ಹಳೇ ಹುಬ್ಬಳ್ಳಿ ಕೇಸ್: ಪ್ರಕರಣ ಹಿಂಪಡೆದಿರುವುದು ಸರಿಯಾಗಿಯೇ ಇದೆ ಎಂದ ಪ್ರಭಾವಿ ಸಚಿವ
ಹಳೇ ಹುಬ್ಬಳ್ಳಿ ಪ್ರಕರಣದ ಸರ್ಕಾರ ಬೇಡದ ಮುಜುಗರವನ್ನು ಅನುಭವಿಸುತ್ತಿದೆ. ಹಳೇ ಹುಬ್ಬಳ್ಳಿ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಪಡೆದಿರುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕೋರ್ಟ್ ಅನುಮತಿ ನೀಡಿದರೆ ಮಾತ್ರ ಈ ಪ್ರಕರಣವನ್ನು ಹಿಂಪಡೆಯಲು ಸಾಧ್ಯ ಎಂದಿದ್ದಾರೆ. ಆದರೆ, ಈ ನಡುವೆ..
ರಾಜ್ಯದ ಪ್ರಮುಖ ಸಚಿವರೊಬ್ಬರು ಹಳೇ ಹುಬ್ಬಳ್ಳಿ ಪ್ರಕರಣದ ಪರವಾಗಿ ಮಾತನಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ಈಗಾಗಲೇ ಹಲವು ವಿವಾದಗಳು, ಹಗರಣಗಳ ವಿಷಯ ಸದ್ದು ಮಾಡುತ್ತಿದೆ. ಈ ನಡುವೆ ರಾಜ್ಯ ಸರ್ಕಾರವು ಹಳೇ ಹುಬ್ಬಳ್ಳಿ ಕೇಸ್ ವಾಪಸ್ ಪಡೆದಿರುವುದು ಭಾರೀ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಹಾಗೂ ಬಿಜೆಪಿಯ ನಾಯಕರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಇದೀಗ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಹಳೇ ಹುಬ್ಬಳ್ಳಿ ಕೇಸ್ ಅನ್ನು ಹಿಂಪಡೆದಿರುವ ಬಗ್ಗೆ ಮಾತನಾಡಿದ್ದಾರೆ. ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ವಾಪಸ್ ಪಡೆದ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದಿದ್ದಾರೆ. ಈ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡಲಿ ಬೇಡ ಎಂದವರಾರು ಎಂದು ಅವರು ಪ್ರಶ್ನಿಸಿದ್ದಾರೆ.
ವಕೀಲರು ಕೋರ್ಟ್ಗೆ ಹೋಗಲಿ ಕೋರ್ಟ್ ಇರುವುದೇ ವಿಚಾರಣೆ ಮಾಡುವುದಕ್ಕೆ. ಮುಡಾ ವಿಚಾರವಾಗಿ ಬಿಜೆಪಿಯವರು ಪಾದಯಾತ್ರೆ ಮಾಡಿದರು. ಇದೇ ಬಿಜೆಪಿಯವರ ಮೇಲೆ ಎಷ್ಟು ಎಫ್ಐಆರ್ ಇದೇ ನೋಡಿಕೊಳ್ಳಲಿ. ಕೇಂದ್ರ ಸಚಿವರುಗಳ ಮೇಲೆ ಶೇ.39 ರಷ್ಟು ಕೇಸ್ ಇವೆ. ಅವರನ್ನು ಒಳಗೆ ಹಾಕಬೇಕಿತ್ತು. ಅವರಿಂದ ರಾಜೀನಾಮೆ ಕೇಳಬೇಕಿತ್ತು ಅಲ್ಲವೇ ಎಂದೂ ಅವರು ಹೇಳಿದ್ದಾರೆ.
ಮುಂದುವರಿದು ಖರ್ಗೆ ಸೈಟ್ ವಾಪಸ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸೈಟ್ ವಾಪಸ್ ಕೊಟ್ಟಿದ್ದಾರೆ ಎಂದರೆ ಅದು ಅವರ ದೊಡ್ಡ ಗುಣ. ಅದಕ್ಕೆ ಬಿಜೆಪಿಯವರು ಖುಷಿಯಾಗಬೇಕು. ಅದಕ್ಕೆ ಯಾಕೆ ರಾಜೀನಾಮೆ ಕೇಳಬೇಕು ಎಂದಿದ್ದಾರೆ. ಪ್ರೇರಣಾ ಟ್ರಸ್ಟ್ಗೆ ದುಡ್ಡು ಬಂದ ಮೇಲೆಯೇ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದರು. ಯಾಕೆ ಮಾಡಿದ್ದು ಎಂದರೆ ಅವರ ಬಳಿ ವಾಷಿಂಗ್ ಮಶಿನ್ ಇದೆ ಅದರಲ್ಲಿ ಹಾಕಿದ ತಕ್ಷಣ ಎಲ್ಲರೂ ಬೆಳ್ಳಗೆ ಆಗುತ್ತಾರೆ ಎಂದು ವ್ಯಂಗ್ಯವಾಡಿದರು.
ಅತಿಥಿ ಶಿಕ್ಷಕರು ಹಾಗೂ ಅಡುಗೆ ಸಹಾಯಕರ ವೇತನ ಹೆಚ್ಚಳ ಮಾಡಬೇಕಿದೆ. ಸಿಎಂ ಜೊತೆ ಮಾತನಾಡಿದ್ದೇನೆ. ಶಿಕ್ಷಕರು ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅವರ ವೇತನ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಏನಿದು ಹಳೇ ಹುಬ್ಬಳ್ಳಿ ಪ್ರಕರಣ: ಧಾರವಾಡ ಜಿಲ್ಲೆಯ ಹಳೇ ಹುಬ್ಬಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ಕೋಮುಗಲಭೆ ಸೃಷ್ಟಿಯಾಗಿತ್ತು. ಎರಡು ಸಮುದಾಯಗಳ ನಡುವೆ ಒಂದು ನಿರ್ದಿಷ್ಟ ಧರ್ಮದ ಆರಾಧಕರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತವಾಗಿತ್ತು. ತಡರಾತ್ರಿ ಹಳೇ ಹುಬ್ಬಳ್ಳಿಯಲ್ಲಿ ಭಾರೀ ಗಲಾಟೆ ನಡೆದಿತ್ತು. ಅದರಲ್ಲಿ ಪೊಲೀಸ್ ವಾಹನಗಳನ್ನು ಜಖಂಗೊಳಿಸಲಾಗಿತ್ತು. ಅಲ್ಲದೇ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿ, ದಾಳಿ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ.












Click it and Unblock the Notifications