ಶ್ರೀನಗರದಲ್ಲಿ ಗ್ರೇನೆಡ್ ಸ್ಫೋಟ: 8 ಜನರಿಗೆ ಗಾಯ
ಶ್ರೀನಗರ, ನ. 29: ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶ್ರೀನಗರದ ಲಾಲ್ ಚೌಕದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಸಂಭವಿಸಿದ ಗ್ರೇನೆಡ್ ಸ್ಫೋಟದಲ್ಲಿ ಪ್ಯಾರಾಮಿಲಿಟರಿ ಕೇಂದ್ರ ಮೀಸಲು ಪೊಲೀಸ್ ದಳ (ಸಿಆರ್ಪಿಎಫ್)ದ ಓರ್ವ ಅಧಿಕಾರಿ ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ. [ಜಮ್ಮು ಮತ್ತು ಕಾಶ್ಮೀರ ಚುನಾವಣೆ ಚಿತ್ರಗಳು]
ಪಲ್ಲೆಡಿಯಮ್ ಸಿನಿಮಾ ಹತ್ತಿರದ ಸಿಆರ್ಪಿಎಫ್ ಬಂಕರ್ ಗುರಿಯಾಗಿಸಿಕೊಂಡು ಗ್ರೇನೆಡ್ ಎಸೆಯಲಾಗಿತ್ತು. ಆದರೆ, ಗ್ರೇನೆಡ್ ರಸ್ತೆಯ ಮೇಲೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏಳು ನಾಗರಿಕರು, ಓರ್ವ ಸಿಆರ್ಪಿಎಫ್ ಉಪ ನಿರೀಕ್ಷಕರು ಗಾಯಗೊಂಡಿದ್ದಾರೆ. [ಕಾಶ್ಮೀರದಲ್ಲಿ ಶೇ. 72.3 ಮತದಾನ]
ಗಾಯಗೊಂಡ ನಾಗರಿಕರನ್ನು ದೇವಸರ್ ಕುಲ್ಗಮ್ ಪ್ರದೇಶದ ಗುಲಾಮ್ ನಬಿ ನಾಯಕ್ ಮತ್ತು ಆತನ ಮಗ ಫಾರೂಕ್ ಅಹ್ಮದ್, ಕವೂಸಾ ಬದ್ಗಮ್ ಪ್ರದೇಶದ ಅಬ್ದುಲ್ ರೆಹಮಾನ್ ವಾನಿ ಮತ್ತು ಸಲೀಮಾ ಬಾನಿ, ಶಿವಪೊರಾದ ಪ್ರದೇಶದ ಮುಸ್ತಾಕ್ ಅಹ್ಮದ್ ದಾರ್, ಬೇಮಿನಾ ಪ್ರದೇಶದ ಬಷೀರ್ ಅಹ್ಮದ್ ವಾನಿ ಮತ್ತು ನಾಟಿಪೊರಾದ ಸೈಯದ್ ಅಬ್ದುಲ್ ಮಜಿದ್ ಎಂದು ಗುರುತಿಸಲಾಗಿದೆ. [ಕಣಿವೆ ರಾಜ್ಯವನ್ನು ಕಾಡುತ್ತಿರುವ 370ನೇ ವಿಧಿ]
ಗಾಯಗೊಂಡ ಎಲ್ಲರ ಆರೋಗ್ಯ ಸ್ಥಿರವಾಗಿದೆ. ಘಟನೆ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಪೊಲೀಸ್ ಹಾಗೂ ಪ್ಯಾರಾಮಿಲಿಟರಿ ಪಡೆಗಳನ್ನು ಸ್ಥಾಪಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. [ಕಾಶ್ಮೀರಿ ನಿರಾಶ್ರಿತರ ಸಮಸ್ಯೆ ಬಗೆಹರಿಸ್ತೇವೆ]