ಆಂಧ್ರಪ್ರದೇಶ ಅಭಿವೃದ್ಧಿಗೆ ಕೇಂದ್ರ ಬದ್ಧ; ಜಗನ್ ಗೆ ಅಭಯ ನೀಡಿದ ಪ್ರಧಾನಿ ನರೇಂದ್ರ ಮೋದಿ
Recommended Video
ಹೈದರಾಬಾದ್, ಜೂನ್ 9: ಮುಂದಿನ ಐದು ವರ್ಷಗಳಲ್ಲಿ ಬಿಜೆಪಿಯು ನೂರಾಮೂವತ್ತು ಕೋಟಿ ಭಾರತೀಯರ ನಿರೀಕ್ಷೆಗಳನ್ನು ಪೂರ್ಣಗೊಳಿಸಲಿದೆ. ದೊಡ್ಡ ಪ್ರಮಾಣದಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಹೃದಯವನ್ನು ಗೆಲ್ಲುತ್ತೇವೆ. ಜತೆಗೆ ಆಂಧ್ರಪ್ರದೇಶದ ಹೊಸ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಜತೆಗೆ ನಾವಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು.
ಕೊಲಂಬೋದಿಂದ ತಿರುಪತಿಗೆ ಬಂದ ಆವರು, 'ವಿಜಯೋತ್ಸವ ಸಭಾ'ದಲ್ಲಿ ಪಾಲ್ಗೊಂಡರು. ತಿರುಪತಿ ವೆಂಕಟೇಶ್ವರನನ್ನು ಸ್ಮರಿಸಿ ತಮ್ಮ ಭಾಷಣವನ್ನು ಆರಂಭಿಸಿದ ಮೋದಿ, 'ಬಾಲಾಜಿ ಪಾದಲ ಸಾಕ್ಷಿಗಾ' ಎಂದರು. ಆ ನಂತರ ತಮಿಳುನಾಡು, ಆಂಧ್ರಪ್ರದೇಶದ ಜನರಿಗೆ ಧನ್ಯವಾದ ಹೇಳಿದರು.
ದೊಡ್ಡ ಮಟ್ಟದಲ್ಲಿ ನಮಗೆ ಜನಾದೇಶ ನೀಡಲಾಗಿದೆ. ಕೆಲವರ ಪ್ರಕಾರ ನಮ್ಮ ಸರಕಾರ ಮೇಲೆ ನಿರೀಕ್ಷೆ ಹಾಗೂ ಆಶಯ ಹೆಚ್ಚಾಗಿದೆ. ಅವರಿಗೆ ಕೂಡ ಮೋದಿ ಏನು ಅಚ್ಚರಿ ಮಾಡಬಹುದು ಎಂದಿದೆ. ನಾವು ಇದನ್ನು ದೊಡ್ಡ ಅವಕಾಶ ಎಂದು ನೋಡುತ್ತೇವೆ. ಇದನ್ನು ಉಜ್ವಲ ಭಾರತದ ಖಾತ್ರಿ ಎಂದು ನೋಡುತ್ತೇನೆ ಎಂದು ಅವರು ಹೇಳಿದರು.

ನೂರಾ ಮೂವತ್ತು ಕೋಟಿ ಜನರ ಕೊಡುಗೆ ಹಾಗೂ ಬೆಂಬಲ ಇದ್ದು, ನಾವು ಈ ದೇಶಕ್ಕೆ ಹೊಸ ದಿಸೆಯನ್ನು ತೋರಿಸಬಹುದು ಎಂಬ ವಿಶ್ವಾಸ ಇದೆ. ಮಹಾತ್ಮ ಗಾಂಧಿ ಅವರ ನೂರಾ ಐವತ್ತನೇ ಜನ್ಮ ವರ್ಷಾಚರಣೆ ಹಾಗೂ ಎಪ್ಪತ್ತೈದನೇ ಸ್ವಾತಂತ್ರ್ಯ ವರ್ಷಾಚರಣೆ ಎರಡು ಪ್ರಮುಖ ಘಟ್ಟ ನಮ್ಮ ತಕ್ಷಣದ ಭವಿಷ್ಯದಲ್ಲಿ ಇದೆ ಎಂದರು.
ಪ್ರತಿಯೊಬ್ಬರೂ ಒಂದು ಹೆಜ್ಜೆ ಮುಂದಿಟ್ಟರೆ, ಈ ದೇಶ ಹಲವು ಹೆಜ್ಜೆಗಳನ್ನು ಮುಂದಿಡುತ್ತದೆ. ನವ ಭಾರತ ಸೃಷ್ಟಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಒಟ್ಟಾಗಿ ಕೆಲಸ ಮಾಡಬೇಕು. ಜಗನ್ ಮೋಹನ್ ರೆಡ್ಡಿ ನಾಯಕತ್ವದಲ್ಲಿ ಆಂಧ್ರಪ್ರದೇಶ ಅಭಿವೃದ್ಧಿ ಪಥದಲ್ಲಿ ಸಾಗುವ ಅವಕಾಶಗಳು ವಿಫುಲವಾಗಿವೆ ಎಂದ ಅವರು, ಅದಕ್ಕಾಗಿ ಕೇಂದ್ರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಇನ್ನೂ ಕೆಲವರಿಗೆ ಚುನಾವಣೆ ಹ್ಯಾಂಗೋವರ್ ನಿಂದ ಹೊರಬರಬೇಕಿದೆ ಎಂದು ತಿವಿದ ಪ್ರಧಾನಿ ಮೋದಿ, ನಮ್ಮ ಪಾಲಿಗೆ ಚುನಾವಣೆ ಮುಗಿದಿದೆ. ನಮ್ಮ ಗಮನ ಈಗ ಸಂಪೂರ್ಣವಾಗಿ ಅಭಿವೃದ್ಧಿ ಹಾಗೂ ಜನಪರ ಕೆಲಸದ ಬಗ್ಗೆ ಎಂದರು.

ಆ ನಂತರ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ನರೇಂದ್ರ ಮೋದಿ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೂಡ ಜತೆಗಿದ್ದರು. ಸಾಂಪ್ರದಾಯಿಕವಾಗಿ ಪುರೋಹಿತರು ದೇವಾಲಯಕ್ಕೆ ಬರಮಾಡಿಕೊಂಡರು.












Click it and Unblock the Notifications