ನನ್ನ ರಾಜಕೀಯ ಗುರುವಿನ ಮಗ ಕಾಂಗ್ರೆಸ್ ಸೇರ್ಪಡೆಯಿಂದ ಸಂತಸವಾಗಿದೆ
ಹುಬ್ಬಳ್ಳಿ, ಜುಲೈ 30: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶುಕ್ರವಾರ ಹುಬ್ಬಳ್ಳಿಯಲ್ಲಿ ನಡೆದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ಸಾರಾಂಶ ಇಲ್ಲಿದೆ.
"ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದಭಜನೆ ಪರಮ ಸುಖವಯ್ಯ.. ಎಂದು ಪುರಂದರದಾಸರು ಹೇಳಿದ್ದಾರೆ. ಮಾಜಿ ಸಿಎಂ ದಿ. ಎಸ್. ಬಂಗಾರಪ್ಪನವರ ಗರಡಿಯಲ್ಲಿ ಬೆಳೆದ ನಾನು ಸುಮಾರು 10 ವರ್ಷಗಳಿಂದ ಮೀನಿಗೆ ಗಾಳ ಹಾಕಿದ್ದೆ. ಒಂದು ದಿನ ಬೆಳಗ್ಗೆ 10 ರಿಂದ ರಾತ್ರಿ 3 ಗಂಟೆವರೆಗೂ ಗಾಳ ಹಾಕಿದ್ದೇವೆ. ಆದರೂ ಮೀನು ಗಾಳಕ್ಕೆ ಕಚ್ಚಿರಲಿಲ್ಲ. ಆಗಲೇ ಕಚ್ಚಿದ್ದರೆ ಇಷ್ಟು ಹೊತ್ತಿಗೆ ಮಾಜಿ ಮಂತ್ರಿಯಾಗಿರುತ್ತಿದ್ದರು. ನನ್ನ ಅಧ್ಯಕ್ಷತೆಯಲ್ಲಿ, ನನ್ನ ರಾಜಕೀಯ ಗುರುಗಳ ಮಗನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ನನ್ನ ಭಾಗ್ಯ.''
"ನಾನು ಮೊನ್ನೆ ಯೂತ್ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿದ್ದಾಗ ಹೇಳಿದ್ದೆ, ನಿನ್ನೆ ಆಗಿದ್ದೆಲ್ಲ ಇತಿಹಾಸ, ನಾಳೆ ಬರುವುದು ಭವಿಷ್ಯ. ಆದರೆ ಈ ದಿನ ನಿಮ್ಮದು. ಅದನ್ನು ನೀವು ಬಳಸಿಕೊಳ್ಳುವುದು ಮುಖ್ಯ. ರಾಜಕಾರಣದಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ನಿತ್ಯ ಏನು ಸೇವೆ ಸಲ್ಲಿಸುತ್ತಿದ್ದೇವೆ. ಎಷ್ಟು ಜನರನ್ನು ಸೇರಿಸುತ್ತಿದ್ದೇವೆ. ಎಷ್ಟು ಬಲ ತುಂಬುತ್ತಿದ್ದೇವೆ ಎಂಬುದು ಮುಖ್ಯವಾದ ವಿಚಾರ.''

"ಇಂದು ಪಕ್ಷಕ್ಕೆ ನೂರಾರು ಜನ ಸೇರುತ್ತಿದ್ದಾರೆ. ನಾವು ಮಧು ಬಂಗಾರಪ್ಪರನ್ನು ಪಕ್ಷದ ಕಚೇರಿಯಲ್ಲೇ ಸೇರಿಸಿಕೊಳ್ಳಬಹುದಿತ್ತು. ನಾವು ಅವರನ್ನು ವ್ಯಕ್ತಿಯಾಗಿ ಸೇರಿಸಿಕೊಳ್ಳುತ್ತಿಲ್ಲ. ಅವರನ್ನು ಪಕ್ಷಕ್ಕೆ ಶಕ್ತಿಯಾಗಿ ಸೇರಿಸಿಕೊಳ್ಳುತ್ತಿದ್ದೇವೆ.
"ನನ್ನ ರಾಜಕಾರಣದ ಆರಂಭಿಕ ದಿನಗಳಲ್ಲಿ ಎಸ್.ಬಂಗಾರಪ್ಪನವರು ಮುಖ್ಯಮಂತ್ರಿ ಆದರು. ನಂತರ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಆಗ ನಾನು ಹಾಗೂ ಬೆಳ್ಳಿಯಪ್ಪನವರು ಬಂಗಾರಪ್ಪರನ್ನು ಭೇಟಿ ಮಾಡಿ, ನಾವಿಬ್ಬರು ಏನು ಮಾಡಬೇಕು ಎಂದು ಕೇಳಿದ್ದೇವು. ಆಗ ಅವರು, ನೀನು ನನ್ನ ಜತೆ ಬರಬೇಡ, ಎಸ್.ಎಂ. ಕೃಷ್ಣ ಜತೆ ಕಾಂಗ್ರೆಸ್ ಪಕ್ಷದಲ್ಲಿರು ಎಂದರು. ಅವರು ನನ್ನ ಜತೆ ಬಾ ಎಂದಿದ್ದರೆ ನಾನು ಯಾವ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ ಎಂದು ಗೊತ್ತಿಲ್ಲ. ಇಂತಹ ಅನೇಕ ಘಟನೆಗಳು ನನ್ನ ಕಣ್ಣ ಮುಂದೆ ಬರುತ್ತಿವೆ. ಅವರ ಸುಪುತ್ರ ಪಕ್ಷ ಬಿಟ್ಟಾಗ, ಬೇರೆ ಪಕ್ಷ ಸೇರಿಕೊಂಡಾಗ ಮನಸ್ಸಿಗೆ ಬಹಳ ನೋವಾಗಿತ್ತು.

"ನದಿ ನೀರು ಸಮುದ್ರ ಸೇರುವ ಹಾಗೇ, ಮಧು ಬಂಗಾರಪ್ಪ ಇಂದು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರುತ್ತಿದ್ದಾರೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ.
"ಮಧು ಬಂಗಾರಪ್ಪ ಜತೆ ಇಂದು ನೂರಾರು ಜನ ಕಾರ್ಯಕರ್ತರು ಪಕ್ಷ ಸೇರುತ್ತಿದ್ದೀರಿ. ಹೊಸಬರು, ಹಳಬರು ಎಂಬ ವ್ಯತ್ಯಾಸ ಇಲ್ಲ. ಇಲ್ಲಿ ಪಕ್ಷದ ಬಾವುಟ ಹಿಡಿದ ಮೇಲೆ ಎಲ್ಲರೂ ಒಂದೇ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲಾಗುತ್ತದೆ. ಎಲ್ಲರೂ ಪಕ್ಷಕ್ಕೆ ಶಕ್ತಿಯಾಗಬೇಕು. ಇಡೀ ರಾಜ್ಯದುದ್ದಗಲಕ್ಕೆ ಪಕ್ಷದ ಸಿದ್ಧಾಂತ, ತತ್ವ, ನಾಯಕತ್ವವನ್ನು ಒಪ್ಪಿ ಬರುವವರಿಗೆ ಸ್ವಾಗತ. ಇಂದು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲರ ಸಮ್ಮುಖದಲ್ಲಿ ನಿಮ್ಮೆಲ್ಲರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ನನ್ನದು 120, 130 ಗುರಿ ಅಲ್ಲ. ನನ್ನ ಗುರಿ 224 ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವುದಾಗಿದೆ,'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹುಬ್ಬಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು.

ಶುಕ್ರವಾರ ಹುಬ್ಬಳ್ಳಿಯ ಗೋಕುಲ್ ಗಾರ್ಡನ್ನಲ್ಲಿ ನಡೆದ ಕರ್ನಾಟಕ ಕಾಂಗ್ರೆಸ್ ವಿಭಾಗ ಮಟ್ಟದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಎಚ್.ಕೆ. ಪಾಟೀಲ್, ಕೆ.ಬಿ. ಕೋಳಿವಾಡ, ಎಸ್.ಆರ್. ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರ ಹಾಗೂ ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈಗಾಗಲೇ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಗೊಂಡರು. ಸಮಾವೇಶಕ್ಕೆ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಬಾಗಲಕೋಟೆ, ಗದಗ ಜಿಲ್ಲೆಗಳಿಂದ ನೂರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರರು ಆಗಮಿಸಿದ್ದರು.












Click it and Unblock the Notifications