ಸೆ.23ಕ್ಕೆ ಜಗನ್ ಭವಿಷ್ಯ ನಿರ್ಧಾರ ಬೇಲಾ? ಜೈಲಾ?
ಹೈದರಾಬಾದ್, ಸೆ.17: ಅಕ್ರಮ ಆಸ್ತಿ ಪ್ರಕರಣದ ಆರೋಪಿಯಾಗಿ ಜೈಲು ಸೇರಿ ವರ್ಷ ಕಳೆದರೂ ಬಿಡುಗಡೆಯ ಸೂಚನೆ ಕಾಣದೆ ಕಂಗಾಲಾಗಿರುವ ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಗೆ ಆಶಾಕಿರಣ ಕಾಣಿಸಿದೆ. ಪ್ರಕರಣದ ಕುರಿತಾದ ತೀರ್ಪನ್ನು ಸಿಬಿಐ ನ್ಯಾಯಾಲಯ ಸೆ.23ರಂದು ಪ್ರಕಟಿಸುವುದಾಗಿ ಘೋಷಿಸಿದೆ.
ಹೈದರಾಬಾದಿನ ನಾಂಪಲ್ಲಿಯಲ್ಲಿರುವ ಸಿಬಿಐ ನ್ಯಾಯಾಲಯ ಸೋಮವಾರ ಮಾಜಿ ಸಚಿವ ಮೋಪಿದೇವಿ ವೆಂಕಟರಮಣ ಅವರಿಗೆ ಮದ್ಯಂತರ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಜಗನ್ ಮೇಲಿನ ಕೇಸುಗಳನ್ನು ನಾಲ್ಕು ತಿಂಗಳಿನಲ್ಲಿ ಮುಕ್ತಾಯಗೊಳಿಸುವಂತೆ ಸಿಬಿಐ ತಂಡಕ್ಕೆ ಸುಪ್ರೀಂಕೊರ್ಟ್ ಕಳೆದ ಮೇ ತಿಂಗಳಿನಲ್ಲಿ ಆದೇಶಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಿಬಿಐ ವಿಶೇಷ ನ್ಯಾಯಾಲಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ ಮೋಹನ್ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.18 ರಂದು ಕೈಗೆತ್ತಿಕೊಂಡು ವಿಚಾರಣೆ ನಡೆಸಲಾಗಿದೆ.
ಸಿಬಿಐ ತಂಡ ಮಂಗಳವಾರ ಪ್ರತ್ಯೇಕವಾಗಿ ಚಾರ್ಜ್ ಶೀಟ್ ಸಲ್ಲಿಸಿ ಇನ್ನಷ್ಟು ಆರೋಪಿಗಳನ್ನು ಈ ಪ್ರಕರಣದಲ್ಲಿ ಹೆಸರಿಸಿದೆ. ಒಟ್ಟಾರೆ ತನಿಖೆ, ಚಾರ್ಚ್ ಶೀಟ್ ಸಲ್ಲಿಕೆಗೆ ಇನ್ನಷ್ಟು ಕಾಲ ಬೇಕು ಎಂದು ಸಿಬಿಐ ಅರ್ಜಿ ಹಾಕಿದೆ. ಸಿಬಿಐ ಹೊಸ ಚಾರ್ಜ್ ಶೀಟ್ ನಲ್ಲಿ ಆಂಧ್ರದ ಕೈಗಾರಿಕಾ ಮಂತ್ರಿ ಜೆ ಗೀತಾ ರೆಡ್ಡಿ ಹೆಸರು ಸೇರ್ಪಡೆಗೊಂಡಿದೆ. ಆದರೆ, ಕೋರ್ಟ್ ತೀರ್ಪನ್ನು ಪ್ರಕಟಿಸಲು ಮುಂದಾಗಿದೆ.

ಸೋದರಿ ಶರ್ಮಿಳಾ
ಕಳೆದ ವರ್ಷ ಮೇ 27ರಂದು ಜಗನ್ ಅವರನ್ನು ಬಂಧಿಸಲಾಗಿತ್ತು. ಸದ್ಯ ಹೈದರಾಬಾದಿನ ಚಂಚಲಗುಡ ಜೈಲಿನಲ್ಲಿದ್ದಾರೆ. ನ್ಯಾಯಾಂಗ ಬಂಧನ ಸೆ.20ರ ತನಕ ಇದ್ದು ಸಿಬಿಐ ಮತ್ತೆ ಮತ್ತೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಮೂಲಕ ಪ್ರಕರಣವನ್ನು ವಿಳಂಬಗೊಳಿಸುತ್ತಿದೆ. ಸೋದರಿ ಶರ್ಮಿಳಾ ಅವರು ಇತ್ತೀಚೆಗೆ ಚಂಚಲಗುಡ ಜೈಲಿಗೆ ಭೇಟಿ ಕೊಟ್ಟು ಮಹತ್ವದ ಮಾತುಕತೆ ನಡೆಸಿದರು.

ಆಂಧ್ರಕ್ಕಾಗಿ ಜಗನ್
ಆಂಧ್ರಪ್ರದೇಶದ ಅಳಿವು ಉಳಿವಿನ ಹೋರಾಟ ನಡೆಯುತ್ತಿದ್ದು ರಾಜಕೀಯ ಮುಖಂಡನಾಗಿ ನಾನು ಹೋರಾಟದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಜಗನ್ ಅರ್ಜಿ ಹಾಕಿದ್ದರು. ಇದಕ್ಕೆ ಪೂರಕವಾಗಿ ಸಮೈಕ್ಯ ಆಂಧ್ರ ಕ್ಕಾಗಿ ಹೋರಾಟ ತೀವ್ರಗೊಳ್ಳುತ್ತಿದೆ. ಚಿತ್ರದಲ್ಲಿ ಜಗನ್ ಪತ್ನಿ ಭಾರತಿ ಹಾಗೂ ಸೋದರಿ ಶರ್ಮಿಳಾ ಜೈಲಿನತ್ತ ಸಾಗುತ್ತಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ಘೇರಾವ್
ಕಾಂಗ್ರೆಸ್ ಮುಖಂಡ ಟಿ ಸುಬ್ಬರಾಮಿ ರೆಡ್ಡಿ ಅವರು ತಮ್ಮ 70ನೇ ಹುಟ್ಟುಹಬ್ಬ ನಿಮಿತ್ತ ಕಿಂಗ್ ಜಾರ್ಜ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಪಲು ಹಂಚಲು ಮುಂದಾದರು. ಆಗ ಅಖಂಡ ಆಂಧ್ರ ಹೋರಾಟಗಾರರು ಘೇರಾವ್ ಹಾಕಿದರು.

ಜಗನ್ ಸಹ ಆರೋಪಿಗಳು
ಜಗನ್ ಮೋಹನ್ ರೆಡ್ಡಿ, ಆಡಿಟರ್ ವಿ ವಿಜಯ ಸಾಯಿ ರೆಡ್ಡಿ, ಜೆ ಗೀತಾ ರೆಡ್ಡಿ, ಮಾಜಿ ಸಚಿವ ಧರ್ಮನ ಪ್ರಸಾದ್ ರಾವ್, ಐಎಎಸ್ ಅಧಿಕಾರಿಗಳಾದ ರತ್ನಪ್ರಭ, ಸಾಅಮ್ ಬಾಬ್, ಎಂ ಸ್ಯಾಮುಯಲ್, ವಜಾಗೊಂಡ ಅಧಿಕಾರಿ ಬಿಪಿ ಆಚಾರ್ಯ, ಇಂದು ಸಮೂಹದ ಶ್ಯಾಮ್ ಪ್ರಸಾದ್ ರೆಡ್ಡಿ ಹೆಸರು ಚಾರ್ಜ್ ಶೀಟ್ ನಲ್ಲಿದೆ

ಇತರರಿಗೂ ಸಂಕಟ
ಚಾರ್ಜ್ ಶೀಟ್ ನಲ್ಲಿ ಹೆಸರು ಕಾಣಿಸಿಕೊಂಡ ಮೇಲೆ ಆಂಧ್ರದ ಗೃಹಸಚಿವ ಸ್ಥಾನಕ್ಕೆ ಸಬಿತಾ ರೆಡ್ಡಿ ಹಾಗೂ ರಸ್ತೆ ಸಚಿವ ಸ್ಥಾನಕ್ಕೆ ಪ್ರಸಾದ್ ರಾವ್ ರಾಜೀನಾಮೆ ನೀಡಿದ್ದಾರೆ. ಪೆನ್ನಾ ಸಿಮೆಂಟ್ಸ್, ರಘುರಾಮ್(ಭಾರತಿ) ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್ ಮೇಲೆ ಚಾರ್ಚ್ ಶೀಟ್ ಹಾಕಿರುವುದರಿಂದ ಬಿಸಿಸಿಐ ಅಧ್ಯಕ್ಷ ಹಾಗೂ ಸಿಮೆಂಟ್ ಕಂಪನಿಗಳ ಒಡೆಯ ಎನ್ ಶ್ರೀನಿವಾಸನ್ ಕೂಡಾ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಮೋಪಿದೇವಿ ಹೊರಕ್ಕೆ
ಇನ್ನೊಂದೆಡೆ ಮೇ 24,2012ರಂದು ಜೈಲು ಸೇರಿದ್ದ ಮೋಪಿದೇವಿ ಅವರು 43 ದಿನಗಳ ಕಾಲ ಜೈಲಿನಿಂದ ಹೊರಗೆ ಉಳಿಯಲಿದ್ದಾರೆ. ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಅಕ್ರಮ ಆಸ್ತಿ ಗಳಿಕೆಯಲ್ಲಿ ಮೋಪಿದೇವಿ ಅವರ ಪಾಲಿದೆ ಎಂದು ಸಿಬಿಐ ಅವರನ್ನು ಜೈಲಿಗೆ ತಳ್ಳಿತ್ತು.
ದಿವಂಗತ ಮುಖ್ಯಮಂತ್ರಿ ವೈಎಸ್ ರಾಜಶೇಖರರೆಡ್ಡಿ ಅವರ ಕನಸಿನ ಯೋಜನೆ VANPIC ಜಾಲಕ್ಕೆ ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಅಲಿಯಾಸ್ ಮ್ಯಾಟ್ರಿಕ್ಸ್ ಪ್ರಸಾದ್ ಅವರನ್ನು ಪ್ರಚಾರಕರಾಗಿ ಬಳಸಿಕೊಳ್ಳಲು ಮೋಪಿದೇವಿ ಕಾರಣರಾಗಿದ್ದರು. ಸುಮಾರು 850 ಕೋಟಿ ರು ಗೂ ಅಧಿಕ ಮೊತ್ತದ ಹಗರಣದಲ್ಲಿ ಮೋಪಿದೇವಿಗೂ ಪಾಲು ಸಿಕ್ಕಿದೆ.












Click it and Unblock the Notifications