ಗುಲಾಬ್ ಚಂಡಮಾರುತ ಅಬ್ಬರ: ಆಂಧ್ರಪ್ರದೇಶದ ಇಬ್ಬರು ಮೀನುಗಾರರು ಸಾವು; ಒಬ್ಬ ನಾಪತ್ತೆ
ಹೈದರಾಬಾದ್, ಸೆಪ್ಟೆಂಬರ್ 27: ಆಂಧ್ರಪ್ರದೇಶದ ಉತ್ತರ ಕರಾವಳಿ ಶ್ರೀಕಾಕುಳಂ ಜಿಲ್ಲೆಯಲ್ಲಿ ಗುಲಾಬ್ ಚಂಡಮಾರುತದ ಅಬ್ಬರಕ್ಕೆ ಬೋಟ್ ಸಮತೋಲನ ಕಳೆದುಕೊಂಡಿದ್ದು, ಬೋಟ್ನಲ್ಲಿದ್ದ ಆರು ಮೀನುಗಾರರ ಪೈಕಿ, ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
"ಇದೇ ವೇಳೆ ಒಬ್ಬ ಮೀನುಗಾರ ನಾಪತ್ತೆಯಾಗಿದ್ದು, ಪಲಸಾ ಗ್ರಾಮದ ಮೂವರು ಮೀನುಗಾರರು ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ. ಆಂಧ್ರಪ್ರದೇಶ ಮೀನುಗಾರಿಕಾ ಸಚಿವ ಎಸ್. ಅಪ್ಪಲ ರಾಜು ನೌಕಾಪಡೆ ಅಧಿಕಾರಿಗಳಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸುವಂತೆ ಕರೆ ನೀಡಿದ್ದಾರೆ," ಎಂದು ಪಿಟಿಐ ವರದಿ ಮಾಡಿದೆ.
"ಗುಲಾಬ್ ಚಂಡಮಾರುತವು ಭಾನುವಾರ ಸಂಜೆಯೇ ತನ್ನ ಭೂಕುಸಿತ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಮೂರು ಗಂಟೆಗಳಲ್ಲಿ ಇದು ಉತ್ತರ ಆಂಧ್ರಪ್ರದೇಶ ಹಾಗೂ ದಕ್ಷಿಣ ಒಡಿಶಾ ಕರಾವಳಿಯನ್ನು ಕಳಿಂಗಪಟ್ಟಣಂ ಮತ್ತು ಗೋಪಾಲಪುರ ನಡುವೆ ದಾಟುವ ಸಾಧ್ಯತೆ ಇದೆ," ಎಂದು ಹವಾಮಾನ ಇಲಾಖೆ ಹೇಳಿದೆ.

ಮುಂದಿನ ಕೆಲವು ಗಂಟೆಗಳ ಕಾಲ ಭೂಕುಸಿತ ಪ್ರಕ್ರಿಯೆ
ಭಾನುವಾರ ಸಂಜೆ 6 ಗಂಟೆಗೆ ಆರಂಭವಾದ ಭೂಕುಸಿತ ಪ್ರಕ್ರಿಯೆ ಮುಂದಿನ ಕೆಲವು ಗಂಟೆಗಳ ಕಾಲ ಉತ್ತರ ಕರಾವಳಿ ಆಂಧ್ರಪ್ರದೇಶ ಮತ್ತು ಪಕ್ಕದ ದಕ್ಷಿಣ ಕರಾವಳಿ ಒಡಿಶಾದಲ್ಲಿ ಮುಂದುವರಿಯುತ್ತದೆ ಎಂದು ಐಎಂಡಿ ಹೇಳಿತ್ತು. ಗುಲಾಬ್ ಚಂಡಮಾರುತವು ಭೂಕುಸಿತವನ್ನು ಮುಂದುವರಿಸುತ್ತಿದ್ದಂತೆ ಕಳಿಂಗಪಟ್ಟಣದಲ್ಲಿ ಹೆಚ್ಚಿನ ಬಿರುಗಾಳಿ ಬೀಸುತ್ತಿದೆ.
ಗುಲಾಬ್ ಚಂಡಮಾರುತದ ಕೇಂದ್ರವು ನಿರೀಕ್ಷಿತ ಭೂಕುಸಿತದ ಬಿಂದುವಿನಿಂದ ಸುಮಾರು 25 ಕಿ.ಮೀ ಪೂರ್ವಕ್ಕೆ ಇದೆ ಎಂದು ಐಎಂಡಿ ತಿಳಿಸಿದೆ. ಈ ಚಂಡಮಾರುತವು ಮುಂದಿನ ಕೆಲವು ಗಂಟೆಗಳ ಕಾಲ ದಕ್ಷಿಣ ಕರಾವಳಿ ಒಡಿಶಾ ಮತ್ತು ಉತ್ತರ ಕರಾವಳಿ ಆಂಧ್ರಪ್ರದೇಶದಲ್ಲಿ ಮುಂದುವರಿಯುತ್ತದೆ.
ಗುಲಾಬ್ ಚಂಡಮಾರುತವು ಉತ್ತರ ಕರಾವಳಿ ಆಂಧ್ರಪ್ರದೇಶದಲ್ಲಿ ತನ್ನ ಭೂಕುಸಿತವನ್ನು ಪ್ರಾರಂಭಿಸುವ ಮೊದಲು ಶ್ರೀಕಾಕುಳಂನಲ್ಲಿ ಭಾರೀ ಮಳೆಯಾಗಿದೆ. ಗುಲಾಬ್ ಚಂಡಮಾರುತವು ಪಶ್ಚಿಮಕ್ಕೆ ಚಲಿಸುವ ನಿರೀಕ್ಷೆಯಿದೆ.

ಮಹಾರಾಷ್ಟ್ರದಾದ್ಯಂತ ಭಾರೀ ಮಳೆ ಎಚ್ಚರಿಕೆ
ಗುಲಾಬ್ ಚಂಡಮಾರುತದ ಪ್ರಭಾವದಿಂದಾಗಿ ಮಹಾರಾಷ್ಟ್ರದ ಎಲ್ಲಾ 36 ಜಿಲ್ಲೆಗಳಿಗೆ ಸೋಮವಾರ ಮತ್ತು ಮಂಗಳವಾರ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಮುನ್ಸೂಚನೆಯಂತೆ ಚಂದ್ರಪುರದಲ್ಲಿ ಸೋಮವಾರ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ ಮುಂಬೈ ಮತ್ತು ನೆರೆಯ ಜಿಲ್ಲೆಗಳಾದ ಥಾಣೆ, ಪಾಲ್ಘರ್ ಮತ್ತು ಇತರ 17 ಜಿಲ್ಲೆಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿರುಗಾಳಿ, ಗುಡುಗು ಮತ್ತು ಮಿಂಚಿನೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸೋಮವಾರ ರಾಯಗಢ, ರತ್ನಗಿರಿ, ಪುಣೆ, ಸತಾರ, ನಾಸಿಕ್, ಪರಭಾನಿ, ಲಾತೂರ್, ಹಿಂಗೋಲಿ, ನಾಂದೇಡ್, ಯಾವತ್ಮಲ್, ಗಡ್ಚಿರೋಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ರೈಲು ಸಂಚಾರ ರದ್ದು
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ತೀರದಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.
ಗುಲಾಬ್ ಚಂಡಮಾರುತ ಭಾನುವಾರ ಮಧ್ಯರಾತ್ರಿಗೆ ತನ್ನ ಅಬ್ಬರವನ್ನು ತಣ್ಣಗಾಗಿಸಲಿದೆ. ಗುಲಾಬ್ ಚಂಡಮಾರುತದ ದೆಸೆಯಿಂದ ದಕ್ಷಿಣ ಕೇಂದ್ರ ವಿಭಾಗದ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮುಖ್ಯವಾಗಿ ಭುವನೇಶ್ವರ -ಬೆಂಗಳೂರು ಪ್ರಶಾಂತಿ ಸ್ಪೆಷಲ್, ವಿಶಾಖಪಟ್ಟಣಂ ಗುನಪುರ್ ಸ್ಪೆಷಲ್, ಚೆನ್ನೈ ಪುರಿ ವಿಶೇಷ ರೈಲುಗಳನ್ನು ಈಸ್ಟ್ ಕೋಸ್ಟ್ ರೈಲು(ECoR) ವಿಭಾಗ ರದ್ದುಗೊಳಿಸಿದೆ. ಸೋಮವಾರ ಸಂಜೆ ನಂತರ ರೈಲು ಸಂಚಾರದ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತಿದೆ.












Click it and Unblock the Notifications