ಕೆಸಿಆರ್ ಬಳಿ ಹಣ ಪಡೆಯಿರಿ, ಬಿಜೆಪಿಗೆ ಓಟ್ ಹಾಕಿ: ಬಂಡಿ ಸಂಜಯ್
ಹೈದರಾಬಾದ್, ಏಪ್ರಿಲ್ 25 : ತೆಲಂಗಾಣದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇದೆ. ಈ ಹಿನ್ನಲೆ ಈಗಿನಿಂದಲೇ ರಾಜಕೀಯ ಪಕ್ಷಗಳ ಕೆಸರೆಚಾಟ ಆರಂಭವಾಗಿದೆ. ತೆಲಂಗಾಣದ ಬಿಜೆಪಿ ನಾಯಕ ಬಂಡಿ ಸಂಜಯ್ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಚಂದ್ರಶೇಖರ್ ರಾವ್ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಹಾಗೂ ಮತ ಕೇಳಲು ಸಾರ್ವಜನಿಕರಿಗೆ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದಿಷ್ಟೇ ಅಲ್ಲದೆ ಜನರು ಅವರು ಕೊಡುವ ಹಣವನ್ನು ತೆಗೆದುಕೊಂಡು ಬಿಜೆಪಿ ಪಕ್ಷಕ್ಕೆ ಮತ ಹಾಕಿ ಅಂತ ಒತ್ತಾಯ ಮಾಡಿದ್ದಾರೆ.
ಭಾನುವಾರ ಮೆಹಬೂಬ್ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಂಡಿ ಸಂಜಯ್, "ಸಿಎಂ ಕೆ. ಚಂದ್ರಶೇಖರ್ ರವರು ಹಣ ಕೊಟ್ಟರೆ ಬಡವರು ನಮಗೆ ಮತ ಹಾಕುತ್ತಾರೆ ಎಂದು ನಂಬಿದ್ದಾರೆ. ಹೀಗಾಗಿ ದುಡ್ಡು ಹಂಚಿ ಮತ ಕೇಳುತ್ತಿದ್ದಾರೆ. ಆದರೆ, ಜನರು ಅವರ ಹಣವನ್ನ ತೆಗೆದುಕೊಳ್ಳಿ. 5000 ಅಥವಾ 10,000 ನೀಡಿದರೆ ಹಣವನ್ನ ತೆಗೆದುಕೊಂಡು ನಂತರ ನಮ್ಮ ಬಿಜೆಪಿ ಪಕ್ಷಕ್ಕೆ ಮತ ಹಾಕಿ ಎಂದಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಅವರು ಹಂಚುವ ಹಣ ಏನೇ ಇರಲಿ, ಅದು ಪ್ರಧಾನಿ ಮೋದಿ ಅವರು ಸರ್ಕಾರದ ವಿವಿಧ ಯೋಜನೆಗಳಿಗೆ ನೀಡಿದ ನಿಮ್ಮ ಹಣ. ಆದರೆ, ಆ ಹಣವನ್ನೇ ಮುಖ್ಯಮಂತ್ರಿಗಳು ಚುನಾವಣೆಯಲ್ಲಿ ಗೆಲ್ಲಲು ಹಂಚುತ್ತಿದ್ದಾರೆ. ಬಡವರು ಎಂದಿಗೂ ತಮ್ಮ ಮತವನ್ನು ಮಾರಾಟ ಮಾಡುವುದಿಲ್ಲ. ಬಡವರಿಗೆ ಪ್ರಾಮಾಣಿಕತೆ ಮತ್ತು ಬದ್ಧತೆ ಇರುತ್ತದೆ," ಎಂದು ಹೇಳಿದ್ದಾರೆ.

ಇತ್ತೀಚಿಗೆ ನಡೆದ ದುಬ್ಬಾಕ್ ಮತ್ತು ಹುಜೂರಾಬಾದ್ ಉಪಚುನಾವಣೆ ಕುರಿತು ಮಾತನಾಡಿದ ಬಂಡಿ ಸಂಜಯ್, "ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ಎಸ್) ಚುನಾವಣೆಗೆ ಮುನ್ನವೇ 5000 ರಿಂದ 10,000ದವರೆಗೆ ಹಣ ಹಂಚಿ ಮತ ಹಾಕುವಂತೆ ಮನವಿ ಮಾಡಿಕೊಂಡಿತ್ತು. ಜನರು ಸಹ ಹಣ ತೆಗೆದುಕೊಂಡಿದ್ದರು. ಕೊನೆಗೆ ಬಿಜೆಪಿಗೆ ಮತ ನೀಡಿ ಎರಡೂ ಕ್ಷೇತ್ರದಲ್ಲೂ ನಮ್ಮ ಪಕ್ಷವೇ ಗೆಲ್ಲುವಂತೆ ಮಾಡಿದ್ದರು. ಅದು ಅಲ್ಲದೆ ಟಿಆರ್ಎಸ್ ಇದ್ದ ಎರಡು ಕ್ಷೇತ್ರಗಳನ್ನು ಸಹ ನಮ್ಮ ಪಕ್ಷ ಗೆಲ್ಲುವಲ್ಲಿ ಸಫಲವಾಯಿತು," ಎಂದರು.
ಸದ್ಯಕ್ಕೆ ಬಿಜೆಪಿ ನಾಯಕ ಬಂಡಿ ಸಂಜಯ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ಚುನಾವಣೆ ಸಂದರ್ಭದಲ್ಲಿ ಹಣ ಹಂಚುವುದೇ ಅಪರಾಧ. ಹಾಗಿದ್ದರೂ ಹಣ ತೆಗೆದುಕೊಂಡು ಬಿಜೆಪಿಗೆ ಮತ ಹಾಕಿ ಅಂತ ಜನರನ್ನ ಪ್ರೇರೆಪಿಸಿರುವುದು ಈಗ ರಾಜಕೀಯ ಪಡಸಾಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಬಿಜೆಪಿ ನಾಯಕನ ಈ ಹೇಳಿಕೆ ಪರ ವಿರೋಧಗಳು ವ್ಯಕ್ತವಾಗುತ್ತಿದ್ದು, ಚುನಾವಣೆಗೂ ಮುನ್ನವೇ ರಾಜಕೀಯ ನಾಯಕರುಗಳ ಹಗ್ಗಜಗ್ಗಾಟ ಆರಂಭವಾಗಿದೆ.

2014 ರಲ್ಲಿ ತೆಲಂಗಾಣ ಸರ್ಕಾರ ರಚನೆಯಾದಗಿನಿಂದ ಇಲ್ಲಿಯವರೆಗೂ ಕೆ.ಸಿ ಚಂದ್ರಶೇಖರ್ ರಾವ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಾರೆ. ಹೀಗಾಗಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇರುವುದರಿಂದ ಈಗಿನಿಂದಲೇ ಕೆಸಿಆರ್ ಪಕ್ಷವನ್ನ ಕೆಳೆಗಿಳಿಸಲು ರಾಷ್ಟ್ರೀಯ ಭಾರೀ ಕಸರತ್ತು ನಡೆಸುತ್ತಿವೆ. ಇದಕ್ಕಾಗಿ ಈಗಿನಿಂದಲೇ ಪ್ರಚಾರಗಳನ್ನು ಆರಂಭಿಸಿದ್ದು, ಜನರ ಮತ ಸೆಳೆಯಲು ಮುಂದಾಗಿದೆ.












Click it and Unblock the Notifications