ಉದ್ಧವ್ ಠಾಕ್ರೆ ಹೊಗಳಿದ ಕೆಸಿಆರ್: ಬಿಜೆಪಿ ಪ್ರತಿಸ್ಪರ್ಧಿಗಳನ್ನು ಒಟ್ಟುಗೂಡಿಸಲು ಆಹ್ವಾನ
ಹೈದರಾಬಾದ್ ಫೆಬ್ರವರಿ 16: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ (ಫೆಬ್ರವರಿ 20) ಊಟಕ್ಕೆ ಆಹ್ವಾನಿಸಿದ್ದಾರೆ ಎಂದು ಅವರ ಕಚೇರಿ ಇಂದು ತಿಳಿಸಿದೆ. ಚಂದ್ರಶೇಖರ್ ರಾವ್ ಅವರು "ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಅದನ್ನು ಮುಂದುವರಿಸಿ. ಹಮ್ ಆಪ್ಕೆ ಸಾಥ್ ಹೇ (ನಾವು ನಿಮ್ಮೊಂದಿಗಿದ್ದೇವೆ)." ಎಂದು ಉದ್ಧವ್ ಠಾಕ್ರೆ ಅವರಿಗೆ ಹೇಳಿದ್ದಾರೆಂದು ತಿಳಿದು ಬಂದಿದೆ.
2024 ರ ರಾಷ್ಟ್ರೀಯ ಚುನಾವಣೆಗೆ ಬಿಜೆಪಿ ವಿರುದ್ಧ ಶಕ್ತಿಗಳನ್ನು ಕ್ರೋಢೀಕರಿಸಲು ಚಂದ್ರಶೇಖರ್ ರಾವ್ ಅಥವಾ ಕೆಸಿಆರ್ ಅವರು ರಣತಂತ್ರ ಹೆಣೆಯುತ್ತಿರುವ ಸಂದರ್ಭದಲ್ಲಿ ಈ ವಿಚಾರ ಮುನ್ನಲೆಗೆ ಬಂದಿದೆ. ತಮ್ಮ ಕಾರ್ಯಾಚರಣೆಯಲ್ಲಿ ಫೋನ್ಗಳ ಮೂಲಕ ಬಿಜೆಪಿ ವಿರುದ್ಧದ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದೆ.
ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥರನ್ನು ಭೇಟಿ ಮಾಡಲು ಮುಂಬೈಗೆ ಭೇಟಿ ನೀಡುವ ಯೋಜನೆಗಳ ಬಗ್ಗೆ ಕೆಸಿಆರ್ ಈಗಾಗಲೇ ಮಾತನಾಡಿದ್ದರು. ಇದಕ್ಕೆ ನಿನ್ನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜನತಾದಳ (ಜಾತ್ಯತೀತ) ಬೆಂಬಲವನ್ನು ಪಡೆದರು. ದೇವೇಗೌಡ ಅವರು "ಕೋಮುವಾದಿ" ಶಕ್ತಿಗಳ ವಿರುದ್ಧದ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು NDTV ಗೆ ತಿಳಿಸಿವೆ.

ಈ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಹಲವು ವಿರೋಧ ಪಕ್ಷದ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ರಾವ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೈದರಾಬಾದ್ಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
"ಗವರ್ನರ್ಗಳು ಅಧಿಕಾರ ದುರುಪಯೋಗ" ದ ಆರೋಪದ ಮೇಲೆ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಟ್ಟುಗೂಡಿಸಲು ಬ್ಯಾನರ್ಜಿ ಈಗಾಗಲೇ ಯೋಜಿಸುತ್ತಿದ್ದಾರೆ. ಇತ್ತೀಚೆಗೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷವು 2024 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಸ್ಪರ್ಧಿಸಲಿದೆ ಎಂದು ಹೇಳಿದ್ದರು. 2024ರಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು, ಹೋರಾಡಬೇಕು ಮತ್ತು ಬಿಜೆಪಿಯನ್ನು ಸೋಲಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಅವರು ಸಮಾಜವಾದಿ ಪಕ್ಷದ ಪರವಾಗಿ ಪ್ರಚಾರ ಮಾಡಿದರು ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗೆ ವೇದಿಕೆ ಹಂಚಿಕೊಂಡರು.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರು ಶೀಘ್ರದಲ್ಲೇ ತಮ್ಮ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಸಹವರ್ತಿಗಳಾದ ಉದ್ಧವ್ ಠಾಕ್ರೆ ಮತ್ತು ಮಮತಾ ಬ್ಯಾನರ್ಜಿ ಅವರೊಂದಿಗೆ ಸಭೆ ನಡೆಸಲಿದ್ದೇನೆ ಎಂದು ಹೇಳಿದರು. ಹೈದರಾಬಾದ್ನ ಪ್ರಗತಿ ಭವನದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್ ರಾವ್, ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲು ನಾನು ಯಾವಾಗ ಬೇಕಾದರೂ ಮುಂಬೈಗೆ ಹೋಗಬಹುದು ಎಂದು ಹೇಳಿದರು, ಆದರೆ ಮಮತಾ ಬ್ಯಾನರ್ಜಿ ಹೈದರಾಬಾದ್ಗೆ ಬರುವ ನಿರೀಕ್ಷೆಯಿದೆ ಎಂದರು. ಬಿಜೆಪಿ ವಿರುದ್ಧ ಸಂಯುಕ್ತ ವಿರೋಧ ಪಕ್ಷದ ರಚನೆಯ ಬಗ್ಗೆ ಸ್ಪಷ್ಟವಾಗಿ ಹೇಳದ ಕೆಸಿಆರ್, ಭವಿಷ್ಯದಲ್ಲಿ ಅಂತಹ ಯಾವುದೇ ರಂಗ ರಚನೆಯಾದರೆ ಪ್ರಮುಖ ಪಾತ್ರ ವಹಿಸುವುದಾಗಿ ಹೇಳಿದ್ದಾರೆ.
"ಮಮತಾ ಬ್ಯಾನರ್ಜಿ ನನಗೆ ಕರೆ ಮಾಡಿದ್ದಾರೆ. ಫೋನ್ನಲ್ಲಿ ಚರ್ಚೆ ನಡೆಸಿದೆವು. ಅವರು ನನ್ನನ್ನು ಬಂಗಾಳಕ್ಕೆ ಕರೆದರು ಅಥವಾ ತಾವೇ ಹೈದರಾಬಾದ್ಗೆ ಬರುವುದಾಗಿ ಹೇಳಿದ್ದಾರೆ. ಅವರು ಯಾವಾಗ ಬೇಕಾದರೂ ಬರಬಹುದು. ನಾವು ಚರ್ಚಿಸುತ್ತಿದ್ದೇವೆ. ರಾಷ್ಟ್ರದಾದ್ಯಂತ ಅನೇಕ ರಾಜಕೀಯ ನಾಯಕರಿದ್ದಾರೆ" ಎಂದು ಕೆಸಿಆರ್ ಹೇಳಿದ್ದಾರೆ.












Click it and Unblock the Notifications