ಟಿಡಿಪಿ ಶಾಸಕ ವಂಶಿ ವಿರುದ್ಧ ಜಾಮೀನು ರಹಿತ ವಾರೆಂಟ್
ಹೈದರಾಬಾದ್, ಏಪ್ರಿಲ್ 04: ಆಂಧ್ರಪ್ರದೇಶದಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ಕೂಡಾ ನಡೆಯುತ್ತಿದ್ದು, ಚುನಾವಣಾ ಕಣ ಕಾವೇರುತ್ತಿದೆ. ತೆಲುಗು ದೇಶಂ ಪಾರ್ಟಿ(ಟಿಡಿಪಿ) ಶಾಸಕ ವಲ್ಲಭನೇನಿ ವಂಶಿ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ. ಹೈದರಾಬಾದಿನ ನಾಂಪಲ್ಲಿ ಕೋರ್ಟ್ ನಿಂದ ಶಾಸಕ ವಂಶಿಗೆ ವಾರೆಂಟ್ ಕಳಿಸಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
2009ರ ಶಸ್ತ್ರಾಸ್ತ್ರ ಕಾಯ್ದೆಯಡಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರೆಂಟ್ ಪಡೆದಿರುವ ವಂಶಿ ಅವರು ಈ ಬಾರಿ ಆಂಧ್ರಪ್ರದೇಶದ ಗನ್ನಾವರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಸರ್ಕಾರಿ ಭದ್ರತಾ ಸಿಬ್ಬಂದಿಗಳನ್ನು ಬದಲಾಯಿಸಿ ಖಾಸಗಿಯಾಗಿ ಅಂಗರಕ್ಷಕರನ್ನು ಹೊಂದಿರುವ ವಂಶಿ ಅವರು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘಿಸಿದ ಆರೋಪ ಹೊಂದಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಕಾರಣ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಆದರೆ, ಶಾಸಕ ವಂಶಿ ಅವರು ಸತತವಾಗಿ ವಿಚಾರಣೆಗೆ ಗೈರಾಗಿದ್ದರು. ಹೀಗಾಗಿ, ಕೋರ್ಟಿನಿಂದ ವಾರೆಂಟ್ ಜಾರಿಯಾಗಿದೆ.

ಈ ಪ್ರಕರಣವನ್ನು 2013ರಲ್ಲಿ ಹೈಕೋರ್ಟ್ ರದ್ದುಗೊಳಿಸಿದೆ ಎಂದು ಶಾಸಕ ವಂಶಿ ಹೇಳುತ್ತಿದ್ದು, ಈ ಕುರಿತ ಆದೇಶದ ಪ್ರತಿಯನ್ನು ನಾಂಪಲ್ಲಿ ಕೋರ್ಟಿಗೆ ನೀಡುವುದಾಗಿ ಹೇಳಿದ್ದಾರೆ.
175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಗೆ ಏಪ್ರಿಲ್ 11ರಿಂದ ಚುನಾವಣೆ ನಡೆಯಲಿದ್ದು, ಲೋಕಸಭೆ ಚುನಾವಣೆ ಮೇ 19ರ ತನಕ ಏಳು ಹಂತದಲ್ಲಿ ಮುಂದುವರೆಯಲಿದೆ. ಮೇ 23ರಂದು ಫಲಿತಾಂಶ ಹೊರ ಬರಲಿದೆ.












Click it and Unblock the Notifications