ಅಕ್ರಮ ಆಸ್ತಿ ಸಂಪಾದಿಸಿ ಸಿಕ್ಕಿಬಿದ್ದ ತೆಲಂಗಾಣ ನ್ಯಾಯಾಧೀಶ
ಹೈದರಾಬಾದ್, ನವೆಂಬರ್ 15: ಮೂರು ಕೋಟಿ ರೂ. ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ತೆಲಂಗಾಣದ ನ್ಯಾಯಾಧೀಶರೊಬ್ಬರನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭ್ರಷ್ಟಾಚಾರ ನಿಗ್ರಹ ಬ್ಯೂರೋದ (ಎಸಿಬಿ) ತಂಡ ಮಂಗಳವಾರ ನ್ಯಾಯಾಧೀಶರ ಮನೆ ಮತ್ತು ಇತರೆ ಆಸ್ತಿಗಳ ಮೇಲೆ ದಾಳಿ ನಡೆಸಿತ್ತು.
ಬಂಧಿತ ನ್ಯಾಯಾಧೀಶರನ್ನು ಚಂಚಲಗುಡ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ರಂಗ ರೆಡ್ಡಿ ಜಿಲ್ಲೆಯ 14ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವೈದ್ಯ ವರ ಪ್ರಸಾದ್ ಅವರ ಹೈದರಾಬಾದ್ನಲ್ಲಿರುವ ಕೆಲವು ನಿವಾಸಗಳು, ಕೊಂಡಾಪುರದಲ್ಲಿರುವ ಒಂದು ಮತ್ತು ಸಿರ್ಸಿಲಾ ಜಿಲ್ಲೆಯಲ್ಲಿರುವ ಮೂರು ಸ್ಥಳಗಳ ಮೇಲೆ ಮಾತ್ರವಲ್ಲದೆ, ಮಹಾರಾಷ್ಟ್ರದಲ್ಲಿ ಎರಡು ಸ್ಥಳಗಳ ಮೇಲೆಯೂ ದಾಳಿ ನಡೆಸಿದ್ದಾಗಿ ಎಸಿಬಿ ತಿಳಿಸಿದೆ.

ಹೈದರಾಬಾದ್ ಹೈಕೋರ್ಟ್ನ ನಿರ್ದೇಶನದಂತೆ ಎಸಿಬಿ ಈ ದಾಳಿ ನಡೆಸಿತ್ತು. ವರ ಪ್ರಸಾದ್ ಅವರ ವಿರುದ್ಧ ಬಂದ ದೂರಿನ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆಗೆ ಹೈಕೋರ್ಟ್ ಸೂಚನೆ ನೀಡಿತ್ತು.
ಸುಮಾರು 3 ಕೋಟಿ ರೂ ಅಕ್ರಮ ಹಣ ಪತ್ತೆಯಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.
ಹಾಲಿ ನ್ಯಾಯಾಧೀಶರ ಮನೆ ಮೇಲೆ ತೆಲಂಗಾಣದಲ್ಲಿ ದಾಳಿ ನಡೆಯುತ್ತಿರುವುದು ಇದು ಮೊದಲೇನಲ್ಲ. ಏಪ್ರಿಲ್ನಲ್ಲಿ ಬಹಬೂಬನಗರದ ಹಿರಿಯ ನ್ಯಾಯಾಧೀಶರೊಬ್ಬರನ್ನು ವಿಶೇಷ ಕೋರ್ಟ್ನ ಅಧಿಕಾರ ಸ್ವೀಕರಿಸಿದ ಒಂದು ದಿನದ ಒಳಗೇ ಭ್ರಷ್ಟಾಚಾರ ಆರೋಪದಡಿ ಅಮಾನತುಗೊಳಿಸಲಾಗಿತ್ತು.
ಅದೇ ತಿಂಗಳು ಮೊದಲ ಹೆಚ್ಚುವರಿ ಜೂನಿಯರ್ ಸಿವಿಲ್ ನ್ಯಾಯಾಧೀಶ ಎಸ್. ಮಧು ಎಂಬುವವರನ್ನು ಎಸಿಬಿ ಬಂಧಿಸಿತ್ತು.












Click it and Unblock the Notifications