ಅತ್ತ ಮಮತಾ ಜತೆ ಜಗನ್ ಮೀಟಿಂಗ್, ಇತ್ತ ಆಸ್ತಿ ವಶ
ಹೈದರಾಬಾದ್, ನ.21: ಅಕ್ರಮ ಆಸ್ತಿ ಪ್ರಕರಣ ಆರೋಪ ಹೊತ್ತು ಜೈಲು ಸೇರಿದ್ದ ಜಗನ್ ಮೋಹನ್ ರೆಡ್ಡಿಗೆ ಜಾಮೀನು ಸಿಗುತ್ತಿದ್ದಂತೆ ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದರು. ಆದರೆ, ಜಗನ್ ರೆಡ್ಡಿ ಮಾಲೀಕತ್ವದ ಸಂಸ್ಥೆಗಳ ಆಸ್ತಿ ಸರ್ಕಾರದ ವಶವಾಗುತ್ತಿರುವುದು ಉದ್ಯಮಿಗಳ ನಿದ್ದೆಗೆಡಿಸಿದೆ.ಈ ನಡುವೆ ರಾಜ್ಯ ಇಬ್ಭಾಗ ಕುರಿತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಜಗನ್ ಮಾತುಕತೆ ನಡೆಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ಒಡೆತನದ ಜಗತಿ ಪಬ್ಲಿಕೇಷನ್ ಹೆಸರಿನಲ್ಲಿರುವ 34 ಕೋಟಿ ರೂ.ನಿಶ್ಚಿತ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಇಲ್ಲಿನ ವಿಶೇಷ ನ್ಯಾಯಾಲಯ(PMLA) ಆದೇಶಿಸಿದೆ. ಹೈದ್ರಾಬಾದಿನ ಜ್ಯುಬಿಲಿ ಹಿಲ್ಸ್ ನಲ್ಲಿರುವ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಶಾಖೆಯಲ್ಲಿರುವ ಜಗತಿ ಪಬ್ಲಿಕೇಷನ್ ನಿಶ್ಚಿತ ಠೇವಣಿ ಅಕ್ರಮ ಸಂಪಾದನೆ ಎಂದು ಪರಿಗಣಿಸಿ ನ್ಯಾಯಾಲಯ ಈ ಆದೇಶವನ್ನು ನೀಡಿದೆ.
ಜಗತಿ ಪಬ್ಲಿಕೇಷನ್ ನಲಿ ದಂಡಮೂಡಿ, ಟಿ.ಆರ್ ಕನ್ನನ್, ಮಾಧವ್ ರಾಮಚಂದ್ರನ್ ಅವರು ಅಕ್ರಮವಾಗಿ ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ. ಈ ಹಿಂದೆ ಜಗನ್ ಅವರ ಆಸ್ತಿಯನ್ನು ಮೂರು ಬಾರಿ ಇಡಿ ವಶಕ್ಕೆ ಪಡೆದುಕೊಂಡಿತ್ತು. ಒಮ್ಮೆ 51 ಕೋಟಿ ರು, ಇನ್ನೊಮ್ಮೆ 71 ಕೋಟಿ ಹಾಗೂ 143.74 ಕೋಟಿ ರು ಆಸ್ತಿಯನ್ನು ಜಪ್ತಿ ಮಾಡಿಕೊಂಡಿತ್ತು.
ಒಟ್ಟ್ಟು ನಾಲ್ಕು ಬಾರಿ ಆಸ್ತಿ ಮುಟ್ಟುಗೋಲು ಆದೇಶ ಹೊರಬಿದ್ದಿದೆ. ಸುಮಾರು 300 ಕೋಟಿ ರು.ಗೂ ಅಧಿಕ ಮೊತ್ತದ ಆಸ್ತಿ ಪಾಸ್ತಿಯನ್ನು ಇಡಿ ಹಾಗೂ ಸಿಬಿಐ ವಶಕ್ಕೆ ತೆಗೆದುಕೊಂಡಿದೆ.

ಮಾಧ್ಯಮ ಸ್ವಾತಂತ್ರ್ಯ ಹರಣ : ಸಾಕ್ಷಿ ಪತ್ರಿಕೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿರುವುದನ್ನು ಆಂಧ್ರಪ್ರದೇಶ ಪತ್ರಕರ್ತರ ಒಕ್ಕೂಟ ಖಂಡಿಸಿತ್ತು. ಸಾಕ್ಷಿ ಪತ್ರಿಕೆಗೆ ಸರ್ಕಾರಿ ಜಾಹೀರಾತುಗಳನ್ನು ನೀಡುವುದನ್ನು ನಿಲ್ಲಿಸಿರುವುದನ್ನು ಸಹ ಒಕ್ಕೂಟ ವಿರೋಧಿಸಿತ್ತು.
ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಆಕ್ರಮಣ. ದೇಶದ್ರೋಹ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸಂಸ್ಥೆ ತೊಡಗಿಲ್ಲ. ಪತ್ರಿಕೆ ಪ್ರತಿದಿನ ಸುಮಾರು 15 ದಶಲಕ್ಷ ಮನೆಗಳು ತಲುಪುತ್ತದೆ. ಒಂದು ಮಾಧ್ಯಮ ಸಂಸ್ಥೆ ಗುರಿಯಾಗಿಸುವುದು ತಪ್ಪು.
ಇದು ಪ್ರಜಾಪ್ರಭುತ್ವದ ಚರಿತ್ರೆಯಲ್ಲಿ ಕಪ್ಪು ದಿನ ಎಂದು ಸಾಕ್ಷಿ ಪತ್ರಿಕೆ ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಭಟನೆ ನಡೆಸಿತ್ತು. Support Sakshi - Save Democracy ಅಭಿಯಾನಕ್ಕೆ ಫೇಸ್ ಬುಕ್ ನಲ್ಲಿ 10,874ಕ್ಕೂ ಅಧಿಕ ಮಂದಿ ಬೆಂಬಲಿಸಿದರು.
ಮಮತಾ ಭೇಟಿ: ತೆಲಂಗಾಣ ರಾಜ್ಯ ರಚನೆ ವಿಷಯ ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ವೈಎಸ್ಸಾರ್ ಪಕ್ಷದ ನಿಲುವನ್ನು ಬೆಂಬಲಿಸುವಂತೆ ಜಗನ್ ರೆಡ್ಡಿ ಅವರು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಗೆ ಮನವಿ ಮಾಡಿದ್ದಾರೆ. ಜಗನ್ ಮನವಿಗೆ ಮಮತಾ ಒಪ್ಪಿಕೊಂಡಿದ್ದಾರೆ.
19 ಜನ ಟಿಎಂಸಿ ಸಂಸದರು ಹಾಗೂ ಇಬ್ಬರು ವೈಎಸ್ಸಾರ್ ಕಾಂಗ್ರೆಸ್, ಮೂವರು ಟಿಡಿಪಿ ಹಾಗೂ 20 ಕ್ಕೂ ಅಧಿಕ ಸೀಮಾಂಧ್ರ ಭಾಗದ ಸಂಸತ್ ಸದಸ್ಯರು ತೆಲಂಗಾಣ ರಾಜ್ಯ ರಚನೆ ವಿರೋಧಿಸಲು ಸಜ್ಜಾಗಿದ್ದಾರೆ. ಗೋರ್ಖಾ ಲ್ಯಾಂಡ್ ಬಗ್ಗೆ ಮಾತನಾಡಿದ ಮಮತಾ, ಯುಪಿಎ ಸರ್ಕಾರ ಜನರ ಆಶೋತ್ತರಗಳನ್ನು ಬಲಿಕೊಟ್ಟು ರಾಜ್ಯಗಳನ್ನು ವಿಭಜಿಸಲು ಮುಂದಾಗಿದೆ. ಹೊಸ ರಾಜ್ಯ ರಚನೆ ಮಾಡುವಾಗ ಜನರ ಅಭಿಪ್ರಾಯ ಪಡೆಯುವುದು ಮುಖ್ಯ ಎಂದಿದ್ದಾರೆ.












Click it and Unblock the Notifications