ರಥದ ಕಾವಲಿಗೆ 20 ಸಾವಿರ ಶಸ್ತ್ರಧಾರಿ ಪಡೆ!
ಅಹಮದಾಬಾದ್, ಜುಲೈ 15: ಜಗತ್ತಿಗೆ ಒಡೆಯನಾದ 'ಜಗನ್ನಾಥ' ದೇವರ 13ನೇ ರಥೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಸರಿ ಸುಮಾರು 20,000ಕ್ಕೂ ಅಧಿಕ ಸಶಸ್ತ್ರಧಾರಿಗಳು ರಥವನ್ನು ಕಾಯಲಿದ್ದಾರೆ.
ಅಹಮದಾಬಾರ್ ನಗರದಲ್ಲಿ ಸುಮಾರು 18 ಕಿ.ಮೀ ದೂರ ಕ್ರಮಿಸಿರುವ ಈ ರಥೋತ್ಸವಕ್ಕೆ ಭಾರಿ ಬಂದೋಬಸ್ತ್ ಮಾಡಲಾಗಿದೆ. ರಥ ಕಾಯಲಿಕ್ಕೆ 20 ಸಾವಿರ ಪೊಲೀಸ್ ಪಡೆ ಅಲ್ಲದೆ ಅರೆ ಸೇನಾಪಡೆ ತುಕಡಿಗಳು, ಕ್ಷಿಪ್ರದಳ ಸೇರಿದಂತೆ ಬಿಗಿಭದ್ರತೆ ಒದಗಿಸಲಾಗಿದೆ ಎಂದು ವಿಶೇಷ ತಂಡ ಜಂಟಿ ಪೊಲೀಸ್ ಆಯುಕ್ತ ವಿಕಾಸ್ ಸಹಾಯ್ ಅವರು ಹೇಳಿದ್ದಾರೆ. [ರಥಯಾತ್ರೆ ನಿಮಿತ್ತ ಪುರಿ ಜಗನ್ನಾಥನ ಪುರಾಣ]
ಅಭೂತ ಪೂರ್ವ ಭದ್ರತೆ: 8ಐಜಿ ಹಾಗೂ ಡಿಐಜಿ ದರ್ಜೆ ಅಧಿಕಾರಿಗಳು, 28 ಎಸ್ ಪಿಗಳು, 75 ಡಿವೈಎಸ್ ಪಿಗಳು, 204 ಇನ್ಸ್ ಪೆಕ್ಟರ್ಸ್, 450 ಸಬ್ ಇನ್ಸ್ ಪೆಕ್ಟರ್ಸ್, 10,000 ಕಾನ್ಸ್ ಟೇಬಲ್ಸ್, 5000 ಗೃಹರಕ್ಷಕ ದಳ, 50 ತುಕಡಿ ಮೀಸಲು ಪಡೆ ಪೊಲೀಸರು, ಅರೆ ಸೇನಾ ಪಡೆ, ಗಡಿ ರಕ್ಷಣಾ ಪಡೆ, ಕ್ಷಿಪ್ರ ಕಾರ್ಯ ಪಡೆ(ಆರ್ ಎಎಫ್) ಸರ್ಪಗಾವಲಿನಲ್ಲಿ ರಥ ಸಾಗಲಿದೆ.

ಯಾವಾಗ ರಥಯಾತ್ರೆ? : ಜುಲೈ 18 ರಂದು 18 ಆನೆಗಳು, 100 ಟ್ರಕ್ ಗಳು, 30 ಅಖಾಡಗಳು ಪ್ರಮುಖ ರಥಗಳ ಜೊತೆ ಸಾಗಲಿದೆ. ಜಗನ್ನಾಥ ದೇವರ ಜೊತೆ ಅಣ್ಣ ಬಲಭದ್ರ, ತಂಗಿ ಸುಭದ್ರಾ ಅವರ ಪ್ರತಿಮೆ ಇರುವ ರಥವನ್ನು ಖಲಾಶಿ ಸಮುದಾಯದವರು ಮೊದಲಿಗೆ ಎಳೆಯಲಿದ್ದಾರೆ. [ಜಗನ್ನಾಥ ರಥ ಯಾತ್ರೆ ಫೇಸ್ ಬುಕ್ಕಲ್ಲಿ ಲೈವ್]
ಗುಜರಾತ್ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಅವರು ಸಾಂಪ್ರದಾಯಿಕ ಪಾಹಿಂದ್ (ರಾಜಬೀದಿಯಲ್ಲಿ ರಥ ಬರುವ ಮುನ್ನ ರಸ್ತೆಗಳನ್ನು ಶುಚಿಗೊಳಿಸುವ ಕ್ರಿಯೆ) ನಲ್ಲಿ ಪಾಲ್ಗೊಳ್ಳಲಿದ್ದಾರೆ.
ವೈಮಾನಿಕ ಹದ್ದಿನ ಕಣ್ಣು: ನೇತ್ರಾ ಹೆಸರಿನ ವೈಮಾನಿಕ ವಾಹನ 100 ಮೀಟರ್ ಎತ್ತರಕ್ಕೆ ಹಾರಿ ಪಕ್ಷಿನೋಟ ನೀಡಲಿದ್ದು ಕ್ಷಣ ಕ್ಷಣಕ್ಕೆ ಮಾಹಿತಿ ಪೊಲೀಸರ ಲ್ಯಾಪ್ ಟಾಪ್ ಸೇರಲಿದೆ. ಇದಲ್ಲದೆ ಪ್ರಮುಖ ಸ್ಥಳಗಳಲ್ಲಿ 50 ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿದೆ.
13 ಪಿಸಿಆರ್ ವಾಹನಗಳನ್ನು ಬಳಸಲಾಗುತ್ತಿದ್ದು, ಜಿಪಿಎಸ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಲೈವ್ ಫೀಡ್, ನೇರ ಎಸ್ಎಂಎಸ್ ಅಲರ್ಟ್ ಪೊಲೀಸರ ಕೈ ಸೇರಲಿದೆ ಎಂದು ಪೊಲೀಸ್ ಆಯುಕ್ತ ವಿಕಾಸ್ ಹೇಳಿದರು. [ನೂರು ಕೋಟಿ ಖರ್ಚು ಮಾಡಿ ಸನ್ಯಾಸಿಯಾದ!]
ಮುಸ್ಲಿಮರ ಪವಿತ್ರ ಹಬ್ಬ ಈದ್ ಕೂಡಾ ಅದೇ ದಿನ ಬರುವುದರಿಂದ ಭದ್ರತೆ ಇನ್ನಷ್ಟು ಹೆಚ್ಚಿಸಲಾಗಿದೆ. ಮೊಹಲ್ಲಾ ಸಮಿತಿ ಜೊತೆ ಈ ಬಗ್ಗೆ ಮಾತುಕತೆ ನಡೆಸಲಾಗಿತ್ತು, ರಥ ಯಾತ್ರೆ ಪೂರ್ವ ತಯಾರಿ ಪರಿಶೀಲನೆ ಜುಲೈ 16ಕ್ಕೆ ನಡೆಯಲಿದೆ ಎಂದು ಡಿಸಿಪಿ ಡಿಎಚ್ ಪಾರ್ಮರ್ ಹೇಳಿದರು. (ಪಿಟಿಐ)












Click it and Unblock the Notifications