ಪಿಎಂ ಕುರ್ಚಿ ಮೇಲೆ ಕೆಸಿಆರ್ ಕಣ್ಣು: ರಾಷ್ಟ್ರೀಯ ಪಾರ್ಟಿ ಕಟ್ಟಲು ಕೆಸಿಅರ್ ತಯಾರಿ!
ನವದೆಹಲಿ, ಜೂ. 13: ಪ್ರಧಾನಿ ಹುದ್ದೆ ಮೇಲೆ ಕಣ್ಣು ಇಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ರಾಷ್ಟ್ರ ಮಟ್ಟದ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಹೊಸ ಪಾರ್ಟಿಗೆ ಭಾರತ ರಾಷ್ಟ್ರೀಯ ಸಮಿತಿ ಎಂದು ಹೆಸರಿಡಲು ಚಿಂತನೆ ನಡೆಸಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ತೃತೀಯ ಶಕ್ತಿಯ ರಾಜಕೀಯ ಬಣ ಇಲ್ಲ. ಹೀಗಾಗಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವನ್ನೇ ಭಾರತ ರಾಷ್ಟ್ರ ಸಮಿತಿಯನ್ನಾಗಿ ಮಾಡುವುದು. ಈ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ತೃತೀಯ ಶಕ್ತಿಯನ್ನು ಬಲಗೊಳಿಸುವ ಚಿಂತನೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೇ ವಿಚಾರವಾಗಿ ಸಮಾನ ಮನಸ್ಕ ಹಿರಿಯ ರಾಜಕಾರಣಿಗಳ ಜತೆ ಸಮಾಲೋಚನೆ ಮಾಡಿರುವ ಕೆ. ಚಂದ್ರಶೇಖರ ರಾವ್ ಇತ್ತೀಚೆಗೆ ಕರ್ನಾಟಕಕ್ಕೆ ಆಗಮಿಸಿದ್ದರು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದರು. ಕೆಸಿಆರ್ ಕರ್ನಾಟಕ ಭೇಟಿಯ ಉದ್ದೇಶ ಕೂಡ ರಾಷ್ಟ್ರ ಮಟ್ಟದಲ್ಲಿ ತೃತೀಯ ಶಕ್ತಿಯನ್ನು ಗಟ್ಟಿಗಳಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿಗಳ ಮುಂದೆ ಪ್ರಸ್ತಾಪವಿಟ್ಟು ಚರ್ಚೆ ನಡೆಸಿದ್ದಾರೆ ಎಂಬ ಮಾತು ಇದೀಗ ಕೇಳಿ ಬರುತ್ತಿದೆ.
ಟಿಆರ್ಎಸ್ ಅನ್ನು ರಾಷ್ಟ್ರ ಮಟ್ಟದ ತೃತೀಯ ಶಕ್ತಿಯನ್ನಾಗಿ ಘೋಷಣೆ ಮಾಡುವ ಸಂಬಂಧ ಕೆಸಿಆರ್ ಜೂ. 19 ರಂದು ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಟಿಆರ್ಎಸ್ ಬಿಆರ್ಎಸ್ ಆಗಿ ಪರಿವರ್ತನೆಯಾಗಲಿದ್ದು, ರಾಷ್ಟ್ರ ರಾಜಕಾರಣದಲ್ಲಿ ಚಂದ್ರಶೇಖರರಾವ್ ಸದ್ದು ಮಾಡಲಿದ್ದಾರೆ.
ಚುನಾವಣಾ ಆಯೋಗಕ್ಕೆ ನೋಂದಣಿ
ಜೂನ್ 19ರ ನಂತರ ಭಾರತ ರಾಷ್ಟ್ರೀಯ ಸಮಿತಿಯನ್ನು ಕೇಂದ್ರ ಚುನಾವಣಾ ಆಯೋಗದ ಮುಂದೆ ನೋಂದಣಿ ಮಾಡಲಿದ್ದಾರೆ. ಜೂನ್ ಮಾಸಂತ್ಯಕ್ಕೆ ದೆಹಲಿಯಲ್ಲಿ ರಾಷ್ಟ್ರೀಯ ಪಾರ್ಟಿಯನ್ನು ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಸಿಂಬಲ್ ಈಗಿರುವುದು ಕಾರ್. ಬಿಆರ್ ಎಸ್ ರಾಷ್ಟ್ರೀಯ ಪಕ್ಷದ ಚಿಹ್ನೆಯನ್ನು ಅದನ್ನೇ ಮಾಡಲು ಕೆಸಿಆರ್ ನಿರ್ಧರಿಸಿದ್ದಾರೆ. ಅಧಿಕೃತ ಘೋಷಣೆ ಬಳಿಕ ದೆಹಲಿಯಲ್ಲಿ ಪಕ್ಷದ ಕೇಂದ್ರ ಕಚೇರಿ ಸ್ಥಾಪನೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಧಾನಿ ಹುದ್ದೆ ಮೇಲೆ ಕಣ್ಣು
ಪ್ರಧಾನಿ ಹುದ್ದೆ ಮೇಲೆ ಕಣ್ಣು ಇಟ್ಟಿರುವ ಕೆಸಿಆರ್ ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಮಾತುಗಳನ್ನು ಆಡಿದ್ದಾರೆ. ಭವಿಷ್ಯದ ರಾಷ್ಟ್ರ ರಾಜಕಾರಣದ ಆಗು ಹೋಗುಗಳ ಬಗ್ಗೆ ತಮ್ಮ ಆಪ್ತರ ಬಳಿ ಕೆಸಿಆರ್ ನಿರಂತರವಾಗಿ ಚರ್ಚೆ ನಡೆಸಿದ್ದಾರೆ. ಪಕ್ಷದ ಶಾಸಕರ ಸಲಹೆ ಮೇರೆಗೆ ಕೆಸಿಆರ್ ಪಾರ್ಟಿಯನ್ನು ರಾಷ್ಟ್ರ ಮಟ್ಟದಲ್ಲಿ ಬಿಆರ್ಎಸ್ ಅನ್ನು ಕಟ್ಟಲು ನಿರ್ಧರಿಸಿದ್ದಾರೆ.
ದೇಶ ರಾಜಕೀಯದಲ್ಲಿ ಪಲ್ಲಟ
ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗ ಕಟ್ಟುವ ಕನಸಿನ ಜತೆ ಕೆಸಿಆರ್ ಇತ್ತೀಚೆಗೆ ಹಲವು ರಾಜಕೀಯ ಮುಖಂಡರನ್ನು ಭೇಟಿ ಮಾಡಿದ್ದರು. ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್, ಸಮಾಜವಾದಿ ಪಾರ್ಟಿ ಅಖಿಲೇಶ್ ಯಾದವ್, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ರಾಜಕೀಯ ಆಗು ಹೋಗುಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದರು. ಆ ಬಳಿಕ ದೇಶದ ರಾಜಕಾರಣದಲ್ಲಿ ಪಲ್ಲಟವಾಗಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದರು.
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಆಡಳಿತ ರೂಢ ಬಿಜೆಪಿಗೆ ಪರ್ಯಾಯವಾಗಿ ಮೂರನೇ ರಾಷ್ಟ್ರೀಯ ಪಕ್ಷವನ್ನು ಕಟ್ಟಲು ಕೆಸಿಆರ್ ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ತೃತೀಯ ರಂಗವನ್ನು ಕಟ್ಟುವ ಕೆಲಸಕ್ಕೆ ಕೆಸಿಆರ್ ತಯಾರಿ ನಡೆಸಿದ್ದಾರೆ .
ಮಮತಾ ಬ್ಯಾನರ್ಜಿ ಭೇಟಿಯಾಗಿದ್ದರು
ಇನ್ನು ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗವನ್ನು ಗಟ್ಟಿಗೊಳಿಸುವ ವಿಚಾರವಾಗಿ ಕೆಸಿಅರ್ ಪಶ್ಚಿಮ ಬಂಗಾಳದ ಸಿಎಂ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಹಿಂದೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಹಾಗೂ ಆಂಧ್ರ ಪ್ರದೇಶದ ಸಿಎಂ ಜಗನ್ ಅವರನ್ನು ಕೂಡ ಸಂಪರ್ಕಿಸಿದ್ದರು. ಆದರೆ ಎರಡೂ ನಾಯಕರು ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಕೊಡುವ ಇಚ್ಛೆ ವ್ಯಕ್ತಪಡಿಸಿದ್ದರು.
ಅಂತೂ ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗವನ್ನು ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಿರುವ ಕೆಸಿಆರ್ ಅತಿ ಶೀಘ್ರದಲ್ಲಿಯೇ ರಾಷ್ಟ್ರೀಯ ಪಾರ್ಟಿ ಘೋಷಣೆ ಮಾಡಲಿದೆ. ತೃತೀಯ ರಂಗದಲ್ಲಿ ನಿರೀಕ್ಷಿತ ಬೆಳವಣಿಗೆ ಆಗಲಿಲ್ಲ. ಹೀಗಾಗಿ ಕೆಸಿಆರ್ ರಾಷ್ಟ್ರಮಟ್ಟದಲ್ಲಿ ಪಕ್ಷ ಕಟ್ಟಿ ಎಷ್ಟರ ಮಟ್ಟಿಗೆ ಯಶಸ್ಸು ಗಳಿಸುತ್ತಾರೆ? ಎಂಬುದನ್ನು ಮುಂದಿನ ಲೋಕಸಭಾ ಚುನಾವಣೆ ನಿರ್ಧರಿಸಲಿದೆ.
Recommended Video