ಮಾನಸಿಕ ಒತ್ತಡ ತಾಳಲಾರದೆ ವಾರ್ತಾವಾಚಕಿ ಆತ್ಮಹತ್ಯೆ
ಹೈದರಾಬಾದ್, ಏಪ್ರಿಲ್ 02: ತೆಲುಗು ಸುದ್ದಿ ವಾಹಿನಿ ವಿ6ನ ವಾರ್ತಾವಾಚಕಿ ರಾಧಿಕಾ ರೆಡ್ಡಿ ಅವರು ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾರೆ. ಮಾನಸಿಕ ಖಿನ್ನತೆ ಬಳಲುತ್ತಿದ್ದ ರಾಧಿಕಾ ಅವರು ಅಪಾರ್ಟ್ಮೆಂಟ್ನ ಐದನೇ ಅಂತಸ್ತಿನ ಮಹಡಿಯಿಂದ ಕೆಳಗೆ ಹಾರಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೈದರಾಬಾದಿನ ಮೂಸಪೇಟೆಯ ಶ್ರೀವಿಲ್ಲಾ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ 36 ವರ್ಷದ ರಾಧಿಕಾ ರೆಡ್ಡಿ ಅವರು ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್ನೋಟ್ ನಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಭಾನುವಾರ ರಾತ್ರಿ ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗಿದ್ದರು. ಮನೆಗೆ ಬಂದ ಕೆಲ ಹೊತ್ತಿನಲ್ಲೇ ಟೆರೇಸ್ಗೆ ತೆರಳಿ ಅಲ್ಲಿಂದ ಕೆಳಗೆ ಹಾರಿದ್ದಾರೆ. ರಾಧಿಕಾ ಅವರ ತಲೆ, ಕಾಲು ಮುಂತಾದೆಡೆ ಗಂಭೀರ ಗಾಯವಾಗಿತ್ತು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕೂಕಟ್ ಪಲ್ಲಿ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಮಜೀದ್ ಅವರು ತಿಳಿಸಿದ್ದಾರೆ.

ರಾಧಿಕಾ ಬ್ಯಾಗ್ನಲ್ಲಿ ಸಿಕ್ಕಿರುವ ಡೆತ್ನೋಟ್ನಲ್ಲಿ 'ನನ್ನ ಮೆದುಳೇ ನನ್ನ ಶತ್ರು. ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ' ಎಂದು ಬರೆಯಲಾಗಿದೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ಕಳೆದ 6 ತಿಂಗಳ ಹಿಂದೆ ಗಂಡನಿಗೆ ವಿಚ್ಛೇಧನ ಪಡೆದಿದ್ದ ರಾಧಿಕಾ ಅವರು ಪೋಷಕರೊಂದಿಗೆ ವಾಸವಾಗಿದ್ದರು. ಅವರಿಗೆ 14 ವರ್ಷದ ಮಗನಿದ್ದು, ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ತಿಳಿದು ಬಂದಿದೆ.












Click it and Unblock the Notifications