ಪರೀಕ್ಷೆ ಬರೆಯುವಾಗಲೇ ಹದಿನಾರು ವರ್ಷದ ವಿದ್ಯಾರ್ಥಿ ಸಾವು
ಹೈದರಾಬಾದ್ (ತೆಲಂಗಾಣ), ಮಾರ್ಚ್ 2: ವಾರ್ಷಿಕ ಪರೀಕ್ಷೆ ಬರೆಯುವ ವೇಳೆ ಹನ್ನೆರಡನೇ ತರಗತಿ ವಿದ್ಯಾರ್ಥಿ ಶನಿವಾರ ಸಾವನ್ನಪ್ಪಿದ ಘಟನೆ ಸಿಕಂದರಾಬಾದ್ ನಲ್ಲಿ ನಡೆದಿದೆ. ಇದರಿಂದ ಸಹಪಾಠಿಗಳು ಹಾಗೂ ಶಿಕ್ಷಕರು ದಿಗ್ಭ್ರಾಂತರಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹದಿನಾರು ವರ್ಷದ ಗೋಪಿ ರಾಜು ಮೃತಪಟ್ಟ ವಿದ್ಯಾರ್ಥಿ.
ಸಿಕಂದರಾಬಾದ್ ನಲ್ಲಿರುವ ಶ್ರೀ ಚೈತನ್ಯ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಕುಸಿದು ಬಿದ್ದ ಗೋಪಿ ರಾಜುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಪರೀಕ್ಷಾ ಕೇಂದ್ರದಿಂದ ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಗೋಪಿ ರಾಜು ಯಲ್ಲಾರೆಡ್ಡಿಗುಡ್ಡ ಪ್ರದೇಶದ ಸರಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಹೃದಯ ಸ್ಥಂಭನದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗುತ್ತಿದೆ. ತೆಲಂಗಾಣ ರಾಜ್ಯದಾದ್ಯಂತ ಹನ್ನೊಂದು- ಹನ್ನೆರಡನೇ ತರಗತಿ ಪರೀಕ್ಷೆಗೆ ಒಂಬತ್ತೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.