ನನ್ನ ಮಗನ ಕೊಲ್ಲಲು ಪೊಲೀಸ್ ಸಂಚು : ಯಾಸಿನ್ ತಾಯಿ
ಹೈದರಾಬಾದ್, ಜು. 06 : "ನನ್ನ ಮಗನನ್ನು ಮುಗಿಸಿ ಹಾಕಲು ಪೊಲೀಸರೇ ಹೂಡಿರುವ ಸಂಚು ಇದು. ಆತ ಜೈಲಿನಿಂದ ಓಡಿಹೋಗುವಂತೆ ಮಾಡಿ ಎನ್ಕೌಂಟರ್ ಹೆಸರಲ್ಲಿ ನನ್ನ ಮಗನನ್ನು ಕೊಲ್ಲಲು ಪೊಲೀಸರು ಹವಣಿಸುತ್ತಿದ್ದಾರೆ. ನನ್ನ ಮಗನ ವಿರುದ್ಧ ಹಲವಾರು ಕೇಸು ಹಾಕಿದ್ದಾರೆ, ಆದರೆ ಯಾವುದರಲ್ಲೂ ಅವರ ಬಳಿ ಸಾಕ್ಷ್ಯವಿಲ್ಲ. ಹಾಗಾಗಿ ಅವನನ್ನು ಕೊಲ್ಲಲು ನೆವ ಹುಡುಕುತ್ತಿದ್ದಾರೆ."
ಇಂಡಿಯನ್ ಮುಜಾಹಿದ್ದಿನ್ ಭಯೋತ್ಪಾದನೆ ಸಂಘಟನೆಯ ಸಂಸ್ಥಾಪಕ, ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ, ದೆಹಲಿ, ಅಹಮದಾಬಾದ್ ಮುಂತಾದ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಿ ದುಷ್ಕೃತ್ಯ ನಡೆಸಿರುವ ಮುಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್ನ ಅಮ್ಮ ರಿಹನಾ ಸಿದ್ದಿಬಾಪಾ ಆಡುವ ಆಕ್ರೋಶದ ಮಾತುಗಳಿವು. ಜೈಲಿನಿಂದ ತಪ್ಪಿಸಿಕೊಳ್ಳಲು ಯಾಸಿನ್ ಐಎಸ್ಐಎಸ್ ಜೊತೆ ಮಾತುಕತೆ ನಡೆಸಿದ್ದಾನೆ ಎಂಬ ಸುದ್ದಿಗೆ ಆಕೆ ನೀಡಿರುವ ಪ್ರತಿಕ್ರಿಯೆ.
ಹೈದರಾಬಾದ್ ಜೈಲಿನಲ್ಲಿರುವ ಯಾಸಿನ್ ಭಟ್ಕಳ್ ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿರುವ ತನ್ನ (ಐಎಸ್ಐಎಸ್ - ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಸ್ನೇಹಿತರ ಸಹಾಯದಿಂದ ತಪ್ಪಿಸಿಕೊಳ್ಳುವ ಕುರಿತು ತನ್ನ ಪತ್ನಿಯೊಂದಿಗೆ ಮೊಬೈಲಲ್ಲಿ ಮಾತನಾಡಿದ್ದಾನೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಾಸಿನ್ ಭಟ್ಕಳ್ಗೆ ನೀಡಿದ್ದ ಭದ್ರತೆಯನ್ನು ಮತ್ತಷ್ಟು ಬಿಗಿ ಮಾಡಲಾಗಿತ್ತು. [ಮೋಸ್ಟ್ ವಾಂಟೆಡ್ ಟೆರರಿಸ್ಟ್ ಯಾಸಿನ್ ಭಟ್ಕಳ್ ಯಾರು?]
ಯಾಸಿನ್ ಭಲೇ ಮಾತಿನ ಮೋಡಿಗಾರ
ಮೂವತ್ತೆರಡು ವರ್ಷದ ಯಾಸಿನ್ ಭಟ್ಕಳ್ ಭಲೇ ಮಾತಿನ ಮೋಡಿಗಾರ. ದೇಶದ ವಿವಿಧೆಡೆ ನಡೆಸಲಿರುವ ಉಗ್ರ ಕೃತ್ಯಗಳ ಬಗ್ಗೆ ಹೇಳಿಕೊಂಡು ಗೋಳುಹೊಯ್ದುಕೊಳ್ಳುವುದೆಂದರೆ ಬಲು ಪ್ರೀತಿ. ಬೆಂಗಳೂರಿನಲ್ಲಿ ತನಿಖೆ ನಡೆಸುತ್ತಿದ್ದಾಗ, ಬೆಣ್ಣೆ ಮಸಾಲೆ ದೋಸೆ ನೀಡಿದರೆ ಮಾತ್ರ ಪೊಲೀಸರೊಂದಿಗೆ ಸಹಕರಿಸುವುದಾಗಿ ಹೇಳಿ ರಚ್ಚೆ ತೆಗೆದಿದ್ದ.
ನ್ಯೂಕ್ಲಿಯರ್ ದಾಳಿಯ ಬಗ್ಗೆ ಬಡಾಯಿ
ದೆಹಲಿ ಪೊಲೀಸರು ಆತನ ಹೇಳಿಕೆ ಪಡೆಯುತ್ತಿದ್ದಾಗ, ತನ್ನ ಸಂಬಂಧಿ ರಿಯಾಜ್ ಭಟ್ಕಳ್ ಪಾಕಿಸ್ತಾನದಿಂದ ಭಾರತಕ್ಕೆ ಅಣು ಬಾಂಬ್ ತಂದು ದಾಳಿ ನಡೆಸಲಿದ್ದಾನೆ ಎಂದು ಬಡಾಯಿ ಬಜಾಯಿಸಿದ್ದ. ಮಹಾರಾಷ್ಟ್ರ ಪೊಲೀಸರ ಮುಂದೆ ಕೂಡ, ಭಾರತದಲ್ಲಿರುವ ಮುಜಾಹಿದ್ದಿನ್ ಉಗ್ರರು ನವದೆಹಲಿ-ಕಾಠ್ಮಂಡು ವಿಮಾನವನ್ನು ಅಪಹರಿಸಿ ತನ್ನ ಬಿಡುಗಡೆಗೆ ಬೇಡಿಕೆ ಇಡಲಿದ್ದಾರೆ ಎಂದಿದ್ದ. ಆದರೆ, ಅಚ್ಚರಿಯೆಂದರೆ, ಈ ಯಾವ ಸಂಗತಿಗಳೂ ಚಾರ್ಜ್ ಶೀಟ್ ನಲ್ಲಿ ಪ್ರಸ್ತಾಪವಾಗಿಲ್ಲ.
ಮೊಬೈಲನ್ನು ಯಾಸಿನ್ ಅಕ್ರಮವಾಗಿ ಬಳಸಿಲ್ಲ
ಜೈಲಲ್ಲಿ ಯಾಸಿನ್ ಅಕ್ರಮವಾಗಿ ಮೊಬೈಲನ್ನು ಬಳಸಿಲ್ಲ. ತನ್ನ ಕುಟುಂಬದವರೊಂದಿಗೆ ಮಾತಾಡಬೇಕೆಂದಾಗ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಲಾಗಿದೆ. ವಿಚಾರಣಾಧೀನ ಕೈದಿಗೆ ಅನುಮತಿ ಪಡೆದು ಮೊಬೈಲ್ ಬಳಸುವ ಹಕ್ಕಿದೆ. ಅಲ್ಲದೆ, ಜೊತೆಗೆ ಪೊಲೀಸ್ ಕೂಡ ಇರುತ್ತಾನೆ. ಬಿಗಿ ಭದ್ರತೆಯಿರುವ ಜೈಲಿನಿಂದ ಆತ ಪಾರಾಗಲು ಸಾಧ್ಯವೇ ಇಲ್ಲ ಎಂದು ಹೈದರಾಬಾದ್ ಪೊಲೀಸರು ಹೇಳಿದ್ದಾರೆ.
ತನಿಖೆ ಆಗಬೇಕಾಗಿರುವುದಾದರೂ ಏನು?
ಇಂಡಿಯನ್ ಮುಜಾಹಿದ್ದಿನ್ ಜೊತೆ ಗುರುತಿಸಿಕೊಂಡ ಹಲವರು ಐಎಸ್ಐಎಸ್ ಸೇರಿದ್ದಾರೆ. ಯಾಸಿನ್ನ ಸ್ನೇಹಿತ ಸುಲ್ತಾನ್ ಅಮರ್ ಅವರಲ್ಲೊಬ್ಬ. ಸುಲ್ತಾನ್ ಹುಟ್ಟುಹಾಕಿರುವ ಅನ್ಸಾರ್-ಉತ್-ತವ್ಹಿದ್ ಸಂಘಟನೆ ಭಾರತದಲ್ಲಿ ಐಎಸ್ಐಎಸ್ಗಾಗಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಐಎಸ್ಐಎಸ್ ಜೊತೆಗಿನ ಯಾಸಿನ್ ಸಂಪರ್ಕವನ್ನು ತನಿಖೆ ಮಾಡಲಾಗುತ್ತಿದೆ.
ಇದೆಲ್ಲದರ ಬಗ್ಗೆ ಬಾಯಿ ಬಿಡ್ತಾನಾ ಯಾಸಿನ್?
ಬೆಂಗಳೂರಿನ ಮಡಿವಾಳದಲ್ಲಿರುವ ವಿಶೇಷ ತನಿಖಾ ಕೊಠಡಿಯಲ್ಲಿ ಅದೆಲ್ಲಿಂದಲೋ ಬಂದ ಮಿಡಿ ನಾಗರಹಾವನ್ನು ಕಂಡು ಚಿಟ್ಟನೆ ಚೀರಿದ್ದ ಯಾಸಿನ್ ಭಟ್ಕಳ್ ಹೈದರಾಬಾದ್ ಪೊಲೀಸರ ಮುಂದೆ ಬಾಯಿಬಿಡ್ತಾನಾ. ಅಥವಾ ಅಲ್ಲೂ ಬೆಣ್ಣೆ ಮಸಾಲೆ ದೋಸೆ ಬೇಕೆಂದು ಬಾಯಿಬಾಯಿ ಬಿಡ್ತಾನಾ?