ತೆಲಂಗಾಣ ಚುನಾವಣೆ: ರಾಜಕಾರಣಿಗಳದ್ದು ಒಂದು ಚಿಂತೆ, ನಿರ್ಮಾಪಕರದ್ದು ಇನ್ನೊಂದು
ಜಿದ್ದಾಜಿದ್ದಿನ ತೆಲಂಗಾಣ ಅಸೆಂಬ್ಲಿಗೆ ಇನ್ನೇನು ಎರಡು ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ, ಟಿಆರ್ಎಸ್, ಎಂಐಎಂ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ಮುಗಿಲುಮುಟ್ಟಿದೆ.
ಆದರೆ, ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ಅಪರೂಪದ ಸಮಸ್ಯೆಯೊಂದು ಎದುರಾಗಿದೆ. ಅದೇನಂದರೆ, ಚುನಾವಣೆ ನಡೆಯುವ ಡಿಸೆಂಬರ್ ಏಳು, ಶುಕ್ರವಾರ, ಸಾಮಾನ್ಯವಾಗಿ. ಚಿತ್ರರಂಗಕ್ಕೂ ಅದು ಶುಭದಿನ.
ಅಸೆಂಬ್ಲಿ ಚುನಾವಣೆಯ ದಿನ ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ ಏಳು ತೆಲುಗು ಚಿತ್ರಗಳು ಬಿಡುಗಡೆಗೊಳ್ಳುತ್ತಿದೆ. ಹಾಗಾಗಿ, ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಏನಾಗುತ್ತೋ ಏನು ಎನ್ನುವ ಚಿಂತೆ, ನಿರ್ಮಾಪಕರು, ವಿತರಕರಿಗೆ ಕಾಡುತ್ತಿದೆ.
ಒಂದೆಡೆ, ಮುಂದಿನ ಐದು ವರ್ಷ, ತಮ್ಮನ್ನಾಳುವ ಸರಕಾರವನ್ನು ನಿರ್ಧರಿಸುವ ಮಹತ್ವದ ಜವಾಬ್ದಾರಿ ಮತದಾರರ ಮೇಲಿದೆ. ಇನ್ನೊಂದೆಡೆ, ಕೋಟ್ಯಾಂತರ ರೂಪಾಯಿ ಬಂಡವಾಳ ಸುರಿದಿರುವ ನಿರ್ಮಾಪಕರಿಗೆ ಮೊದಲ ದಿನದ ಕಲೆಕ್ಷನ್ ಚಿಂತೆ.
ಬಿಡುಗಡೆಯಾಗುತ್ತಿರುವ ಏಳು ಚಿತ್ರಗಳಲ್ಲಿ ನಾಲ್ಕು ಚಿತ್ರಗಳು, ಈಗಾಗಲೇ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ. ಅದರಲ್ಲೊಂದು ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಚುನಾವಣೆಯ ನಿಮಿತ್ತ ಸಾರ್ವತ್ರಿಕ ರಜೆಯಿರುವುದರಿಂದ, ಬಹುತೇಕ ಮೂರು ದಿನಗಳ ವೀಕೆಂಡ್ ಬೇರೆ..

ಸಿನಿಮಾ ಮೇಲಿನ ಹುಚ್ಚು ಅಥವಾ ಅಭಿಮಾನ ಇನ್ನಿಲ್ಲದಂತದ್ದು
ತೆಲುಗು ಭಾಷಿಕರಿಗೆ ಸಿನಿಮಾ ಮೇಲಿನ ಹುಚ್ಚು ಅಥವಾ ಅಭಿಮಾನ ಇನ್ನಿಲ್ಲದಂತದ್ದು. ತಾವು ಆರಾಧಿಸುವ ಹೀರೋಗಳ ಚಿತ್ರದ ಬಗ್ಗೆ ಅದೇನೇ ಫಸ್ಟ್ ಡೇ ಫಸ್ಟ್ ಶೋ ರಿಪೋರ್ಟ್ ಬರಲಿ, ಚಿತ್ರವನ್ನೊಮ್ಮೆ ನೋಡುವ ಪರಿಪಾಠ ಮಾಡಿಕೊಂಡಿರುತ್ತಾರೆ. ಹಾಗಾಗಿಯೇ, ತೆಲುಗು ಚಿತ್ರೋದ್ಯಮ ಈ ಮಟ್ಟಕ್ಕೆ ಬೆಳೆದು ನಿಂತಿರುವುದು..

ಮತದಾರ ಊರಿಗೆ ಹೋದರೆ ಎನ್ನುವ ಚಿಂತೆ ನಿರ್ಮಾಪಕರಿಗೆ
ತೆಲುಗು ಭಾಷಿಗರ ಈ ಸಿನಿಮಾ ಪ್ರೀತಿಯಿಂದಲೇ, ಅಲ್ಲಿನ ಚಿತ್ರೋದ್ಯಮದಲ್ಲಿ ನಿರ್ಮಾಪಕರು ಹುಟ್ಟುತ್ತಲೇ ಇರುತ್ತಾರೆ. ಯಾವುದೇ ಸಿನಿಮಾಗೆ, ನಿರ್ಮಾಪಕರಿಗೆ ಮೊದಲ ದಿನ ಮತ್ತು ವಾರಾಂತ್ಯದ ಕಲೆಕ್ಷನ್ ಬಹುಮುಖ್ಯ. ಹಾಗಾಗಿ, ಚುನಾವಣೆಯ ದಿನ ಮತದಾರ, ತಮ್ಮಮ್ಮ ಊರಿಗೆ ಹೋದರೆ ಎನ್ನುವ ಚಿಂತೆ ನಿರ್ಮಾಪಕರಿಗೆ ಮತ್ತು ವಿತರಕರಿಗೆ ಕಾಡುತ್ತಿದೆ.

ಏಳು ಸಿನಿಮಾ ಬಿಡುಗಡೆಯಾಗುತ್ತಿರುವ ವಿಷಯ
ಚಿತ್ರೋದ್ಯಮದವರಿಗೆ ಏನು ಚಿಂತೆ ಕಾಡುತ್ತಿದೆಯೋ, ಅದೇ ರೀತಿ ಎಲ್ಲಾ ಪಕ್ಷಗಳ ಮುಖಂಡರಿಗೂ, ಏಳು ಸಿನಿಮಾ ಬಿಡುಗಡೆಯಾಗುತ್ತಿರುವ ವಿಷಯ ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದೆ. ಚಿತ್ರ ನೋಡಲೆಂದು ಜನ ನಗರದಲ್ಲೇ ಉಳಿದುಬಿಟ್ಟರೆ, ಮತದಾನ ಮಾಡುವವರು ಯಾರು? ಅದೆಷ್ಟೋ ಜನರ, ವೋಟ್, ಗ್ರಾಮೀಣ ಪ್ರದೇಶದಲ್ಲಿ ಇರುವುದರಿಂದ, ಚಿತ್ರ ನೋಡಲೆಂದು ನಗರದಲ್ಲೇ ಉಳಿದುಬಿಟ್ಟರೆ ಎನ್ನುವ ಚಿಂತೆ ರಾಜಕಾರಣಿಗಳದ್ದು.

ಹೈದರಾಬಾದ್ ಬಿರಿಯಾನಿ, ಕಲ್ಯಾಣಿ ಬಿರಿಯಾನಿ
ಬಲ್ಲ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ವೋಟ್ ಜೊತೆ ನೋಟು, ಹೈದರಾಬಾದ್ ಬಿರಿಯಾನಿ, ಕಲ್ಯಾಣಿ ಬಿರಿಯಾನಿ, ಹೆಂಡ, ಜೊತೆಗೆ, ಮತದಾರ ನೋಡಲು ಬಯಸುವ ಸಿನಿಮಾ ಟಿಕೆಟ್ ಅನ್ನೂ ನೀಡಲು, ಪ್ರಮುಖ ಪಕ್ಷಗಳು ಮುಂದಾಗುವ ಸಾಧ್ಯತೆಯಿದೆ. ವೋಟಿಗಾಗಿ ಬಹುಕೃತ ವೇಷಂ.

ಡಾಲಿ ಧನಂಜಯ್ ಅಭಿನಯದ 'ಭೈರವ ಗೀತಂ
ಬಿಡುಗಡೆಯಾಗುತ್ತಿರುವ ಏಳು ಸಿನಿಮಾಗಳೆಂದರೆ, ನಮ್ಮ ಡಾಲಿ ಧನಂಜಯ್ ಅಭಿನಯದ 'ಭೈರವ ಗೀತಂ', ತಮನ್ನಾ ಅಭಿನಯದ 'ನೆಕ್ಸ್ಟ್ ಎಂತಿ', ಬೆಲ್ಲಕೊಂಡ ಬ್ಯಾನರಿನ 'ಕವಚಂ' ಜೊತೆಗೆ, ಸುವರ್ಣ ಸುಂದರಿ, ಶುಭಲೇಖಾ+, ಇದಂ ಜಗತ್ ಮತ್ತು ಬ್ಲಫ್ ಮಾಸ್ಟರ್ ಚಿತ್ರಗಳು, ಇದೇ ಡಿಸೆಂಬರ್ ಏಳರಂದು ಬಿಡುಗಡೆಯಾಗಲಿದೆ.












Click it and Unblock the Notifications