ಚಂದ್ರಬಾಬು ನಾಯ್ಡು ಉರುಳಿಸುತ್ತಿರುವ ರಾಜಕೀಯ ದಾಳಕ್ಕೆ ಕೆಸಿಆರ್ ತಬ್ಬಿಬ್ಬು
ಅವಧಿಗೂ ಮುನ್ನವೇ ಅಸೆಂಬ್ಲಿಯನ್ನು ವಿಸರ್ಜಿಸಿದಾಗ, ಮತ್ತೆ ಚುನಾವಣೆ ಗೆದ್ದಾಯ್ತು ಎನ್ನುವ ಹಾಗೆ ಬೀಗುತ್ತಿದ್ದ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿಯ (TRS) ಶಾಸಕರು, ಕಾರ್ಯಕರ್ತರಿಗೆ, ಬದಲಾದ ರಾಜಕೀಯ ಚಿತ್ರಣ ದಿನದಿಂದ ದಿನಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ.
ಎನ್ಡಿಎ ಮೈತ್ರಿಕೂಟದಿಂದ ಹೊರಬಂದ ನಂತರ, ರಾಷ್ಟ್ರ ನಾಯಕರಾಗುವತ್ತ ಸಾಗುವ ವಿಚಾರದಲ್ಲಿ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ನಿರೀಕ್ಷಿತ ಯಶಸ್ಸು ಲಭಿಸದೇ ಇದ್ದರೂ, ತೆಲಂಗಾಣ ಅಸೆಂಬ್ಲಿಯ ಚುನಾವಣೆಯಲ್ಲಿ ಅವರಿಡುತ್ತಿರುವ ಒಂದೊಂದು ಹೆಜ್ಜೆ, ಕೆಸಿಆರ್ ಗೆ ಹಿನ್ನಡೆಯಾಗುತ್ತಿದೆ.
ಶ್ರೀಮಂತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಸ್ತಿ ಎಷ್ಟು: ಚಿತ್ರ ವಿವರ
ಅಸೆಂಬ್ಲಿ ವಿಸರ್ಜನೆಯಾದಾಗ, ನೂರಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು, ಐತಿಹಾಸಿಕ ವಿಜಯವನ್ನು ಸಂಪಾದಿಸುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದ ಚಂದ್ರಶೇಖರ್ ರಾವ್ & ಟೀಂ, ಈಗ ಸರಳ ಬಹುಮತದತ್ತ ಕಾರ್ಯತಂತ್ರ ರೂಪಿಸುತ್ತಿದೆ ಎನ್ನುವ ಮಾಹಿತಿ, ಹೈದರಾಬಾದ್ ನಿಂದ ಲಭ್ಯವಾಗುತ್ತಿದೆ.
ಕಳೆದ ಚುನಾವಣೆಯಲ್ಲಿ (2014) ಹದಿನೈದು ಕ್ಷೇತ್ರದಲ್ಲಿ ಗೆದ್ದಿದ್ದ ತೆಲುಗುದೇಶಂ, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಕೇವಲ ಹದಿನಾಲ್ಕು ಕ್ಷೇತ್ರದಲ್ಲಿ. ಆದರೂ, ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಂಡು ಟಿಡಿಪಿ ಇಡುತ್ತಿರುವ ರಾಜಕೀಯ ಹೆಜ್ಜೆ, ಟಿ ಆರ್ ಎಸ್ ಮುಖಂಡರ ನಿದ್ದೆಗೆಡಿಸಿದೆ.
ತೆಲಂಗಾಣ ಚುನಾವಣೆ : ಕೆಸಿಆರ್ಗೆ ಎದುರಾಯಿತು ದೊಡ್ಡ ಸವಾಲು!
ಆಡಳಿತ ವಿರೋಧಿ ಅಲೆ ಇಲ್ಲದಿದ್ದರೂ, ಕಾಂಗ್ರೆಸ್ ಜೊತೆ ಮಾಡಿಕೊಂಡಿರುವ ಮೈತ್ರಿಯಿಂದಾಗಿ, ತಮ್ಮ ಪ್ರಾಭಲ್ಯದ ಕ್ಷೇತ್ರಗಳಲ್ಲೂ ತೀವ್ರ ಪೈಪೋಟಿಯನ್ನು ಚಂದ್ರಶೇಖರ್ ರಾವ್ ಎದುರಿಸಬೇಕಾಗಿದೆ. ಸರಳ ಬಹುಮತಗಳಿಸಲು ಬೇಕಾಗಿರುವ ಸಂಖ್ಯೆ 60. ಡಿಸೆಂಬರ್ 7ರಂದು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ.
ಸರಳ ಬಹುಮತ ಪಡೆದುಕೊಂಡಿದ್ದ ಚಂದ್ರಶೇಖರ್ ರಾವ್
ಅಖಂಡ ಆಂಧ್ರದ ವಿಭಜನೆಯ ನಂತರ, ನಡೆದ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ, ಬಿಜೆಪಿ ಜೊತೆ ಸೇರಿ ಚುನಾವಣಾ ಕಣಕ್ಕಿಳಿದಿತ್ತು. ಕಳೆದ ಬಾರಿ ಟಿ ಆರ್ ಎಸ್, ಟಿಡಿಪಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ, ಚಂದ್ರಶೇಖರ್ ರಾವ್ ಸರಳ ಬಹುಮತದೊಂದಿಗೆ ಗೆಲುವು ಸಾಧಿಸಿದ್ದರು. ಕಳೆದ ಚುನಾವಣೆಯ (2014) ಫಲಿತಾಂಶ ಇಂತಿದೆ:
ಒಟ್ಟು
ಸ್ಥಾನಗಳು
-
119
ಟಿ
ಆರ್
ಎಸ್
-
63
ಕಾಂಗ್ರೆಸ್
-
20
ಟಿಡಿಪಿ/ಬಿಜೆಪಿ
-
21
ಎಂಐಎಂ
-
7
ಇತರರು
-
8
ವೈಎಸ್ ಆರ್ ಕಾಂಗ್ರೆಸ್, ಜನ ಸೇನಾ ಪಾರ್ಟಿ ತೆಲಂಗಾಣ ಸ್ಪರ್ಧೆಯಿಲ್ಲ!
ಪ್ರಜಾಕುಟುಮಿ ಹೆಸರಿನಲ್ಲಿ ಮೈತ್ರಿಕೂಟ
ಪ್ರಜಾಕುಟುಮಿ ಹೆಸರಿನಲ್ಲಿ ಮೈತ್ರಿಕೂಟ ರಚಿಸಲು ಯಶಸ್ವಿಯಾದ ನಂತರ ಚಂದ್ರಬಾಬು ನಾಯ್ಡು, ಕಾಂಗ್ರೆಸ್ ಜೊತೆ ಯಾವುದೇ ಚೌಕಾಸಿ ಮಾಡದೆ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ತೆಲುಗುದೇಶಂ ಪ್ರಾಭಲ್ಯವಿರುವ ಕ್ಷೇತ್ರವನ್ನೂ ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತಿರುವ ಚಂದ್ರಶೇಖರ್ ರಾವ್ ಗೆ ಸರಿಯಾದ ಸಡ್ಡನ್ನು ಹೊಡೆಯಲು ಮುಂದಾಗಿದ್ದಾರೆ. ಶತಾಯಗತಾಯು ಪ್ರಜಾಕುಟುಮಿ ಮೈತ್ರಿಕೂಟ ಗೆಲ್ಲಲೇ ಬೇಕೆಂದು ತನ್ನ ಕಾರ್ಯಕರ್ತರಿಗೆ ಸೂಚಿಸಿರುವ ನಾಯ್ಡು, ನಿಮ್ಮ ಅನುಕೂಲಕ್ಕಾಗಿ ಮೈತ್ರಿಕೂಟಕ್ಕೆ ಮೋಸ ಮಾಡಬೇಡಿ ಎನ್ನುವ ಮನವಿಯನ್ನೂ ಮಾಡಿದ್ದಾರೆ.
ಕಾಂಗ್ರೆಸ್ ಪ್ರಕಾರ ಕೆ. ಚಂದ್ರಶೇಖರ್ ರಾವ್ ಭಾರತದ 'ಚೋಟಾ ಮೋದಿ!'
ನಂದಮೂರಿ ಹರಿಕೃಷ್ಣ ಅವರ ಮಗಳು ನಂದಮೂರಿ ಸುಹಾಸಿನಿ
ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಿಂಪಥಿ ಕಾರ್ಡನ್ನೂ ಪ್ರಯೋಗಿಸಿರುವ ಚಂದ್ರಬಾಬು, ರಂಗಾರೆಡ್ಡಿ ಜಿಲ್ಲೆಯ, ಕೂಕಟಪಳ್ಳಿ ಕ್ಷೇತ್ರದಿಂದ, ಇತ್ತೀಚೆಗೆ ನಿಧನ ಹೊಂದಿದ ನಂದಮೂರಿ ಹರಿಕೃಷ್ಣ ಅವರ ಮಗಳು ನಂದಮೂರಿ ಸುಹಾಸಿನಿಗೆ ಟಿಕೆಟ್ ನೀಡಿದ್ದಾರೆ. ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಂದಮೂರಿ ಕುಟುಂಬ ಉತ್ತಮ ಹೆಸರನ್ನು ಹೊಂದಿದೆ. ಕಳೆದ ಚುನಾವಣೆಯಲ್ಲಿ ಟಿಡಿಪಿ-ಬಿಜೆಪಿ ಮೈತ್ರಿಕೂಟ, ಹದಿನಾಲ್ಕು ಕ್ಷೇತ್ರಗಳಲ್ಲಿ, ಎಂಟು ಕ್ಷೇತ್ರದಲ್ಲಿ ಜಯಗಳಿಸಿತ್ತು.
ಪಕ್ಷ ತೊರೆದ ಟಿ ಆರ್ ಎಸ್ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ
ಚಂದ್ರಬಾಬು ನಾಯ್ಡು ಅವರ ರಾಜಕೀಯ ದಾಳ ಒಂದು ಕಡೆಯಾದರೆ, ಟಿ ಆರ್ ಎಸ್ ಪಕ್ಷದ ಪ್ರಮುಖ ಮತ್ತು ಪ್ರಭಾವೀ ಮುಖಂಡ, ಚೆವೆಲ್ಲಾ ಕ್ಷೇತ್ರದ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ಪಕ್ಷವನ್ನು ತೊರೆದಿದ್ದಾರೆ. ತಮ್ಮನ್ನು ಕಡೆಗಣಿಸಿದ್ದಕ್ಕಾಗಿ ಪಕ್ಷವನ್ನು ಬಿಡುತ್ತಿದ್ದೇನೆಂದು ರೆಡ್ಡಿ ಹೇಳಿದ್ದರೂ, ಅವರು ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸುವ ಸಾಧ್ಯತೆ ದಟ್ಟವಾಗಿದೆ. ರಾಹುಲ್ ಗಾಂಧಿ ಜೊತೆ ಕೈಕುಲುಕಿ ಬಂದಿದ್ದಾಗಿದೆ. ಇವರು ಪ್ರತಿನಿಧಿಸುವ ಚೆವೆಲ್ಲಾ ಜಿಲ್ಲಾ ವ್ಯಾಪ್ತಿಯಲ್ಲಿ ಹದಿನಾಲ್ಕು ಅಸೆಂಬ್ಲಿ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ಟಿಡಿಪಿ-ಬಿಜೆಪಿ ಮೈತ್ರಿಕೂಟ, ಎಂಟು ಕ್ಷೇತ್ರದಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಗೆದ್ದಿದ್ದು ಎರಡೇ ಸ್ಥಾನ. ಹಾಗಾಗಿ, ಟಿಡಿಪಿ-ಕಾಂಗ್ರೆಸ್ ಮೈತ್ರಿಯ ಮೂಲಕ, ಇಲ್ಲೂ ಚಂದ್ರಬಾಬು, ಬಿಜೆಪಿ ಮತ್ತು ಟಿ ಆರ್ ಎಸ್ ಅನ್ನು ಮಣಿಸಲು ತಂತ್ರ ರೂಪಿಸಿದ್ದಾರೆ.
ಹಿಂದುಳಿದ ವರ್ಗದ ಪ್ರಭಾವೀ ನಾಯಕ ಆರ್ ಕೃಷ್ಣಯ್ಯ
ಇದೂ ಸಾಲದು ಎನ್ನುವಂತೆ, ರಾಜ್ಯದ ಹಿಂದುಳಿದ ವರ್ಗದ ಪ್ರಭಾವೀ ನಾಯಕ ಆರ್ ಕೃಷ್ಣಯ್ಯ ಕೂಡಾ ಟಿಆರ್ಎಸ್ ತೊರೆದಿರುವುದು, ಚಂದ್ರಶೇಖರ್ ರಾವ್ ಗೆ ಆದ ಬಹುದೊಡ್ಡ ಹಿನ್ನಡೆ. ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಚುನಾವಣೆಯಲ್ಲಿ ಕೃಷ್ಣಯ್ಯ ಎಲ್ ಬಿ ನಗರ ಕ್ಷೇತ್ರದಿಂದ ಟಿಡಿಪಿ-ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಹಾಗಾಗಿ, ಚಂದ್ರಶೇಖರ್ ರಾವ್ ಅವರಿಗೆ ಇದು ಇನ್ನೊಂದು ದೊಡ್ಡ ಹೊಡೆತ ಎಂದೇ ಹೇಳಲಾಗುತ್ತಿದೆ.