ವಂಚನೆ ಪ್ರಕರಣದಲ್ಲಿ ತೆಲುಗು ನಟನ ತಂದೆ ಬಂಧನ
ಹೈದರಾಬಾದ್, ಏಪ್ರಿಲ್ 22: ಜನಪ್ರಿಯ ತೆಲುಗು ಚಿತ್ರ 'ಕುಮಾರಿ 21ಎಫ್' ನ ನಾಯಕ ನಟ ರಾಜ್ ತರುಣ್ ಅವರ ತಂದೆ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಸ್ಥಳೀಯ ನ್ಯಾಯಾಲಯವು ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ನಟ ರಾಜ್ ತರುಣ್ ಅವರ ತಂದೆ ನಿದಮರ್ತಿ ಬಸವರಾಜು ಅವರ ವಿರುದ್ಧ ನಕಲಿ ಚಿನ್ನ ಪಡೆದು ಸಾಲ ನೀಡಿದ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಬಸವರಾಜು ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ನೀಡಲಾಗಿದೆ.
ನಿದಮರ್ತಿ ಬಸವರಾಜು ಅವರು ಸಿಂಹಾಚಲಂ ಬಳಿ ಬ್ಯಾಂಕಿನ ವಿಶೇಷ ಸಹಾಯಕ ಕ್ಯಾಷಿಯರ್ ಆಗಿ ಕರ್ತವ್ಯ ನಿರ್ವಹಿಸುವಾಗ, ನಕಲಿ ಚಿನ್ನವನ್ನು ಅಡವಿಟ್ಟುಕೊಂಡು 9.85 ಲಕ್ಷ ರೂ ನೀಡಿದ್ದರು. ನಕಲಿ ಚಿನ್ನ ಅಡವಿಡಲು ಬಂದವರು ಕೂಡಾ ಬಸವರಾಜು ಅವರ ಕುಟುಂಬದವರೇ ಆಗಿದ್ದರು. ಬಸವರಾಜು ಪತ್ನಿ ರಾಜ್ಯಲಕ್ಷ್ಮಿ ಹಾಗೂ ಸಂಬಂಧಿಕರು ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದರು.
ಬ್ಯಾಂಕ್ ಆಡಿಟ್ ವೇಳೆ ಈ ನಕಲಿ ಚಿನ್ನ-ಸಾಲ ವಿತರಣೆ ವಿಷಯ ಬಹಿರಂಗಗೊಂಡಿದ್ದು, ಗೋಪಾಲನಾಥಮ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪ ಬಹಿರಂಗವಾದಾಗ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ವಿಚಾರಣೆ ಬಳಿಕ ಬಸವರಾಜು ಅವರಿಗೆ 20,000 ರೂ. ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.