ತೆಲಂಗಾಣ ಸಿಎಂ ಕೆಸಿಆರ್ ನಡೆಸಿರುವ ಬಿಜೆಪಿ ವಿರೋಧಿ ಹೋರಾಟಕ್ಕೆ ದೇವೇಗೌಡರ ಬೆಂಬಲ
ಹೈದರಾಬಾದ್, ಫೆಬ್ರವರಿ 15: ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಜನತಾ ಪಕ್ಷವನ್ನು ಒಗ್ಗಟ್ಟಿನಿಂದ ಎದುರಿಸುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಯೋಜನೆಗೆ ಮತ್ತೊಂದು ಪ್ರಾದೇಶಿಕ ಪಕ್ಷ ಬೆಂಬಲಿಸಿದೆ.
ಜನತಾದಳ (ಜಾತ್ಯತೀತ) ಮುಖ್ಯಸ್ಥ ಎಚ್ಡಿ ದೇವೇಗೌಡರ ಮಂಗಳವಾರ ಮಧ್ಯಾಹ್ನ ಕೆಸಿಆರ್ ಅವರಿಗೆ ಕರೆ ಮಾಡಿ "ಕೋಮುವಾದಿ" ಶಕ್ತಿಗಳ ವಿರುದ್ಧದ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿರುವುದಾಗಿ ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ಕೆಸಿಆರ್ ಪ್ರಶ್ನೆಗೆ ಅಸ್ಸಾಂ ಸಿಎಂ ಉತ್ತರ; ಸರ್ಜಿಕಲ್ ಸ್ಟೈಕ್ ಬಗ್ಗೆ ಸಾಕ್ಷ್ಯ ಬಿಡುಗಡೆ
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕೆಸಿಆರ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಡೆದು ಆಳುವ ರಾಜಕೀಯದ ವಿರುದ್ಧ ಮುಖ್ಯಮಂತ್ರಿಯವರ ಹೋರಾಟವನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. "ಕೆಸಿಆರ್ ಅವರ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ, ದೇಶವನ್ನು ಉಳಿಸಲು ನಿಮ್ಮೊಂದಿಗೆ ನಿಲ್ಲುತ್ತೇನೆ," ಎಂದು ದೇವೇಗೌಡರು ಕೆಸಿಆರ್ ಅವರಿಗೆ ಹೇಳಿದ್ದಾರೆ.
ಶೀಘ್ರವೇ ಬೆಂಗಳೂರಿಗೆ ಕೆಸಿಆರ್ ಭೇಟಿ:
ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಶೀಘ್ರದಲ್ಲಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಬೆಂಗಳೂರಿಗೆ ಆಗಮಿಸಲಿದ್ದು, ದೇವೇಗೌಡರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ. 2019ರ ಚುನಾವಣೆಗೂ ಮೊದಲೇ ಕಾಂಗ್ರೆಸ್ಸೇತರ ಹಾಗೂ ಬಿಜೆಪಿಯೇತರ ಒಕ್ಕೂಟ ರಚನೆ ಬಗ್ಗೆ ಕೆಸಿಆರ್ ಮಾತನಾಡಿದ್ದರು. ರಾಷ್ಟ್ರೀಯ ರಾಜಕಾರಣದಲ್ಲಿ ಒಕ್ಕೂಟ ರಚನೆಯ ಮುಂದಾಳತ್ವ ವಹಿಸುವ ಬಗ್ಗೆ ಮಾತನಾಡಿದ್ದ, ಕೆ ಚಂದ್ರಶೇಖರ್ ರಾವ್, ತಮಗೆ ಪ್ರಧಾನಮಂತ್ರಿ ಆಗುವ ಅಭಿಲಾಷೆ ಇಲ್ಲ ಎಂದು ಒತ್ತಿ ಹೇಳಿದ್ದರು. "ನಾನು ಪ್ರಧಾನಮಂತ್ರಿ ಆಗಲು ಹೋರಾಡುತ್ತಿಲ್ಲ, ಬದಲಿಗೆ ಬದಲಾವಣೆ ತರಲು ಹೋರಾಡುತ್ತಿದ್ದೇನೆ," ಎಂದಿದ್ದರು. ರಾಷ್ಟ್ರೀಯ ನಾಯಕತ್ವದಲ್ಲಿ "ಗುಣಾತ್ಮಕ ಬದಲಾವಣೆ"ಗೆ ಕರೆ ನೀಡಿರುವ ಕೆಸಿಆರ್, "ರಾಷ್ಟ್ರೀಯ ಪಕ್ಷಗಳೆಂದು ಕರೆಯಲ್ಪಡುವ" ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ವಿಫಲವಾಗಿವೆ ಎಂದು ಕಿಡಿ ಕಾರಿದ್ದರು.
ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಓಡಿಸಲಾಗುವುದು ಎಂದ ಕೆಸಿಆರ್
ತೃತೀಯ ರಂಗ ರಚನೆಯ ಚರ್ಚೆ:
ಕೇಂದ್ರ ಸರ್ಕಾರವು ಸಹಕಾರಿ ಮನೋಭಾವದಲ್ಲಿ ಕೆಲಸ ಮಾಡುವ ಉತ್ಸಾಹವನ್ನು ಹೊಂದಿಲ್ಲ. ಈ ಹಿನ್ನೆಲೆ ತೃತೀಯ ರಂಗದ ರಚನೆಯ ಚರ್ಚೆಯು ಮುನ್ನಲೆಗೆ ಬಂದಿದೆ. ಇದರ ಮುಂದಾಳತ್ವ ವಹಿಸಲು ಮುಂದಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರ್ಜೆಡಿ ನಾಯಕ ತೇಜೇಸ್ವಿ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ.
ಪಶ್ಚಿಮ ಬಂಗಾಳ 4 ಪಾಲಿಕೆ ಚುನಾವಣೆಯಲ್ಲಿ ಟಿಎಂಸಿ ಗೆಲುವು, ಮಮತಾ ಅಭಿನಂದನೆ
ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲು ಮುಂಬೈಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೈದರಾಬಾದ್ಗೆ ಬರುವುದಾಗಿ ಹೇಳಿದ್ದು, ಈ ವಿಷಯದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಹೇಳಿದ್ದಾರೆ.
ಪ್ರಧಾನಮಂತ್ರಿಗೆ ಎಚ್ಚರಿಕೆ ನೀಡಿರುವ ಕೆಸಿಆರ್:
ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ನೆರವು ಸಿಗದಿದ್ದರೆ, ನರೇಂದ್ರ ಮೋದಿಯವರನ್ನೇ ಅಧಿಕಾರದಿಂದ ಓಡಿಸಲಾಗುವುದು ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಈ ಹಿಂದೆ ಎಚ್ಚರಿಕೆ ನೀಡಿದ್ದರು. "ನಮಗೆ ರಾಷ್ಟ್ರೀಯ ಯೋಜನೆಗಳನ್ನು ನೀಡುವುದಿಲ್ಲ, ಮೆಡಿಕಲ್ ಕಾಲೇಜುಗಳನ್ನು ನೀಡುವುದಿಲ್ಲ. ನೀವು ನಮಗೆ ಬೆಂಬಲಿಸುವುದಿಲ್ಲ ಎಂದರೆ ಪರವಾಗಿಲ್ಲ. ನಿಮ್ಮನ್ನು ಅಧಿಕಾರದಿಂದ ಓಡಿಸಿ, ನಮಗೆ ಬೆಂಬಲ ನೀಡುವ ಸರ್ಕಾರವನ್ನು ತರುತ್ತೇವೆ," ಎಂದು ಚಂದ್ರಶೇಖರ್ ಎಚ್ಚರಿಸಿದ್ದರು.
ಒಂದು ವೇಳೆ ಅಗತ್ಯ ಬಿದ್ದರೆ, ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಲು ನಾನು ಸಿದ್ಧನಿದ್ದೇನೆ. ದೇಶಕ್ಕಾಗಿ ನಾವು ಒಟ್ಟಾಗಿ ಹೋರಾಡಬೇಕಿದೆ. ನೀವು ನನಗೆ ಆಶೀರ್ವದಿಸಿದರೆ, ದೆಹಲಿಯ ಕೋಟೆಯನ್ನು ಒಡೆಯಲು ಸಿದ್ಧವಾಗಿದ್ದೇನೆ. ನರೇಂದ್ರ ಮೋದಿಯವರೇ ಹುಷಾರಾಗಿರಿ, ನಿಮ್ಮ ಬೆದರಿಕೆಗಳಿಗೆ ಇಲ್ಲಿ ಯಾರೂ ಹೆದರುವುದಿಲ್ಲ," ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೇಳಿದ್ದರು.