ಸಿದ್ಧಾರೂಢರ ತೆಪ್ಪೋತ್ಸವದಲ್ಲಿ ಖರ್ಜೂರದ ಬದಲು ಮೊಬೈಲ್ ಪುಷ್ಕರಣಿಗೆ
ಹುಬ್ಬಳ್ಳಿ, ಆಗಸ್ಟ್, 20- ಜಾಗೃತ ಸ್ಥಳವೆಂದೇ ಖ್ಯಾತಿ ಹೊಂದಿರುವ ನಗರದ ಸಿದ್ಧಾರೂಢರ ತೆಪ್ಪದ ರಥೋತ್ಸವ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮೂಹದ ಸಮ್ಮುಖದಲ್ಲಿ ಜರುಗಿತು. ಸಿದ್ಧಾರೂಢರ 87 ನೇ ಪುಣ್ಯತಿಥಿ ಅಂಗವಾಗಿ ಜರುಗಿದ ಶ್ರಾವಣ ಜಲರಥೋತ್ಸವಕ್ಕೆ ಇಂಚಲದ ಶಿವಾನಂದ ಭಾರತಿ ಸ್ವಾಮೀಜಿ ಚಾಲನೆ ನೀಡಿದರು.
ಆ ನಂತರ ಭಕ್ತರ ಹರ್ಷೋದ್ಗಾರದ ಮಧ್ಯೆ ಮಠದ ಆವರಣದಲ್ಲಿನ ಪುಷ್ಕರಣಿಯಲ್ಲಿ ತೆಪ್ಪದಲ್ಲಿದ್ದ ರಥವನ್ನು ಐದು ಬಾರಿ ಸುತ್ತು ಹಾಕಲಾಯಿತು. ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ವಿಜಯಪುರದಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಭಕ್ತರು ಪುಷ್ಕರಣಿಯ ಸುತ್ತಮುತ್ತ ನಿಂತಿದ್ದರು. ಭಕ್ತರಿಗೆ ಮಠದ ವತಿಯಿಂದ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ ಶ್ರೀಮಠಕ್ಕೆ ಭೇಟಿ ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದುಕೊಂಡರು.[ಆಗಸ್ಟ್ 28ರಂದು ಧಾರವಾಡ ಐಐಟಿ ಉದ್ಘಾಟನೆ]
ಉತ್ತತ್ತಿ ಎಸೆತ: ಶ್ರಾವಣ ಮಾಸದಲ್ಲಿ ಜರುಗುವ ಸುಪ್ರಸಿದ್ಧ ಸಿದ್ಧಾರೂಢರ ಜಲ ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಉತ್ತತ್ತಿ, ಬಾಳೆಹಣ್ಣು ರಥಕ್ಕೆ ತೂರಿ ಶುಭ ಹಾರೈಸಿದರು. ಕೆಲವರು ಹತ್ತಿರದಲ್ಲಿಯೇ ಬಿದ್ದ ಉತ್ತತ್ತಿ , ಬಾಳೆಹಣ್ಣುಗಳನ್ನು ಸಿದ್ಧಾರೂಢರ ಪ್ರಸಾದವೆಂದು ಸ್ವೀಕರಿಸಿ ಎಲ್ಲರಿಗೂ ಹಂಚಿದರು.
ಮೊಬೈಲ್ ಎಸೆದರು: ಸಿದ್ಧಾರೂಢರ ರಥವು ಜಲದಲ್ಲಿ ನಡೆಯುತ್ತದೆ. ಹೀಗಾಗಿ ಪುಷ್ಕರಣಿಯ ಸುತ್ತಮುತ್ತಲೂ ಜನಸಂದಣಿ ನೆರೆದಿರುತ್ತದೆ. ರಥವನ್ನು ತೆಪ್ಪದಲ್ಲಿ ಇಟ್ಟುಕೊಂಡು ಪುಷ್ಕರಣಿಯಲ್ಲಿ ಐದು ಸುತ್ತು ಹಾಕುವಾಗ ತಾವು ನಿಂತುಕೊಂಡ ಸ್ಥಳದ ಸಮೀಪ ರಥವು ಬಂದ ಕೂಡಲೇ ಉತ್ತತ್ತಿ ಎಸೆದರಾಯಿತೆಂದು ಹಲವಾರು ಜನರು ಉತ್ತತ್ತಿ ಬದಲು ತಮ್ಮ ಕೈಲಿದ್ದ ಮೊಬೈಲ್ ಎಸೆದರು.[ಗೊಂದಲ ಸೃಷ್ಟಿಸಿದ ಜ್ಯೋತಿಷಿ: ವ್ರತ ಯಾವತ್ತು ಮಾಡೋದ್ರಿ?]
ಕನಿಷ್ಠ 10 ರಿಂದ 15 ಜನ ಉತ್ತತ್ತಿ ಎಂದುಕೊಂಡು ತಮ್ಮ ಕೈಲಿದ್ದ ಮೊಬೈಲ್ ಫೋನನ್ನೇ ಎಸೆದು ಸಿದ್ಧಾರೂಢರ ಆಶೀರ್ವಾದ ಕೋರಿದರು. ಆದರೆ ಎಸೆದ ಮೊಬೈಲ್ ಪುಷ್ಕರಣಿಯಲ್ಲಿ ಬಿದ್ದು ಉಳಿದ ಜನ ನಗೆಯಾಡುವಂತಾಗಿತ್ತು.