ತೆಲಂಗಾಣ: ಕೆಸಿಆರ್ ವಿರುದ್ಧ ಚುನಾವಣೆಗೆ ನಿಂತಿರುವ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ
ಹೈದರಾಬಾದ್, ನವೆಂಬರ್ 27: ತೆಲಂಗಾಣದಲ್ಲಿ ನಿನ್ನೆ ನಡೆದ ಹಠಾತ್ ಬೆಳವಣಿಗೆಯಲ್ಲಿ ಸಿಎಂ ಕೆ.ಚಂದ್ರಶೇಖರ್ ರಾವ್ ಎದುರು ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಆತ್ಮಹತ್ಯೆ ಯತ್ನ ಮಾಡಿದ್ದಾರೆ.
ಕೆ.ಚಂದ್ರಶೇಖರ್ ರಾವ್ ಎದುರು ಕಾಂಗ್ರೆಸ್ನ ವೋಂಟೇರು ಪ್ರತಾಪ್ ರೆಡ್ಡಿ ಅವರು ಗಜ್ವೇಲು ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ನಿನ್ನೆ ಮಧ್ಯರಾತ್ರಿ ಅವರ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಿನ್ನೆ ವೊಂಟೇರು ಪ್ರತಾಪ್ ರೆಡ್ಡಿ ಅವರ ಮನೆಯ ಮೇಲೆ ಪೊಲೀಸ್ ದಾಳಿ ನಡೆದಿತ್ತು. ಪ್ರತಾಪ್ ರೆಡ್ಡಿ ಅವರ ಮನೆಯಲ್ಲಿ ಹಣ ಹಂಚಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪ್ರತಾಪ್ ರೆಡ್ಡಿ ಆತ್ಮಹತ್ಯೆ ಪ್ರಯತ್ನ ನಡೆಸಿದ್ದಾರೆ.

ಬಲಂಗಾರ ವಲಯ ಪೊಲೀಸರು ಪ್ರತಾಪ್ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪ್ರತಾಪ್ ರೆಡ್ಡಿ ಬೆಂಬಲಿಗರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಪ್ರತಾಪ್ ರೆಡ್ಡಿ ಬೆಂಬಲಿಗರು ಪೊಲೀಸರ ವಿರುದ್ಧ ಹಾಗೂ ಕೆಸಿಆರ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಪ್ರತಾಪ್ ರೆಡ್ಡಿ ವಿರುದ್ಧ ಪೊಲೀಸರು ಆತ್ಮಹತ್ಯೆ ಪ್ರಯತ್ನ ಕೇಸು ದಾಖಲಿಸಿದ್ದಾರೆ. ಪ್ರತಾಪ್ ರೆಡ್ಡಿ ಮನೆಯಲ್ಲಿ ಅಕ್ರಮ ಮದ್ಯವಾಗಲಿ ಹಣವಾಗಲಿ ದೊರೆತಿಲ್ಲವೆಂದು ಪೊಲೀಸರು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಇದೇ ಪ್ರತಾಪ್ ರೆಡ್ಡಿ ಅವರು ತಮ್ಮ ಚುನಾವಣಾ ಭಾಷಣದಲ್ಲಿ ಚಂದ್ರಶೇಖರ್ ರಾವ್ ಅವರ ತೋಟದ ಮನೆಯ ಮೇಲೆ ದಾಳಿ ಮಾಡಿ ಅಲ್ಲಿ ಅಕ್ರಮ ಹಣ, ಮದ್ಯ ಹಂಚಲಾಗುತ್ತಿದೆ ಎಂದು ಹೇಳಿದ್ದರು, ಆದರೆ ಈಗ ಅವರದ್ದೇ ಮನೆಯ ಮೇಲೆ ದಾಳಿ ನಡೆದಿದೆ.












Click it and Unblock the Notifications