ತಾವು ಬೃಹತ್ ಕೈಗಾರಿಕಾ ಸಚಿವರಾಗಿದ್ದು ಹೇಗೆ? ಗುಟ್ಟು ಬಿಚ್ಚಿಟ್ಟ ಮುರುಗೇಶ್ ನಿರಾಣಿ!
ಹುಬ್ಬಳ್ಳಿ, ಸೆ. 27: ಅದೊಂದು ಅಪರೂಪದ ಕ್ಷಣ. ಅಲ್ಲಿ ಅಧಿಕಾರದ ಹಮ್ಮು-ಬಿಮ್ಮು, ದೊಡ್ಡವರು, ಚಿಕ್ಕವರು ಯಾವುದೂ ಇರಲಿಲ್ಲ. ಬದಲಿಗೆ ವಿಧೇಯಕ ವಿದ್ಯಾರ್ಥಿಗಳಂತೆ ಅವರೆಲ್ಲರೂ ಬೆರೆತರು. ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿ ಪ್ರತಿಷ್ಠಿತ ಬಿವಿಬಿ ಎಂಜಿನಿಯರಿಂಗ್ ಕಾಲೇಜು. ಇದೇ ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ ನಿರಾಣಿ ತಮ್ಮ ಮನದಾಳದ ಮಾತನ್ನು ಆಡಿದ್ದಾರೆ.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ವಿ. ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ 75 ನೇ ವರ್ಷಾಚರಣೆ ಹಾಗೂ ಕೆಎಲ್ಇ ಟೆಕ್ ಪಾರ್ಕ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ.
ಇದೇ ಕಾರ್ಯಕ್ರಮದಲ್ಲಿ ತಾವು ಕೈಗಾರಿಕಾ ಸಚಿವರಾಗಿದ್ದು ಹೇಗೆ? ಎಂಬ ಗುಟ್ಟನ್ನು ಸಚಿವ ಮುರುಗೇಶ್ ನಿರಾಣಿ ಬಿಟ್ಟುಕೊಟ್ಟರು. ಅವರು ಸಚಿವರಾಗಿದ್ದು ಹೇಗೆ? ಅವರೇ ಹಂಚಿಕೊಂಡ ಮಾಹಿತಿ ಹೀಗಿದೆ!
ಸ್ನೇಹದ ಮುಂದೆ ಅಧಿಕಾರ ಗೌಣ!
ಇದರಲ್ಲಿ ವಿಶೇಷತೆ ಎಂದರೆ ಈ ಇಬ್ಬರೂ ಇದೇ ಕಾಲೇಜಿನ ಸಹಪಾಠಿಗಳು. ಹಾಗಾಗಿಯೇ ಇಂದು ಅವರು ಉನ್ನತ ಸ್ಥಾನಮಾನದಲ್ಲಿದ್ದರೂ ತಾವು ಕಾಲೇಜಿನ ವಿಧೇಯಕ ಹಳೆಯ ವಿದ್ಯಾರ್ಥಿಗಳು. ಸ್ನೇಹದ ಮುಂದೆ ಅಧಿಕಾರ ಗೌಣ ಎಂಬುದನ್ನು ಅಕ್ಷರಶಃ ತೋರಿಸಿಕೊಟ್ಟಿದ್ದು ವಿಶೇಷವಾಗಿತ್ತು.
ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹುಬ್ಬಳ್ಳಿಯ ಬಿವಿಬಿ ಎಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಇಂದಿನ ಕಾರ್ಯಕ್ರಮದಲ್ಲಿ ತಮ್ಮ ಕಾಲೇಜಿನ ಹಳೆಯ ದಿನಗಳನ್ನು ಮೆಲುಕು ಹಾಕಿದರು. ತಾವು ಕೈಗಾರಿಕಾ ಸಚಿವರಾಗಿದ್ದರ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟರು.
ತಮ್ಮ ಸಚಿವಸ್ಥಾನದ ಗುಟ್ಟು ರಟ್ಟು ಮಾಡಿದ ಸಚಿವ ನಿರಾಣಿ!
"ನಾನು ಎಂಜಿನಿಯರಿಂಗ್ನಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಂಡಿದ್ದರೆ ಪ್ರೊಫೆಸರ್ ಅಥವಾ ಹೆಚ್ಚೆಂದರೆ ಎಇಇ ಆಗುತ್ತಿದ್ದೆ. ಆದರೆ ನಾವು 35 ಮಾರ್ಕ್ಸ ಕೆಟಗೆರಿಯವರು. ಅದಕ್ಕೆ ಕೈಗಾರಿಕಾ ಸಚಿವನಾದೆ ಎಂದು ಹೇಳಿದರು. ಸಚಿವ ನಿರಾಣಿ ಅವರ ಮಾತಿಗೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಚಪ್ಪಾಳೆ ತಟ್ಟಿದರು. ಅದಕ್ಕೂ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ಸಚಿವ ನಿರಾಣಿ, "ನಿಮ್ಮ ಚಪ್ಪಾಳೆ ನೋಡಿದರೆ ಇಲ್ಲಿ ನನ್ನ ಕೆಟಗರಿಯವರೇ ಬಹಳ ಜನ ಇದ್ದಾರೆಂದು ತಿಳಿಯುತ್ತದೆ" ಎಂದು ತಮಾಷೆ ಮಾಡಿದರು.
ಇದು ಎಲ್ಲಕ್ಕಿಂತ ದೊಡ್ಡ ಕಾರ್ಯಕ್ರಮ!
"ನಾನು ನಮ್ಮ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಬಹಳ ಖುಷಿಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೆನೆ. ಅದಕ್ಕಿಂದ ಖುಷಿ ಈ ಕಾರ್ಯಕ್ರಮ ಕೊಡುತ್ತಿದೆ ಎಂದು ಸಚಿವ ಮುರುಗೇಶ ನಿರಾಣಿ ಸಂತಸ ವ್ಯಕ್ತಪಡಿಸಿದರು.
"ಬಿವಿಬಿ ಕಾಲೇಜು ಸಾಕಷ್ಟು ಜನ ಮೇಧಾವಿಗಳನ್ನು ನೀಡಿದೆ. ವಿಶ್ವದ ಪ್ರತಿಷ್ಠಿತ ಐಟಿ ಕಂಪನಿಯಾಗಿರುವ ಇನ್ಫೋಸಿಸ್ನ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ, ಬಿಜೆಪಿಯ ಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ ಅವರೆಲ್ಲರೂ ಈ ಕಾಲೇಜಿನ ವಿದ್ಯಾರ್ಥಿಗಳು" ಎಂದು ಸಚಿವ ನಿರಾಣಿ ಹೇಳಿದರು.
Recommended Video
ಬಿವಿಬಿ ಕಾಲೇಜು ವಿದ್ಯಾರ್ಥಿಗಳು ಸಿಎಂ ಹಾಗೂ ಸಚಿವರು!
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಾಲೇಜಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಪ್ರಾಧ್ಯಾಪಕರು, ಹಿರಿಯ-ಕಿರಿಯ ಸಹಪಾಠಿಗಳನ್ನು, ಹಾಜರಾಗದ ಪ್ರಯೋಗಾಲಯಗಳು, ಪುಸ್ತಕ ಪಡೆಯದ ಗ್ರಂಥಾಲಯಗಳು, ಹಾಸ್ಟೆಲು, ಕ್ಯಾಂಪಸ್, ಕ್ಯಾಂಟೀನ್ ಎಲ್ಲವನ್ನೂ ವಿನೋದವಾಗಿ ನೆನಪಿಸಿಕೊಂಡರು.
ಸರ್ಕಾರದ ಅತ್ಯುನ್ನತ ಹುದ್ದೆಯ ಒತ್ತಡದ ಮಧ್ಯೆ ಒಂದಿಷ್ಟು ಕಾಲ ಬಿವಿಬಿ ಎಂಜನಿಯರಿಂಗ್ ಕಾಲೇಜಿನಲ್ಲಿ ತಾವು ಕಳೆದ ಕಾಲವನ್ನು ಇಬ್ಬರೂ ನಾಯಕರು ನೆನಪಿಸಿಕೊಂಡಿದ್ದು ವಿಶೇಷವಾಗಿತ್ತು.