ಚುನಾವಣಾ ಕರ್ತವ್ಯಕ್ಕೆ ಹಾಜರಾಗದಿದ್ದಕ್ಕೆ ಬಿತ್ತು ಕ್ರಿಮಿನಲ್ ಕೇಸ್
ಹುಬ್ಬಳ್ಳಿ, ಏಪ್ರಿಲ್ 22: ರಾಜ್ಯದಲ್ಲಿ ನಡೆಯಲಿರುವ 2018ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಬಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಎಷ್ಟರ ಮಟ್ಟಿಗೆ ಅಂದರೆ ಶಿಕ್ಷಣಾಧಿಕಾರಿಯೊಬ್ಬರು ಕರ್ತವ್ಯಕ್ಕೆ ಹಾಜರಾಗದಿದ್ದಕ್ಕೆ ಚುನಾವಣಾ ಆಯೋಗ ಕ್ರಿಮಿನಲ್ ಕೇಸ್ ದಾಖಲಿಸಿದೆ.
ಡಿಡಿಪಿಐ ಕಚೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿರುವ ಬಸೀರ್ ಅಲಿಖಾನ್ ಶೇಖ್ ಅವರನ್ನು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಫ್ಲೈಯಿಂಗ್ ಸ್ಕ್ವಾಡ್ ಆಗಿ ನೇಮಕ ಮಾಡಿತ್ತು. ಜಿಲ್ಲಾಡಳಿತ ಮಾರ್ಚ್ 29ಕ್ಕೆ ಅವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಿತ್ತು. ಆದರೆ ನೇಮಕಗೊಂಡ ದಿನದಿಂದ ಕರ್ತವ್ಯಕ್ಕೆ ಇವತ್ತಿನವರೆಗೂ ಹಾಜರಾಗಿರಲಿಲ್ಲ.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಲಾಗಿದೆ. ಧಾರವಾಡ ಗ್ರಾಮೀಣ ಕ್ಷೇತ್ರದ ಚುನಾವಣಾಧಿಕಾರಿ ಜಯಮಾಧವ ಅವರು ಬಸೀರ್ ಅಲಿಖಾನ್ ಶೇಖ್ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಚುನಾವಣಾ ಅಕ್ರಮಗಳನ್ನು ತಡೆಯುವ ಜತೆಗೆ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗ ಈಗಾಗಲೇ ಸಾಕಷ್ಟು ಹೆಜ್ಜೆಗಳನ್ನು ಇಟ್ಟಿದೆ. ಟಿ.ಎನ್.ಶೇಷನ್ ಚುನಾವಣಾ ಆಯುಕ್ತರಾದ ನಂತರ ಆರಂಭವಾದ ಹೊಸತನಗಳು ಪ್ರತಿ ಚುನಾವಣೆಯಲ್ಲೂ ಮುಂದುವರಿಯುತ್ತಿವೆ. ಹೆಚ್ಚು ಅನಕ್ಷರಸ್ಥರಿರುವ ಭಾರತದಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ದುಡಿಸಿಕೊಳ್ಳುವಲ್ಲಿ ಆಯೋಗ ಯಶಸ್ವಿಯಾಗಿರುವುದು ವಿಶೇಷ.












Click it and Unblock the Notifications