ಹಿಂದೂಗಳ ಮನೆ ಮೇಲೆ ಭೀಕರ ದಾಳಿ, ಕೊಲೆಗೂ ಪ್ರಯತ್ನ: ಬಾಂಗ್ಲಾದೇಶ ಪೂರ್ತಿ ಧಗಧಗ
ಹಿಂದೂಗಳ ಮನೆ ಮೇಲೆ ನೆರೆಯ ಬಾಂಗ್ಲಾದೇಶದಲ್ಲಿ ಈಗ ಹಿಂಸಾತ್ಮಕ ದಾಳಿ ಆರಂಭ ಆಗಿದ್ದು ಹಿಂದೂಗಳ ಹತ್ಯೆಗೂ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಇದೀಗ ದೇಶ ಬಿಟ್ಟು ಓಡಿ ಬಂದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಈ ಸಮಯದಲ್ಲೇ ಧಗಧಗ ಹೊತ್ತಿ ಉರಿಯುತ್ತಿರುವ ಬಾಂಗ್ಲಾದೇಶದಲ್ಲಿ, ಹಿಂದೂಗಳ ಮನೆ ಮೇಲೆ ಹಿಂಸಾತ್ಮಕ ದಾಳಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಾಂಗ್ಲಾದೇಶ ಇವತ್ತು ಸ್ವಾತಂತ್ರ್ಯ ಪಡೆದು ನೆಮ್ಮದಿಯಾಗಿ ಸ್ವತಂತ್ರ ದೇಶವಾಗಿ ಜೀವನವನ್ನ ನಡೆಸುತ್ತಿದೆ ಎಂದರೆ ಅದಕ್ಕೆ ಕಾರಣ ಭಾರತ. ಆದರೆ ಭಾರತದ ಜೊತೆಗೆ ಅಲ್ಲಿನ ಜನ ಈಗ ಕಿರಿಕ್ ತೆಗೆಯುತ್ತಿದ್ದಾರೆ. 1971ರ ಬಾಂಗ್ಲಾ ವಿಮೋಚನೆ ಹೋರಾಟಕ್ಕೆ ಇಂದಿರಾ ಗಾಂಧಿಯವರ ಬೆಂಬಲ ಸಿಗದೇ ಇದ್ದಿದ್ದರೆ ಪಾಕಿಸ್ತಾನದ ಕಪಿಮುಷ್ಠಿಯಿಂದ ಬಾಂಗ್ಲಾದೇಶಕ್ಕೆ ಬಿಡುಗಡೆಯೇ ಸಿಗುತ್ತಿರಲಿಲ್ಲ. ಆದರೂ, ಇದೀಗ ಆಂತರಿಕ ಕಿತ್ತಾಟದಲ್ಲಿ ಮುಳುಗಿರುವ ಬಾಂಗ್ಲಾದೇಶದಲ್ಲಿ, ಹಿಂದೂಗಳ ಮನೆಗಳನ್ನ ಬೇಕು ಅಂತಲೇ ಟಾರ್ಗೆಟ್ ಮಾಡಿ ಬೆಂಕಿ ಹಚ್ಚಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹಿಂದೂಗಳಿಗೆ ಭದ್ರತೆ ಇಲ್ವಾ?
ಬಾಂಗ್ಲಾದಲ್ಲಿ ಹಿಂದೂಗಳ ಮನೆಗಳ ಮೇಲೆ ಹಿಂಸಾತ್ಮಕ ದಾಳಿ ನಡೆಯುವಾಗಲೇ ಜನಗಳು ಕೂಡ ಓಡಿ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿಂದೂಗಳಿಗೆ ಭದ್ರತೆ ಇಲ್ವಾ? ಎಂಬ ಪ್ರಶ್ನೆಯನ್ನ ಜನ ಕೇಳುತ್ತಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಓಡಿ ಬಂದ ನಂತರ, ಬಾಂಗ್ಲಾದೇಶ ಸೇನೆ ಇದೀಗ ಆಡಳಿತ ನಡೆಸಲು ಎಲ್ಲ ಸಿದ್ಧತೆ ಆರಂಭಿಸಿದೆ. ಹೀಗಿದ್ದರೂ ಬಾಂಗ್ಲಾದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಕೆಲವು ಕಿರಾತಕರು.
ಕಿತ್ತಾಟ ಶುರುವಾಗಿದ್ದು ಯಾವ ಕಾರಣಕ್ಕೆ?
1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿ ಆಗಿದ್ದವರಿಗೆ, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿರ್ಧಾರ ಮೊದಲಿಗೆ ಕಿಚ್ಚು ಹೊತ್ತಿಸಿತ್ತು. ಹೀಗೆ ಶುರುವಾದ ಹೋರಾಟ, ಹಿಂಸೆಗೆ ತಿರುಗಿತ್ತು. ಈವರೆಗೆ ಬಾಂಗ್ಲಾದೇಶದಲ್ಲಿ 100ಕ್ಕೂ ಹೆಚ್ಚು ಜನ ಜೀವ ಬಿಟ್ಟು ಸಾವಿರಾರು ಜನ ಗಾಯಗೊಂಡು ನರಳುತ್ತಿದ್ದಾರೆ. ವಿದ್ಯಾರ್ಥಿ ಸಂಘಟನೆ ಸೇರಿದಂತೆ ಪ್ರತಿಭಟನೆಗೆ ಇಳಿದಿದ್ದ ಜನ ಹಾಗೂ ಸರ್ಕಾರದ ನಡುವೆ ಘೋರ ಯುದ್ಧ ಶುರುವಾಗಿತ್ತು. ಹೀಗಾಗಿ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಬೇಕು ಎಂದು ತೀವ್ರ ಒತ್ತಡ ಹೇರಲಾಗಿತ್ತು.
ದೇಶ ಬಿಟ್ಟು ಓಡಿ ಹೋಗಿದ್ದೇಕೆ?
ಬಾಂಗ್ಲಾದ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಲು ಮೊದಲಿಗೆ ಶೇಖ್ ಹಸೀನಾ ಸರ್ಕಾರ ನಿರ್ಧರಿಸಿತ್ತು. ಸರ್ಕಾರ ನಿರ್ಧರಿಸಿದ್ದ ಶೇ. 30 ರಷ್ಟು ಮೀಸಲಾತಿಯನ್ನ ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ಕಡಿತಗೊಳಿಸಿತ್ತು. ಹೀಗಾಗಿ ಬಾಂಗ್ಲಾ ನೆಲದಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡು ಜನ ಬೀದಿಗೆ ಬಂದು ಬೆಂಕಿ ಹಚ್ಚಿದ್ರು. ಹೀಗೆ ಪ್ರತಿಭಟನಾಕಾರರು & ಆಡಳಿತ ಪಕ್ಷದ ಬೆಂಬಲಿಗರ ನಡುವೆ ಹಿಂಸೆ ಶುರುವಾಗಿತ್ತು. ಹೀಗೆ ಶುರುವಾದ ಹಿಂಸೆಯಲ್ಲಿ, 14 ಪೊಲೀಸರು ಸೇರಿ 100ಕ್ಕೂ ಹೆಚ್ಚು ಜನ ಈವರೆಗೆ ಜೀವ ಬಿಟ್ಟಿದ್ದಾರೆ. ಹೀಗಿದ್ದಾಗಲೇ ಖುದ್ದು ಬಾಂಗ್ಲಾ ಪ್ರಧಾನಿ ದೇಶ ಬಿಟ್ಟು ಓಡಿ ಹೋಗಿದ್ದಾರೆ.












Click it and Unblock the Notifications