರ್ಥಿಗಳಿಗೆ ಐವರು ಉಪನ್ಯಾಸಕರು ಪಾಠ ಮಾಡಲಿದ್ದಾರೆ. (ಐಎಎನ್ಎಸ್ ವರದಿ, ಚಿತ್ರ : ವಿಕಿಪೀಡಿಯಾ)
ಕೆಂಪು ಇಟ್ಟಿಗೆಯಿಂದ ಕಟ್ಟಲ್ಪಟ್ಟ ವಿವಿ
ವಿವಿಯ ಸಂಕೀರ್ಣವು ಕೆಂಪು ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದು ಮತ್ತು ಅದರ ಇಸ್ಲಾಂ ದಾಳಿಕೋರರಿಂದ ದಾಳಿಗೊಂಡಾಗ ಇದರ ಭಗ್ನಾವಶೇಷ 14 ಎಕರೆಗಳಷ್ಟು ಸ್ಥಳವನ್ನು ಆಕ್ರಮಿಸಿತ್ತು. ತನ್ನ ಉತ್ತುಂಗ ಸ್ಥಿತಿಯಲ್ಲಿ ಈ ವಿಶ್ವವಿದ್ಯಾಲಯವು ಚೈನಾ, ಗ್ರೀಸ್ ಮತ್ತು ಪರ್ಶಿಯಾದಂತಹ ದೂರದೂರುಗಳ ಪಂಡಿತರು ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾ ತಾಣವಾಗಿತ್ತು. (ಮಾಹಿತಿ, ಚಿತ್ರ : ವಿಕಿಪೀಡಿಯಾ)
ನಳಂದ ವಿವಿಯ ದುರಂತ
ಹಿಂದೆ ಎರಡು ಬಾರಿ ಆಕ್ರಮಣಕ್ಕೆ ಒಳಗಾಗಿದ್ದರೂ ಸಟೆದೆದ್ದು ಪುನರಾರಂಭಗೊಂಡಿದ್ದ ವಿವಿ, 1193ರಲ್ಲಿ ಟರ್ಕಿಯ ಮುಸ್ಲಿಂ ದಾಳಿಕೋರ ಭಕ್ತಿಯಾರ್ ಖಿಲ್ಜಿಯ ನೇತೃತ್ವದಲ್ಲಿ ಮತ್ತೆ ದಾಳಿಗೊಳಗಾಯಿತು. ದಾಳಿಯಿಂದ ತತ್ತರಿಸಿ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವಿದ್ಯಾದಾನ ಮಾಡಿದ್ದ ವಿವಿ ಮುಚ್ಚಲ್ಪಟ್ಟಿತ್ತು. ಇದು ಭಾರತದಲ್ಲಿ ಬೌದ್ಧರ ಪ್ರಾಬಲ್ಯದ ಇಳಿಮುಖದ ಸಂಕೇತವೆಂದೇ ಬಿಂಬಿತವಾಯಿತು. (ಮಾಹಿತಿ, ಚಿತ್ರ : ವಿಕಿಪೀಡಿಯಾ)