ಅಖಂಡ ಆಂಧ್ರಕ್ಕಾಗಿ ಜಗನ್ ಉಪವಾಸ
ಹೈದರಾಬಾದ್, ಅ.5 : ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಶನಿವಾರದಿಂದ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ಈ ಮೂಲಕ ಜೈಲಿನಿಂದ ಹೊರಬಂದ ಜಗನ್ ಮತ್ತೊಮ್ಮೆ ರಾಜಕೀಯ ಸಮರಕ್ಕೆ ಧುಮುಕಿದ್ದಾರೆ.
ಶನಿವಾರ ಬೆಳಗ್ಗೆ ಜಗನ್ ಮೋಹನ್ ರೆಡ್ಡಿ ಹೈದರಾಬಾದ್ನಲ್ಲಿರುವ ವೈಎಸ್ಆರ್ ಕಾಂಗ್ರೆಸ್ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಕೇಂದ್ರ ಸರ್ಕಾರ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಜಗನ್ ಅಖಂಡ ಆಂಧ್ರಕ್ಕಾಗಿ ಅಕ್ಟೋಬರ್ 18ರ ವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದು, 18ರಂದು ಬೃಹತ್ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಮುಂದುವರಿದ ಹೋರಾಟ : ರಾಜ್ಯ ವಿಭಜಿಸುವ ಕೇಂದ್ರದ ನಿರ್ಧಾರ ವಿರೋಧಿಸಿ ಆಂಧ್ರ ಪ್ರದೇಶದ ಕರಾವಳಿ ಮತ್ತು ರಾಯಲಸೀಮಾ ಪ್ರದೇಶಗಳಲ್ಲಿ ನಡೆಯುತ್ತಿರುವ ಬಂದ್ ಎರಡನೇ ದಿನಕ್ಕೆ ಕಾಲಿರಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಶನಿವಾರ ತಿರುಪತಿ-ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವ ಕಾರ್ಯಕ್ರಮ ಆರಂಭವಾಗಿದ್ದು, ಇಲ್ಲಿಗೆ ಆಗಮಿಸಿದ್ದ ಜನರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಆಂಧ್ರದ ನಾನ್-ಗೆಜೆಟೆಡ್ ಅಧಿಕಾರಿಗಳ ಒಕ್ಕೂಟ ಮತ್ತು ಇತರ ಸಂಯುಕ್ತ-ಆಂಧ್ರ ಬೆಂಬಲಿತ ಸಂಸ್ಥೆಗಳು ಇಂದು ಪ್ರತಿಭಟನೆ ಮುಂದುವರೆಸಿವೆ.
ಸೀಮಾಂಧ್ರ (ಕರಾವಳಿ ಮತ್ತು ರಾಯಲ್ಸೀಮಾ) ಪ್ರದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು, ವ್ಯಾಪಾರಿ ಕೇಂದ್ರಗಳು ಶನಿವಾರವೂ ಮುಚ್ಚಿದ್ದು, ಜನ ಜೀವನಕ್ಕೆ ತೀವ್ರ ತೊಡಕಾಗಿದೆ. ಎಲ್ಲೆಡೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಆಂಧ್ರಪ್ರದೇಶಕ್ಕೆ ಕೆಎಸ್ಆರ್ ಟಿಸಿ ಶುಕ್ರವಾರದಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಿದೆ. ಪ್ರತಿಭಟನೆಗೆ ಹೆದರಿ, ಖಾಸಗಿ ಸಾರಿಗೆ ಸಂಸ್ಥೆಗಳೂ ವಾಹನಗಳನ್ನು ರಸ್ತೆಗಿಳಿಸುತ್ತಿಲ್ಲ ಇದರಿಂದ ರಾಜ್ಯದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. (ಆಂಧ್ರಪ್ರದೇಶಕ್ಕೆ ಕೆಎಸ್ಆರ್ ಟಿಸಿ ಬಸ್ ಸೇವೆ ಸ್ಥಗಿತ)












Click it and Unblock the Notifications