ಬೇಡ ಬೇಡ ಎಂದರೂ ಪತ್ನಿಯ ಎದುರೇ ಹುಬ್ಬಳ್ಳಿಯಲ್ಲಿ ಕೆರೆಗೆ ಹಾರವಾದ ಪತಿ!
ಹುಬ್ಬಳ್ಳಿ, ಡಿ. 25: ಪತ್ನಿ ಹಿಂಬಾಲಿಸುತ್ತಿದ್ದರೂ, ಸಾಯುತ್ತೇನೆಂದು ಹೇಳುತ್ತಲೇ ಕೆರೆಯ ಕಡೆಗೆ ಓಡಿದ ವ್ಯಕ್ತಿಯೊಬ್ಬ ಪತ್ನಿ ಎದುರೇ ಕೆರೆಗೆ ಹಾರಿದ ಘಟನೆ ಹುಬ್ಬಳ್ಳಿಯ ಸಂತೋಷ್ ನಗರದ ಕೆರೆಯಲ್ಲಿ ನಡೆದಿದೆ. ಪತ್ನಿ ಎಷ್ಟೇ ಹೇಳುತ್ತಿದ್ದರೂ ತಾನು ಸಾಯುತ್ತೇನೆಂದು ಕೆರೆಯ ಕಡೆಗೆ ಓಡಿದ್ದ ರೋಹಿತ್ ಪಾಟೀಲ್ ಕೊನೆಗೆ ಶವವಾಗಿ ಪತ್ತೆಯಾಗಿದ್ದಾನೆ. ತನ್ನೆದುರಿಗೆ ನಡೆದ ಘಟನೆಯಿಂದ ಪತ್ನಿ ರೋಧಿಸುತ್ತ ಕೆರೆ ದಂಡೆಯಲ್ಲಿ ಕುಳಿತಿದ್ದ ದೃಶ್ಯ ಕರಳು ಹಿಂಡುವಂತಿತ್ತು. ಬೆಳ್ಳಂಬೆಳಗ್ಗೆ ನಡೆದ ಈ ದುರ್ಘಟನೆಯಿಂದ ಸ್ಥಳೀಯರು ದಿಗ್ಬ್ರಮೆಗೊಂಡಿದ್ದಾರೆ.
ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ನೇರವಾಗಿ ಕೆರೆಗೆ ಹಾರಿದ ರೋಹಿತ್ ಪಾಟೀಲ್, ಕೋಪದ ಕೈಯಲ್ಲಿ ಬುದ್ದಿ ಕೊಟ್ಟು ಜೀವ ಕಳೆದುಕೊಂಡಿದ್ದಾನೆ. ಹುಬ್ಬಳ್ಳಿಯ ಸಂತೋಷ್ ನಗರದಲ್ಲಿ ಮೃತನು ಟಿಫಿನ್ ಸೆಂಟರ್ ನಡೆಸುತ್ತಿದ್ದ, ಹೀಗಾಗಿ ಸ್ಥಳೀಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ. ಪತ್ನಿಯ ಎದುರೆ ಕೆರೆಗೆ ಹಾರಿದ ಅವನನ್ನು ಉಳಿಸಲು ಸ್ಥಳೀಯರು ತಕ್ಷಣವೇ ಸೀರೆಗಳನ್ನು ಕಟ್ಟಿ ಕೆರೆಯಲ್ಲಿ ಇಳಿದು ಹುಡುಕಾಟ ನಡೆಸಿದರು, ಆದರೆ ಯಾವುದೆ ಪ್ರಯೋಜನವಾಗಲಿಲ್ಲ.
ರೋಹಿತ್ ಪಾಟೀಲ್, ರಾತ್ರಿಯಿಂದಲೇ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಬೆಳಿಗ್ಗೆ ಎದ್ದ ತಕ್ಷಣವೇ ಮತ್ತೆ ರಂಪಾಟ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಮನೆಯಿಂದ ಹೋಗಿದ್ದಾನೆ. ತಕ್ಷಣವೇ ಹಿಂದೆಯೆ ಓಡಿ ಬಂದಿದ್ದ ಪತ್ನಿ, ಎಷ್ಟೇ ತಿಳಿಸಿ ಹೇಳಿದರೂ, ಆಕೆಯ ಎದುರೇ ಕೆರೆಗೆ ಹಾರಿದ್ದ.

ಕಣ್ಣೆದುರೆ ನಡೆದ ಈ ಘಟನೆ ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಬಂದು ರೋಹಿತ್ಗಾಗಿ ಪೊಲೀಸರು ಹುಡುಕಾಟ ನಡೆಸಿದರು. ಆದರೆ, ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಆತನು ಶವವಾಗಿ ಪತ್ತೆಯಾಗಿದ್ದಾನೆ. ಕುಡಿತದ ಕಾರಣದಿಂದ ಪತ್ನಿ-ಪತಿ ನಡುವೆ ಆಗಾಗ ಜಗಳ ಆಗುತ್ತಿತ್ತು. ಅದು ಹೆಚ್ಚಾಗಿದ್ದರಿಂಲೇ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು.












Click it and Unblock the Notifications