ಮಗಳಿಗೆ ವಂಚನೆ ಮಾಡಿದ್ದವನನ್ನು ಇರಿದು ಕೊಂದ ಟಿಆರ್ ಎಸ್ ಮುಖಂಡ
ಮಗಳಿಗೆ ವಂಚನೆ ಮಾಡಿ, ಆಕೆ ಸಾವಿಗೆ ಕಾರಣನಾದ ವ್ಯಕ್ತಿಯನ್ನು ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖಂಡನೊಬ್ಬ ಇತರ ನಾಲ್ವರೊಡನೆ ಸೇರಿ ಕೊಲೆ ಮಾಡಿದ್ದಾನೆ. ಚೂರಿಯಿಂದ ಇರಿದ ಗಾಯದಿಂದ ವ್ಯಕ್ತಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ
ಹೈದರಾಬಾದ್, ಮಾರ್ಚ್ 1: ಮಗಳಿಗೆ ಮೋಸ ಮಾಡಿ, ಆಕೆ ಸಾವಿಗೆ ಕಾರಣನಾದ ವ್ಯಕ್ತಿಯೊಬ್ಬನನ್ನು ಕೊಂದ ಆರೋಪದ ಮೇಲೆ ತೆಲಂಗಾಣ ರಾಷ್ಟ್ರೀಯ ಸಮಿತಿ ನಾಯಕನೊಬ್ಬನನ್ನು ಆದಿಬಟ್ಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಈಗ ಕೊಲೆಯಾಗಿರುವ ವ್ಯಕ್ತಿಯನ್ನು ಹಿಂದೆ ಬಂಧಿಸಲಾಗಿತ್ತು.
ಜಿ.ರಾಜೇಶ್ ಕೊಲೆಯಾದವನು. ಆತ ಎಲ್ ಬಿ ನಗರ್ ನ ಹನುಮಾನ್ ದೇವಾಲಯ ಸಮಿತಿ ಅಧ್ಯಕ್ಷ. ಆತನನ್ನು ಸೈದಾಬಾದ್ ನ ಟಿಆರ್ ಎಸ್ ನಾಯಕ ಶ್ಯಾಮ್ ಸುಂದರ್ ರೆಡ್ಡಿ ಮತ್ತು ಇತರ ನಾಲ್ವರು ಸೇರಿ ಕೊಂದಿದ್ದಾರೆ. ಶ್ಯಾಮಸುಂದರ್ ರೆಡ್ಡಿ ಅವರ ಮಗಳ ಅಪಹರಣ ಮತ್ತು ಅತ್ಯಾಚಾರ ಆರೋಪದಲ್ಲಿ ರಾಜೇಶ್ ನನ್ನು ಮಾರ್ಚ್ 2015ರಲ್ಲಿ ಚೈತನ್ಯಪುರಿ ಪೊಲೀಸರು ಬಂಧಿಸಿದ್ದರು.[ಕಾಲಿಯಾ ರಫೀಕ್ ಕೊಲೆ ಪ್ರಕರಣ: ಮೂವರ ಬಂಧನ]
ತಾನು ಅವಿವಾಹಿತ ಎಂದು ಹೇಳಿಕೊಂಡು, ರೆಡ್ಡಿ ಅವರ ಮಗಳು ಅನುಷಾಗೆ ಆತ ಮೋಸ ಮಾಡಿದ್ದ. ಅದು ಗೊತ್ತಾದ ನಂತರ ರಾಜೇಶ್ ಮೇಲೆ ಆಕೆ ದೂರು ನೀಡಿದ್ದಳು. ದೂರಿನ ಅನ್ವಯ ಪೊಲೀಸರು ಅತನನ್ನು ಮಾರ್ಚ್ 2015ರಲ್ಲಿ ಬಂಧಿಸಿದ್ದರು. ಕೆಲ ದಿನಗಳ ನಂತರ ಜಾಮೀನಿನ ಮೇಲೆ ಆತ ಹೊರಬಂದಿದ್ದ.
ಈ ಘಟನೆಯಿಂದ ನೊಂದಿದ್ದ ಅನುಷಾ ನಾಗಾರ್ಜುನಸಾಗರ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ರಾಜೇಶ್ ವಿರುದ್ಧ ಇದೇ ರೀತಿ ವಂಚನೆಯೂ ಸೇರಿದಂತೆ ಹತ್ತು ಪ್ರಕರಣಗಳು ಹಯಾತ್ ನಗರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಅನುಷಾ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜೇಶ್, ಜೂನ್ 2016ರಲ್ಲಿ ಬಿಡುಗಡೆಯಾಗಿದ್ದ.[ಪ್ರೀತಿ ವಿಚಾರದಲ್ಲಿ ಗಲಾಟೆ, ಎಸ್ಎಸ್ಎಲ್ಸಿ ವಿದ್ಯಾರ್ಥಿಯ ಇರಿದು ಕೊಲೆ]
ಮಗಳ ಸಾವಿನ ಪ್ರತೀಕಾರಕ್ಕಾಗಿ ಕಾಯುತ್ತಿದ್ದ ಶ್ಯಾಮ್ ಸುಂದರ್ ರೆಡ್ಡಿ ಮತ್ತು ಇತರ ನಾಲ್ವರು ಸೋಮವಾರ ರಾತ್ರಿ ಬಾರ್ ನಿಂದ ಹೊರಬರುತ್ತಿದ್ದ ರಾಜೇಶ್ ಮೇಲೆ ಚಾಕುವಿನಿಂದ ದಾಳಿ ನಡೆಸಿ, ಕೊಲೆ ಮಾಡಿದ್ದಾರೆ. ಗಾಯಗಳಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.