ಹುಬ್ಬಳ್ಳಿಯಲ್ಲಿ ರಮಣೀಯ ಸನಸೆಟ್ ಪಾಯಿಂಟ್
ಹುಬ್ಬಳ್ಳಿ, ಡಿಸೆಂಬರ್ 14: ನಾವೆಲ್ಲ ನಿಸರ್ಗ ಸೌಂದರ್ಯ ಸವಿಯಲು ಮತ್ತು ಸನಸೆಟ್ (ಸೂರ್ಯಾಸ್ತ) ದ ಸುಂದರ ರಮಣೀಯ ದೃಶ್ಯ ನೋಡಲು ದೂರದ ಆಗುಂಬೆಗೆ ಹೋಗುತ್ತೇವೆ. ಆದರೆ ಹುಬ್ಬಳ್ಳಿ ನಗರದಲ್ಲಿಯೇ ಸನಸೆಟ್ ನೋಡಲು ಮನಮೋಹಕವಾಗಿ ಕಾಣುತ್ತದೆ.
ಮಲೆನಾಡಿನ ಸಮೀಪದಲ್ಲಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ವಾತಾವರಣ ಹಿತವಾಗಿಯೇ ಇದೆ. ಹೀಗಾಗಿ ನೃಪತುಂಗ ಬೆಟ್ಟ, ಸಂಜೀವಿನಿ ಪಾರ್ಕ್ ಗಳ ಮೇಲೆ ಸನಸೆಟ್ ನೋಡಲು ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಮಹಾನಗರ ಪಾಲಿಕೆ ವತಿಯಿಂದ ನಗರದ ಗೋಕುಲ ರಸ್ತೆಯಲ್ಲಿರುವ ತೋಳನಕೆರೆ, ಧಾರವಾಡ ರಸ್ತೆಯಲ್ಲಿರುವ ಉಣಕಲ್ ಕೆರೆಗಳಲ್ಲೂ ಸನಸೆಟ್ ನೋಡಲು ಅನುಕೂಲವಾಗುವಂತೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ವೇಳೆ ವಾಕಿಂಗ್ ಮತ್ತು ಜಾಗಿಂಗ್ ಬರುವ ನಾಗರಿಕರು ಸನಸೆಟ್ ನ ಸುಂದರ ದೃಶ್ಯವನ್ನು ನೋಡಿಕೊಂಡು ಸಂತಸದಿಂದ ಮನೆಗೆ ತೆರಳುತ್ತಾರೆ.[2015ರ ಕೊನೆಗಳಿಗೆಯಲ್ಲಿ ಕಂಡ ಸೂರ್ಯನ ನಾನಾ ಚಿತ್ತಾರ]
ಪ್ರೇಮಿಗಳ ಸ್ವರ್ಗ
ಸನಸೆಟ್ ಪಾಯಿಂಟ್ ಕೆಲವೊಂದು ಪ್ರೇಮಿಗಳಿಗೆ ಸ್ವರ್ಗ ಸಮಾನವಾಗಿದೆ. ಉಣಕಲ್ ಕೆರೆಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತ ಪ್ರೇಮಿಗಳು ಪ್ರಕೃತಿಯ ಸೌಂದರ್ಯ ಸವಿಯುತ್ತ ಆನಂದ ಪಡುತ್ತ ನಿಂತಿರುವುದನ್ನು ನೋಡುವುದೇ ಒಂದು ಸೊಬಗು. ಇನ್ನು ಕೆಲವರು ಸನಸೆಟ್ ಪಾಯಿಂಟ್ ನಲ್ಲಿ ನಿಂತುಕೊಂಡು ತಮ್ಮ ಫೋಟೋಗಳನ್ನು ಸೂರ್ಯ ಮುಳಗುವವರೆಗೂ ತೆಗೆಯುತ್ತ ನಿಂತಿರುತ್ತಾರೆ.
ಉಣಕಲ್ ಕೆರೆಯ ದೃಶ್ಯ
ಉಣಕಲ್ ಕೆರೆಯಲ್ಲಿರುವ ಸನಸೆಟ್ ಪಾಯಿಂಟ್ ಗಳು ಮೂರಕ್ಕೂ ಹೆಚ್ಚು ಇವೆ. ಇವುಗಳ ಮೇಲೆ ನಿಂತುಕೊಂಡರೆ ಮಧ್ಯದಲ್ಲಿರುವ ವಿವೇಕಾನಂದ ಮೂರ್ತಿಯ ಹಿಂದೆ ಸೂರ್ಯನು ಮುಳುಗುತ್ತಿರುವ ದೃಶ್ಯ ನಯನ ಮನೋಹರವಾಗಿದೆ. ಮಧ್ಯಾಹ್ನದ ಬೆಳ್ಳನೇಯ ಸೂರ್ಯನು ಸಂಜೆಯ ಹೊತ್ತಿಗೆ ಕೆಂಪಗಾಗುತ್ತ ಆಕಾಶದಲ್ಲೆಲ್ಲಾ ಮೋಡಗಳಿಗೂ ಕೆಂಪನೆಯ ಬೆಳಕನ್ನು ಚೆಲ್ಲುತ್ತ ಪಶ್ಚಿಮ ದಿಕ್ಕಿನಲ್ಲಿ ಮುಳುಗುವುದನ್ನು ನೋಡುವುದೇ ಒಂದು ಚೆಂದ ಹುಬ್ಬಳ್ಳಿಯಲ್ಲಿ.
ಪ್ರಕೃತಿ ಪ್ರೇಮಿಗಳ ಸಂಜೀವಿನಿ ಪಾರ್ಕ್
ಧಾರವಾಡದ ನವಲೂರು ರೈಲ್ವೆ ನಿಲ್ದಾಣದ ಬಳಿ ಇರುವ ಸಂಜೀವಿನಿ ಪಾರ್ಕ್ ನ ಗುಡ್ಡದ ಮೇಲೆ ಇರುವ ಸನಸೆಟ್ ಪಾಯಿಂಟ್ ಗಳೂ ಸಾಕಷ್ಟು ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಸಾಮಾನ್ಯವಾಗಿ ಪ್ರೇಮಿಗಳೇ ತುಂಬಿಕೊಂಡಿರುವ ಈ ಪಾರ್ಕ್ ನಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರಕೃತಿ ಪ್ರೇಮಿಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಜೆಯ ಹೊತ್ತಿನಲ್ಲಿ ಇಲ್ಲಿ ಕಂಡು ಬರುತ್ತಾರೆ. ಈ ಗುಡ್ಡ ಮೇಲೂ ಎರಡರಿಂದ ಮೂರು ಸನಸೆಟ್ ಪಾಯಿಂಟ್ ಗಳಿವೆ. ಚೆಂದನಾಗಿ ಕಾಣುವ ರವಿಯ ಕಿರಣಗಳು ಮೋಡದ ಮರೆಯಲ್ಲಿ ಹಾಯ್ದುಕೊಂಡು ಬರುವುದು ಇಲ್ಲಿಂದ ತುಂಬ ಸುಂದರವಾಗಿ ಕಾಣುತ್ತದೆ.
ಗೋಕುಲ ರಸ್ತೆಯಲ್ಲಿ ಸೂರ್ಯನ ಬಳಿಗೆ
ನಗರದ ಪ್ರತಿಷ್ಠಿತ ಪ್ರದೇಶ, ಬೆಂಗಳೂರಿನಲ್ಲಿರುವ ಎಂ.ಜಿ. ರೋಡ್ ನಂತೆ ಹುಬ್ಬಳ್ಳಿಯ ಎಂ. ಜಿ.ರೋಡ್ ಎಂದೇ ಕರೆಯಿಸಿಕೊಳ್ಳುವ ಗೋಕುಲ ರಸ್ತೆಯಲ್ಲಿಯೂ ಸಂಜೆಯ ಸೂರ್ಯನು ಮುಳಗುವ ದೃಶ್ಯ ವಾಹನ ಸವಾರರಿಗೆ ರಮಣೀಯವಾಗಿ ಕಾಣಿಸುತ್ತದೆ. ಹೊಸೂರಿನಿಂದ ಬರುವಾಗ ಕೆಎಸ್ ಆರ್.ಟಿ.ಸಿ. ಡಿಪೋ ಬಳಿಯಿಂದ ಸಂಜೆಯ ಹೊತ್ತು ಆಗಸದಿಂದ ಇಳಿಯುವ ಸೂರ್ಯನ ಸುಂದರ ದೃಶ್ಯ ವಿಮಾನ ನಿಲ್ದಾಣದವರೆಗೂ ಕಾಣಿಸುತ್ತದೆ. ವಾಹನ ಸವಾರರಿಗಂತೂ ನಾವು ಸೂರ್ಯನ ಬಳಿಯೇ ಹೋಗುತ್ತಿದ್ದೇವೆ ಎಂಬ ಭಾವನೆ ಮೂಡುವುದು ಇಲ್ಲಿ.
ಸೂರ್ಯಾಸ್ತಮಾನಕ್ಕೆ ವಾರ್ಧಾ ತಡೆ
ಚಳಿಗಾಲದ ಈ ಸಮಯದಲ್ಲಿ ಸಂಜೆಯ ಸೂರ್ಯನ ಮಧುರ ಬಿಸಿಲನ್ನು ಸವಿಯುತ್ತ ಕಣ್ಣು ತಂಪು ಮತ್ತು ದೇಹವನ್ನು ಬಿಸಿ ಮಾಡಿಕೊಳ್ಳುತ್ತಿದ್ದ ಪ್ರಕೃತಿ ಪ್ರೇಮಿಗಳಿಗೆ ಈಗ ಸ್ವಲ್ಪ ನಿರಾಸೆ. ಯಾಕೆಂದರೆ ಸೋಮವಾರದಿಂದ ಚೆನ್ನೈನ ಬಂದ ವಾರ್ಧಾ ಚಂಡಮಾರುತದ ಪರಿಣಾಮ ಹುಬ್ಬಳ್ಳಿಗೂ ತಟ್ಟಿದೆ. ಸೋಮವಾರ ಸಂಜೆಯ ಹೊತ್ತಿಗೆ ಸ್ವಲ್ಪ ಮಳೆ ಸುರಿದು ಸೂರ್ಯಾಸ್ತದ ದೃಶ್ಯ ಸವಿಯಲು ಬಂದವರಿಗೆ ನಿರಾಸೆಯಾಯಿತು. ಬುಧವಾರವೂ ಕೂಡ ಮೋಡದ ವಾತಾವರಣ ಮೂಡಿರುವುದರಿಂದ ಇಂದು ಕೂಡ ಸೂರ್ಯಾಸ್ತ ನೋಡುವುದು ಸಂಶಯವೇ ಆಗಿದೆ.
ಪ್ರವಾಸಿ ತಾಣವಾಗಬಹುದೇ?
ಸದ್ಯ ನಗರದ ನಾಲ್ಕು ಕಡೆಗಳಲ್ಲಿ ಪಾಲಿಕೆ ಮತ್ತು ಅರಣ್ಯ ಇಲಾಖೆಯು ಸನಸೆಟ್ ಪಾಯಿಂಟ್ ಗಳನ್ನು ನಿರ್ಮಿಸಿದೆ. ಆದರೆ ಇದರ ಬಗ್ಗೆ ಜನರಲ್ಲಿ ಜಾಗೃತಿ ಯಾವುದೇ ರೀತಿಯಿಂದಲೂ ಮೂಡಿಸುತ್ತಿಲ್ಲ. ಈ ಸನಸೆಟ್ ಪಾಯಿಂಟ್ ಗಳಿಂದ ಪ್ರವಾಸೋದ್ಯಮವನ್ನು ಉತ್ತೇಜಿಸಬಹುದು. ಯಾಕೆಂದರೆ ಹುಬ್ಬಳ್ಳಿಯಲ್ಲಿ ಯಾವುದೇ ಪ್ರವಾಸಿ ಸ್ಥಳಗಳಿಲ್ಲ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಕೇವಲ ಇಲ್ಲಿರುವ ಸನಸೆಟ್ ಪಾಯಿಂಟ್ ಗಳ ಬಗ್ಗೆ ಪ್ರಚಾರ ಮಾಡಿ ಮತ್ತು ಅಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿದಲ್ಲಿ ದೂರದ ಪ್ರವಾಸಿಗರು ಹುಬ್ಬಳ್ಳಿಯಲ್ಲಿ ಸನಸೆಟ್ ನೋಡಿಕೊಂಡೇ ಹೋಗೋಣವೇ ಎಂದು ಮಾತನಾಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ.