ಸೋನಿಯಾ ಗಾಂಧಿ ಕರೆಗೂ ಕ್ಯಾರೇ ಅನ್ನದ ತೆಲಂಗಾಣ ಮತದಾರ: ಕಾಂಗ್ರೆಸ್ ಧೂಳೀಪಟ
Recommended Video
ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣಾ ಫಲಿತಾಂಶ ಒಂದೊಂದಾಗಿಯೇ ಹೊರಬೀಳುತ್ತಿದೆ. ಸದ್ಯದ ಟ್ರೆಂಡಿಂಗ್ ಪ್ರಕಾರ, ಕೆ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ ಎಸ್) ಅಭೂತಪೂರ್ವ ಜಯದತ್ತ ದಾಪುಗಾಲು ಹಾಕುತ್ತಿದೆ.
ಚುನಾವಣೆಗೆ ಕೆಲವು ದಿನಗಳ ಮುನ್ನ, ಎನ್ಡಿಎ ತೆಕ್ಕೆಯಲ್ಲಿದ್ದ ಚಂದ್ರಬಾಬು ನಾಯ್ಡು ಜೊತೆ ಸೇರಿ, ಮತದಾರರ ಮುಂದೆ ಹೋಗಿದ್ದ ಕಾಂಗ್ರೆಸ್ಸಿಗೆ ಇನ್ನಿಲ್ಲದಂತೆ ಮುಖಭಂಗವಾಗಿದೆ. ಎಂಐಎಂ ಆಗಲಿ ಬಿಜೆಪಿಯಾಗಲಿ, ಯಾರ ಹಂಗಿಲ್ಲದೆಯೇ ಕೆಸಿಆರ್ ಮತ್ತೆ ಸರಕಾರ ರಚಿಸಲಿದ್ದಾರೆ.
ಪಂಚರಾಜ್ಯ ಫಲಿತಾಂಶ LIVE: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮುಖಭಂಗ
ಗೆದ್ದೇ ಗೆಲ್ಲುತ್ತೇನೆ ಎನ್ನುವ ಅದಮ್ಯ ವಿಶ್ವಾಸದಿಂದ, ಅವಧಿಗೆ ಮುನ್ನವೇ ಅಸೆಂಬ್ಲಿ ವಿಸರ್ಜಿಸಿದ್ದ ಕೆಸಿಆರ್ ಅವರ ರಾಜಕೀಯ ಲೆಕ್ಕಾಚಾರ ಸರಿಯಾದ ರೀತಿಯಲ್ಲಿ ವರ್ಕೌಟ್ ಆಗಿದ್ದು, ತೆಲಂಗಾಣ ಚುನಾವಣಾ ಫಲಿತಾಂಶ, ಮುಂಬರುವ ಆಂಧ್ರಪ್ರದೇಶದ ಚುನಾವಣೆಯಲ್ಲಿ ಪರಿಣಾಮ ಬೀರದೇ ಇರದು.
ಅನಾರೋಗ್ಯದಿಂದ ಮತ್ತು ಇತ್ತೀಚಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಲ್ಲಿ ಅಷ್ಟಾಗಿ ತಮ್ಮನ್ನು ತೊಡಗಿಸಿಕೊಳ್ಲದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ತೆಲಂಗಾಣದಲ್ಲಿ ಮಾತ್ರ ಪ್ರಚಾರಕ್ಕೆ ಹೋಗಿದ್ದರು. ಸೋನಿಯಾ ಗಾಂಧಿ ಸಾರ್ವಜನಿಕ ಸಭೆಗೆ ಜನರೂ ಭಾರೀ ಸಂಖ್ಯೆಯಲ್ಲಿ ಸೇರಿದ್ದರು.
ತೆಲಂಗಾಣ ಚುನಾವಣೆ : ಟಿಡಿಪಿ ಜೊತೆ ಮೈತ್ರಿ ಮುಂದುವರೆಸಲಿದೆ ಕಾಂಗ್ರೆಸ್
ತೆಲಂಗಾಣ ಪ್ರತ್ಯೇಕ ರಾಜ್ಯದ ಕಾರಣಕರ್ತೆ ಎಂದು ಸಭೆಯಲ್ಲಿ, ಕಾಂಗ್ರೆಸ್ ಮುಖಂಡರು ಸೋನಿಯಾ ಗಾಂಧಿಯವರನ್ನು ಹೊಗಳಿದ್ದೇ ಹೊಗಳಿದ್ದು, ಆದರೆ, ಮತದಾರ ಅದನ್ನು ಕಿವಿಗೇ ಹಾಕಿಕೊಂಡಿಲ್ಲ ಎನ್ನುವುದು ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ.
ತೆಲಂಗಾಣವನ್ನು ಹುಟ್ಠುಹಾಕಿದ ಅಮ್ಮ
ಹೈದರಾಬಾದ್ ನಗರದಿಂದ 35ಕಿ.ಮೀ ದೂರದ ಮೇಡ್ಚಲ್ ಎನ್ನುವ ನಗರದಲ್ಲಿ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು 'ತೆಲಂಗಾಣವನ್ನು ಹುಟ್ಠುಹಾಕಿದ ಅಮ್ಮ' ಎಂದೇ ಕಾಂಗ್ರೆಸ್ ಮುಖಂಡರು ಸಂಬೋಧಿಸುತ್ತಿದ್ದರು. ತೆಲಂಗಾಣ ರಾಜ್ಯದ ಎಲ್ಲಾ ಮತದಾರರು ಸೋನಿಯಾ ಅವರ ಪಕ್ಷಕ್ಕೆ ಮತ ನೀಡಬೇಕೆಂದು ಮನವಿ ಮಾಡಿದ್ದರು.
ಕುದುರೆ ವ್ಯಾಪಾರ ಭೀತಿ : ತೆಲಂಗಾಣ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ?
ನಾಯ್ಡು, ರಾಹುಲ್ ಗಾಂಧಿ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದರು
ಇದೇ ಮೊದಲ ಬಾರಿಗೆ ತೆಲುಗುದೇಶಂ ವರಿಷ್ಠ ಮತ್ತು ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು, ರಾಹುಲ್ ಗಾಂಧಿ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದರು. ಸಾರ್ವಜನಿಕ ಸಭೆಯೊಂದರಲ್ಲಿ, ತೆಲಂಗಾಣವನ್ನು ಪ್ರತ್ಯೇಕ ರಾಜ್ಯ ಘೋಷಿಸುವ ಸಂದರ್ಭದಲ್ಲಿ ಬಹಳಷ್ಟು ಕಷ್ಟವನ್ನು ನಾವು ಎದುರಿಸಬೇಕಾಯಿತು ಎಂದು ಸೋನಿಯಾ ಗಾಂಧಿ, ಭಾವನಾತ್ಮಕ ಭಾಷಣವನ್ನೂ ಮಾಡಿದ್ದರು.
ಸಮೀಕ್ಷೆಗಳ ಸಮೀಕ್ಷೆ: ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಹವಾ ತಡೆಯುವವರಿಲ್ಲ
ತೆಲಂಗಾಣ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ
ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದ ತೆಲಂಗಾಣ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ, ಚುನಾವಣೆಯನ್ನು ಗೆದ್ದು ಅದನ್ನು ಸೋನಿಯಾ ಗಾಂಧಿಗೆ ಹುಟ್ಟುಹಬ್ಬದ ಗಿಫ್ಟ್ ಅನ್ನಾಗಿ ನೀಡುತ್ತೇವೆ ಎಂದು ಘೋಷಿಸಿದ್ದರು. ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿರುವುದರಿಂದ, ಅದರ ಲಾಭ ನಮಗೆ ಎಂದು ರೆಡ್ಡಿ ಹೇಳಿದ್ದರು. ಸೋನಿಯಾ ಗಾಂಧಿಯವರಿಂದ ಆರು ದಶಕಗಳ ಈ ಭಾಗದ ಜನರ ಬೇಡಿಕೆ ಈಡೇರಿದ್ದು ಎಂದಿದ್ದರು.
ಸೋನಿಯಾ ಗಾಂಧಿಯೇ ಕಾರಣ
ತೆಲಂಗಾಣ ರಾಜ್ಯದ ಉದಯಕ್ಕೆ ಸೋನಿಯಾ ಗಾಂಧಿಯೇ ಕಾರಣ ಎಂದು ಬಿಂಬಿಸಿದ್ದ ಕಾಂಗ್ರೆಸ್ ರಾಜ್ಯ ಘಟಕ, ಅವರ ಸಾರ್ವಜನಿಕ ಸಭೆಯನ್ನು ಬಹುವಾಗಿ ಅವಲಂಬಿಸಿತ್ತು. ಅದರಂತೆಯೇ, ಸೋನಿಯಾ ಗಾಂಧಿ ಕೂಡಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಆದರೆ, ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಲದ ತೆಲಂಗಾಣ ಮತದಾರ, ಕೆಸಿಆರ್ ಮೇಲೆ ತಮ್ಮ ನಂಬಿಕೆಯನ್ನು ಮುಂದುವರಿಸಿದ್ದಾರೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗಳಿಸಿದ್ದ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನ
11.20ಕ್ಕೆ ಇರುವ ಟ್ರೆಂಡಿಂಗ್ ಪ್ರಕಾರ, 119 ಸ್ಥಾನಗಳ ಅಸೆಂಬ್ಲಿಯಲ್ಲಿ ಟಿಆರ್ ಎಸ್ 92, ಕಾಂಗ್ರೆಸ್ ಮೈತ್ರಿಕೂಟ 18, ಎಂಐಎಂ ಮತ್ತು ಇತರರು ಆರು ಮತ್ತು ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಮುನ್ನಡೆ/ಜಯ ಸಾಧಿಸಿದೆ. ಆ ಮೂಲಕ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗಳಿಸಿದ್ದ ಸ್ಥಾನಕ್ಕಿಂತಲೂ (63) ಹೆಚ್ಚಿನ ಸ್ಥಾನ ಪಡೆಯುವತ್ತ ಕೆಸಿಆರ್ ಸಾಗುತ್ತಿದ್ದರೆ, 21ಸ್ಥಾನಗಳನ್ನು ಕಳೆದ ಬಾರಿ ಗೆದ್ದಿದ್ದ ಕಾಂಗ್ರೆಸ್ ಮತ್ತು ಐದು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಅಷ್ಟು ಸ್ಥಾನಗಳನ್ನು ಉಳಿಸಿಕೊಳ್ಳಲೂ ಕಷ್ಟಪಡುತ್ತಿವೆ.