ಗುಜರಾತ್: ಸಾಗರ ವಿಮಾನದಲ್ಲಿ ಮೋದಿ ಪ್ರಚಾರದ ಸರ್ಕಸ್
Recommended Video

ಅಹಮದಾಬಾದ್, ಡಿಸೆಂಬರ್ 12: ನಗರದಲ್ಲಿ ಇಂದು ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಕಾನೂನು ಸುವ್ಯವಸ್ಥೆಯ ಕಾರಣ ಮುಂದಿಟ್ಟು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಇದಕ್ಕೆ ಪರ್ಯಾಯವಾಗಿ ಮೋದಿ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದೇ ಸಾಗರ ವಿಮಾನ!
ಸಾಬರಮತಿ ನದಿಯಿಂದ ಪ್ರಧಾನಿ ನರೇಂದ್ರ ಮೋದಿ ಸಾಗರ ವಿಮಾನದಲ್ಲಿ ಇಂದು ಮೇಲೇರಲಿದ್ದಾರೆ. ನಂತರ ಈ ವಿಮಾನ ಧರೋಯ್ ನ ಕೆರೆಯಲ್ಲಿ ಲ್ಯಾಂಡ್ ಆಗಲಿದೆ. ಅಲ್ಲಿಂದ ಅಂಬಾಜಿ ದೇವಸ್ಥಾನಕ್ಕೆ ರಸ್ತೆ ಮಾರ್ಗವಾಗಿ ತೆರಳಲಿದ್ದಾರೆ.
ಭಾರತದಲ್ಲಿ ಸಾಗರ ವಿಮಾನ ಟೇಕ್ ಆಫ್ ಆಗುತ್ತಿರುವ ಮೊದಲ ದೃಷ್ಟಾಂತ ಇದಾಗಲಿದೆ. ಈ ಸಂಬಂಧ ಕಾಂಗ್ರೆಸ್ ಪಕ್ಷವನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, "ಈ ಮಟ್ಟಿಗಿನ ಅಭಿವೃದ್ಧಿಯನ್ನು ಕಾಂಗ್ರೆಸ್ ಗೆ ಸಹಿಸಿಕೊಳ್ಳಲಾಗುತ್ತಿಲ್ಲ," ಎಂದಿದ್ದಾರೆ.

"ನಾವು ಎಲ್ಲಾ ಕಡೆಯೂ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾವು ವಾಟರ್ ವೇ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ದೇಶದಾದ್ಯಂತ 106 ವಾಟರ್ ವೇಗಳ ಬಗ್ಗೆ ಯೋಜನೆ ರೂಪಿಸಿದ್ದೇವೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
"ನಾಳೆ ಬೆಳಿಗ್ಗೆ (ಮಂಗಳವಾರ) ಸಾಬರಮತಿ ನದಿಯಲ್ಲಿ 9.30ಕ್ಕೆ ವಿಮಾನವೊಂದು ಲ್ಯಾಂಡ್ ಆಗಲಿದೆ. ಈ ಸಾಗರ ವಿಮಾನದಲ್ಲಿ ನಾನಿರಲಿದ್ದೇನೆ. ಇಲ್ಲಿಂದ ಧರೋಯಿಗೆ ಹೋಗಿ ನಾನು ಅಂಬಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲಿದ್ದೇನೆ," ಎಂದು ನರೇಂದ್ರ ಮೋದಿ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
Tomorrow at 9:30 AM I will travel from Sabarmati River in Ahmedabad to Dharoi Dam via sea plane. After that will offer prayers to Maa Amba at Ambaji. With air, roads & rail connectivity, our Government is making efforts for harnessing waterways. All this is for 125 crore Indians!
— Narendra Modi (@narendramodi) December 11, 2017
ಗುಜರಾತ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಸಾಗರ ವಿಮಾನ ಏರಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದೇ ಡಿಸೆಂಬರ್ 14ರಂದು ಗುಜರಾತ್ ನಲ್ಲಿ ಎರಡನೇ ಹಂತದ ಮತದಾನ 93 ಸ್ಥಾನಗಳಿಗೆ ನಡೆಯಲಿದೆ. ಈಗಾಗಲೇ ಮೊದಲ ಹಂತದ ಮತದಾನ ಡಿಸೆಂಬರ್ 9ರಂದು ನಡೆದಿದ್ದು ಫಲಿತಾಂಶ ಡಿಸೆಂಬರ್ 18ರಂದು ಹೊರ ಬೀಳಲಿದೆ.












Click it and Unblock the Notifications