ವ್ಯಾಸರಾಯರ ಬೃಂದಾವನ ಧ್ವಂಸ; ವಿಶ್ವ ಹಿಂದೂ ಪರಿಷತ್ ಖಂಡನೆ
ಹುಬ್ಬಳ್ಳಿ, ಜುಲೈ 19: ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿರುವ ವ್ಯಾಸರಾಜರ ಮೂಲ ಬೃಂದಾವನವನ್ನು ಜುಲೈ 17ರ ರಾತ್ರಿ ಕೆಲ ದುಷ್ಕರ್ಮಿಗಳು ಧ್ವಂಸ ಮಾಡಿದ್ದು, ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದೆ.
"ಈ ಘಟನೆಯು ಆಘಾತಕಾರಿಯಾಗಿದೆ. ನವ ಬೃಂದಾವನ ಗಡ್ಡೆಯು ಹಂಪಿ ಪ್ರಾಧಿಕಾರದ ಕ್ಷೇತ್ರವ್ಯಾಪ್ತಿಯಲ್ಲಿದ್ದು, ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿದೆ. ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳಾಗಿರುವ ಈ ಪುಣ್ಯ ಸ್ಮಾರಕವನ್ನು ಸಂರಕ್ಷಿಸುವುದು ಸರ್ಕಾರದ ಹಾಗೂ ಹಂಪಿ ಪ್ರಾಧಿಕಾರದ ಆದ್ಯ ಕರ್ತವ್ಯ. ಇಂತಹ ಪವಿತ್ರ ಸ್ಮಾರಕಗಳು ಕಿಡಗೇಡಿಗಳಿಂದ ಧ್ವಂಸಗೊಳ್ಳಲು ಇಲಾಖೆಗಳ ನಿರ್ಲಕ್ಷ್ಯವೇ ಕಾರಣವೆನ್ನುವುದರಲ್ಲಿ ಸಂದೇಹವಿಲ್ಲ. ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಉಗ್ರವಾಗಿ ಖಂಡಿಸುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕರ್ನಾಟಕ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ.
ಸರ್ಕಾರ, ಆಡಳಿತ ಹಾಗೂ ಸಂಬಂಧಿತ ಇಲಾಖೆಗಳು ಮುಂದೆ ಇಂತಹ ಕೃತ್ಯ ನಡೆಯದಂತೆ ವಿಶೇಷ ರಕ್ಷಣೆ ನೀಡಬೇಕು. ದುಷ್ಕೃತ್ಯವೆಸಗಿದವರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬೃಂದಾವನವನ್ನು ಪುನರ್ ನಿರ್ಮಿಸಿ ಅದರ ಶ್ರದ್ಧೆ, ಪಾವಿತ್ರ್ಯ ಕಾಪಾಡಬೇಕು ಎಂದು ಪರಿಷತ್ ಆಗ್ರಹಿಸಿದೆ.













Click it and Unblock the Notifications