Breaking: ಕಾಂಗ್ರೆಸ್ಗೆ ಆಘಾತ, ತೆಲಂಗಾಣದ ಎಂಎ ಖಾನ್ ರಾಜೀನಾಮೆ
ಹೈದರಾಬಾದ್, ಆಗಸ್ಟ್ 28: ಕಾಂಗ್ರೆಸ್ನಲ್ಲಿ ಮತ್ತೆ ರಾಜೀನಾಮೆ ಪರ್ವ ಮುಂದುವರೆಯುತ್ತಲೇ ಇದೆ. ಹೊಸ ಬೆಳವಣಿಗೆಯಾಗಿ ತೆಲಂಗಾಣದಲ್ಲಿ ಪಕ್ಷದ ನಾಯಕ ಎಂಎ ಖಾನ್ ಅವರು ಶನಿವಾರದಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯಸಭೆಯ ಮಾಜಿ ಸದಸ್ಯ ಖಾನ್ ಕಾಂಗ್ರೆಸ್ ಹೈಕಮಾಂಡ್ಗೆ ಬರೆದಿರುವ ಪತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ಹಿಂದಿನ ಹಿರಿಮೆಯನ್ನು ಮರಳಿ ಪಡೆಯಲು ವಿಫಲವಾಗಿದೆ. ದೇಶವನ್ನು ಪಕ್ಷ ಮುನ್ನಡೆಸಬಹುದು ಎಂದು ಸಾರ್ವಜನಿಕರನ್ನು ಮನವೊಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದ್ದಾರೆ.
15 ದಿನದಲ್ಲಿ ಗುಲಾಂ ನಬಿ ಅಜಾದ್ರಿಂದ ಹೊಸ ಪಕ್ಷ, ಮೊದಲ ಘಟಕ ಎಲ್ಲಿ ಗೊತ್ತಾ?
"ನೀವು ಪಕ್ಷದ ಅಧ್ಯಕ್ಷರಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವವರೆಗೆ, ನೀವು ಪಕ್ಷದೊಳಗಿನ ಸಮಾಲೋಚನಾ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅನುಸರಿಸಿದ್ದೀರಿ. ದಶಕಗಳಿಂದ ಪಕ್ಷಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹಿರಿಯ ನಾಯಕರ ಅಭಿಪ್ರಾಯಕ್ಕೆ ನೀವು ಅತ್ಯುನ್ನತ ಮೌಲ್ಯವನ್ನು ನೀಡಿದ್ದೀರಿ. ಪಕ್ಷವು ಬಲಿಷ್ಠವಾಗಿತ್ತು ಮತ್ತು ದೇಶದ ಹೋರಾಡುವ ಸ್ಥಿತಿಯಲ್ಲಿತ್ತು" ಎಂದು ಖಾನ್ ಹೇಳಿದ್ದಾರೆ.
ತಾನು ವಿದ್ಯಾರ್ಥಿ ದಿನಗಳಿಂದ ನಾಲ್ಕು ದಶಕಗಳಿಂದ ಪಕ್ಷದೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಜಿ 23 ಸದಸ್ಯರ ಸಂಕಟ ಅರ್ಥ ಮಾಡಿಕೊಳ್ಳಬೇಕಿತ್ತು!
"ಪಕ್ಷದ ಒಳಿತಿಗಾಗಿ ಮತ್ತು ಉತ್ತಮಗೊಳಿಸಲು ಜಿ 23 ಹಿರಿಯ ನಾಯಕರು ಎತ್ತಿದ ಧ್ವನಿಯನ್ನು ನಾಯಕತ್ವವು ಭಿನ್ನಾಭಿಪ್ರಾಯವೆಂದು ಪರಿಗಣಿಸಿದೆ. ಆ ನಾಯಕರನ್ನು ನಂಬಿದ್ದರೆ ಮತ್ತು ಪಕ್ಷದ ಮರುಸ್ಥಾಪನೆಗಾಗಿ ಅವರ ನೋವು ಮತ್ತು ಸಂಕಟವನ್ನು ಅರ್ಥಮಾಡಿಕೊಂಡಿದ್ದರೆ ವಿಷಯಗಳು ಬೇರೆ ರೀತಿಯಲ್ಲೇ ಇರುತ್ತಿದ್ದವು" ಎಂದು ಪತ್ರದಲ್ಲಿ ತಿಳಿಸಲಾಗಿದೆ.
"ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಮತ್ತೆ ಸಕ್ರಿಯಗೊಳಿಸಲು ಮತ್ತು ಪಂಡಿತ್ ನೆಹರು, ಇಂದಿರಾಗಾಂಧಿ ಜಿ, ಸಂಜಯ್ ಗಾಂಧಿ ಜಿ, ಮತ್ತು ರಾಜೀವ್ ಜಿ ಅವರ ನೇತೃತ್ವದಲ್ಲಿ ಪಕ್ಷವು ಪ್ರದರ್ಶಿಸಿದ ಅದೇ ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ದೇಶ ಸೇವೆಯನ್ನು ಮುಂದುವರಿಸಲು ಉನ್ನತ ನಾಯಕತ್ವವು ಯಾವುದೇ ಪ್ರಯತ್ನಗಳನ್ನು ಮಾಡದ ಕಾರಣ ಹಿರಿಯ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಬೇಕಾಯಿತು. ಈಗೀನ ಪರಿಸ್ಥಿತಿಯನ್ನು ಗಮನಿಸಿದರೆ, ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆ ಇರಲಿಲ್ಲ" ಎಂದು ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಮೇಲೆ ಬೇಸರ ವ್ಯಕ್ತಪಡಿಸಿ ಖಾನ್
"ಆದ್ದರಿಂದ, ಕಾಂಗ್ರೆಸ್ ಪಕ್ಷದ ವ್ಯವಹಾರಗಳಿಂದ ನನ್ನನ್ನು ನಾನು ಬೇರ್ಪಡಿಸುವುದನ್ನು ಹೊರತುಪಡಿಸಿ ನನಗೆ ಬೇರೆ ಆಯ್ಕೆಗಳಿಲ್ಲ, ಈ ಮೂಲಕ ತಕ್ಷಣವೇ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜೀನಾಮೆಯನ್ನು ನೀಡುತ್ತೇನೆ" ಎಂದು ಅವರು ಬರೆದಿದ್ದಾರೆ.
ಪಕ್ಷಕ್ಕೆ ರಾಜೀನಾಮೆ ನೀಡಿದ ಕೂಡಲೇ, ರಾಹುಲ್ ಗಾಂಧಿ ಪಕ್ಷದ ಸಮಿತಿಯಲ್ಲಿ ಉಪಾಧ್ಯಕ್ಷ (ವಿಪಿ) ಸ್ಥಾನವನ್ನು ವಹಿಸಿಕೊಂಡಾಗಿನಿಂದ ವಿಷಯಗಳು ಹದಗೆಟ್ಟಿವೆ ಹೀಗಾಗಿ ಕಾಂಗ್ರೆಸ್ ತೊರೆದಿದ್ದೇನೆ ಎಂದು ಖಾನ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ವಿಚಾರಗಳು ಯಾರಿಗೂ ಹೊಂದುವುದಿಲ್ಲ!
"ನಾನು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದೇನೆ... ರಾಹುಲ್ ಗಾಂಧಿ ಪಕ್ಷದ ಸಮಿತಿಯ ಉಪಾಧ್ಯಕ್ಷ (ವಿಪಿ) ಹುದ್ದೆಯನ್ನು ನಿಭಾಯಿಸಿದ ನಂತರ ವಿಷಯಗಳು ಬೇರೆಯದ್ದೇ ರೀತಿಯಾದವು. ಅವರು ತಮ್ಮದೇ ಆದ ವಿಭಿನ್ನ ಚಿಂತನೆಯನ್ನು ಹೊಂದಿದ್ದಾರೆ. ಇದು ಬ್ಲಾಕ್ ಮಟ್ಟದಿಂದ ಬೂತ್ ಮಟ್ಟದವರೆಗೆ ಯಾವುದೇ ಸದಸ್ಯರೊಂದಿಗೆ ಹೊಂದಿಕೆಯಾಗುವುದಿಲ್ಲ" ಎಂದು ಮಾಜಿ ಕಾಂಗ್ರೆಸ್ ಆರ್ಎಸ್ ಎಂಪಿ ಹೇಳಿದ್ದಾರೆ.
"ಹೀಗಾಗಿ ಕಾಂಗ್ರೆಸ್ ಪತನಕ್ಕೆ ಕಾರಣವಾಯಿತು. ದಶಕಗಳ ಕಾಲ ಪಕ್ಷವನ್ನು ಬಲಪಡಿಸಿದ ಪಕ್ಷದ ಹಿರಿಯ ಸದಸ್ಯರೂ ಈಗ ಪಕ್ಷ ತೊರೆಯುವ ಹಂತ ತಲುಪಿದೆ. ಹಿರಿಯ ಸದಸ್ಯರೊಂದಿಗೆ ಹೇಗೆ ವರ್ತಿಸಬೇಕು ಎಂದು ಅವರಿಗೆ ತಿಳಿದಿಲ್ಲ" ಎಂದು ಆರೋಪಿಸಿದ್ದಾರೆ.
ಇತ್ತ ಕಾಂಗ್ರೆಸ್ಗೆ ಹಿರಿಯ ನಾಯಕರ ರಾಜೀನಾಮೆ
ಇದಕ್ಕೂ ಮುನ್ನ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಪಕ್ಷದಲ್ಲಿ ಉಂಟಾಗುತ್ತಿರುವ ಭಿನ್ನಾಭಿಪ್ರಾಯಗಳ ಜೊತೆಗೆ ಕಾಂಗ್ರೆಸ್ ತನ್ನ 'ಭಾರತ್ ಜೋಡೋ ಯಾತ್ರೆ'ಗೆ ಸಜ್ಜಾಗುತ್ತಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರವನ್ನು ಮತ್ತೆ ಒಂದುಗೂಡಿಸುವ ಗುರಿಯೊಂದಿಗೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ 148 ದಿನಗಳ ಪಾದಯಾತ್ರೆ ನಡೆಯಲಿದ್ದು, ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.
ಇನ್ನು, ಭಾನುವಾರ ಮಧ್ಯಾಹ್ನ 3.30ಕ್ಕೆ ವರ್ಚುವಲ್ ಮೋಡ್ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಂತಿಮ ವೇಳಾಪಟ್ಟಿಯ ಚರ್ಚೆ, ಗುಲಾಂ ನಬಿ ಆಜಾದ್ ರಾಜೀನಾಮೆ ವಿಷಯಗಳನ್ನು ಚರ್ಚಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.