ಮೋದಿ ಭೇಟಿ ವೇಳೆ ಎರಡನೇ ಬಾರಿ ಗೈರಾಗಲಿರುವ ಕೆಸಿಆರ್
ಹೈದರಾಬಾದ್, ಮೇ 26: ತೆಲಂಗಾಣಕ್ಕೆ ಎರಡನೇ ಭಾರಿ ಪ್ರಧಾನಿ ನರೇಂದ್ರ ಭೇಟಿ ನೀಡಲಿದ್ದು, ಸತತ ಎರಡನೇ ಬಾರಿಯೂ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪ್ರಧಾನಿ ಮೋದಿಯಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ.
ಹೈದರಾಬಾದ್ ನಗರದಲ್ಲಿ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್ಬಿ) 20ನೇ ವರ್ಷವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೈದರಾಬಾದ್ಗೆ ಆಗಮಿಸುವಾಗ ಶಿಷ್ಟಾಚಾರದಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸ್ವಾಗತಿಸಬೇಕಿರುವುದು ವಾಡಿಕೆ.
ಕೆ. ಚಂದ್ರಶೇಖರಾವ್ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದಾರೆ.
ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಕೆಸಿಆರ್ ನರೇಂದ್ರ ಮೋದಿ ಭೇಟಿ ಮಾಡಲು ಹಿಂದೇಟು ಹಾಕಿದ್ದಾರೆ. ಪ್ರಧಾನ ಮಂತ್ರಿಯನ್ನು ಸ್ವಾಗತಿಸಲು ಸಚಿವ ಅಲಸಾನಿ ಶ್ರೀನಿವಾಸ್ ಯಾದವ್ರನ್ನು ಕೆಸಿಆರ್ ನಿಯೋಜಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿಲ್ಲ.
ಈ ಹಿಂದೆ ಚಿನ್ನಜೀಯರ್ ಸ್ವಾಮಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಚಿಂತಲ್ನಲ್ಲಿ ಸಮಾನತೆಯ ಪ್ರತಿಮೆಯನ್ನು ಅನಾವರಣಗೊಳಿಸಲು ಫೆಬ್ರವರಿ ಮೊದಲ ವಾರದಲ್ಲಿ ಪ್ರಧಾನಿ ಹೈದರಾಬಾದ್ಗೆ ಬಂದಾಗ ಶ್ರೀನಿವಾಸ್ ಯಾದವ್ ಪ್ರಧಾನಿ ಸ್ವಾಗತಿಸಲು ಹಾಗೂ ಶಿಷ್ಟಾಚಾರ ನೋಡಿಕೊಳ್ಳಲು ನಿಯೋಜಿಸಲಾಗಿತ್ತು. ಆಗ ಆರೋಗ್ಯ ಸಮಸ್ಯೆ ಮುಂದಿಟ್ಟುಕೊಂಡು ಚಂದ್ರಶೇಖರರಾವ್ ಮೋದಿ ಭೇಟಿ ಮಾಡಿರಲಿಲ್ಲ.
ಗುರುವಾರ ಕೆ. ಚಂದ್ರಶೇಖರರಾವ್ ಟಿಆರ್ಎಸ್ ಹಿರಿಯ ನಾಯಕರು ಮತ್ತು ಸಚಿವರೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ರಾಷ್ಟ್ರೀಯ ರಾಜಕೀಯ, ದೇಶಕ್ಕೆ ಪರ್ಯಾಯ ಅಜೆಂಡಾ ಮತ್ತು ಮುಂಬರುವ ರಾಷ್ಟ್ರಪತಿ ಚುನಾವಣೆ ಕುರಿತು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಲು ಆಗಮಿಸಿದ್ದಾರೆ.
ಕಳೆದ ವಾರ ಚಂದ್ರಶೇಖರರಾವ್ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಭೇಟಿಯಾಗಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟದ ಅಗತ್ಯತೆಯ ಬಗ್ಗೆ ಚರ್ಚಿಸಿದ್ದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆ ದೆಹಲಿ ಮತ್ತು ಚಂಡೀಗಢದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನಿಂದ ಕೆ. ಚಂದ್ರಶೇಖರ್ರಾವ್ ನೇರವಾಗಿ ಮಹಾರಾಷ್ಟ್ರದ ರಾಳೇಗಣ ಸಿದ್ಧಿ ಮತ್ತು ಶಿರಡಿಗೆ ತೆರಳಲಿದ್ದಾರೆ. ಮೇ 29ರಂದು ಮಹಾರಾಷ್ಟ್ರ ಪ್ರವಾಸದಿಂದ ಹಿಂದಿರುಗಿದ ನಂತರ ಅವರು ಬಿಹಾರ ಮತ್ತು ಪಶ್ಚಿಮ ಬಂಗಾಳ ಪ್ರವಾಸ ಮಾಡುವ ಸಾಧ್ಯತೆಯಿದೆ.