ಉಪ ಕದನ: ಹಾನಗಲ್ನಲ್ಲಿ ಸಿಎಂ ಬೀಡು ಬಿಟ್ಟಿರುವುದೇಕೆ? ಸೋಲಿನ ಭಯವೇ?; ಡಿಕೆಶಿ ಪ್ರಶ್ನೆ
ಹುಬ್ಬಳ್ಳಿ, ಅಕ್ಟೋಬರ್ 23: "ಬಹಳ ಬಲಿಷ್ಠವಾದ ಸರ್ಕಾರ ಇದ್ದರೂ ಹಾನಗಲ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೀಡು ಬಿಟ್ಟಿದ್ದಾರೆ. ಮಂತ್ರಿಗಳೆಲ್ಲಾ ಹಣದ ಚೀಲಗಳನ್ನು ತಂದಿದ್ದಾರೆ. ಇದನ್ನು ನೋಡಿದರೆ ಬಿಜೆಪಿಗೆ ಸೋಲಿನ ಭೀತಿ ಕಾಡುತ್ತಿರುವುದು ಸ್ಪಷ್ಟವಲ್ಲವೇ?," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ಹಣ ಹಂಚುತ್ತಿರುವ ವಿಚಾರವಾಗಿ ಕಾಂಗ್ರೆಸ್ ಕೇವಲ ಆರೋಪ ಮಾಡುತ್ತಿದ್ದೆಯೇ ಹೊರತು, ಅದಕ್ಕೆ ಸಾಕ್ಷಿ ನೀಡುತ್ತಿಲ್ಲ ಎಂಬ ಬಿಜೆಪಿಯ ನಾಯಕರ ಹೇಳಿಕೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
"ಬಿಜೆಪಿಯವರಿಗೆ ವಿಡಿಯೋ ಸಾಕ್ಷಿ ಕೊಡಬೇಕಾ? ಹಾಗಿದ್ದರೆ, ಅವರು ದುಡ್ಡು ಹಂಚುತ್ತಿರುವ ವಿಡಿಯೋ ಮಾಡಿ ಅದನ್ನು ಪ್ರಕಟಿಸುವಂತೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಹಿಂದೆ ನಾವು ಈ ರೀತಿ ಸಾಕಷ್ಟು ಸಾಕ್ಷಿಗಳನ್ನು ಬಹಿರಂಗಪಡಿಸಿದ್ದರೂ, ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಮತ್ತೊಮ್ಮೆ ಬಹಿರಂಗ ಮಾಡುತ್ತೇವೆ. ಅದು ದೊಡ್ಡ ವಿಚಾರವಲ್ಲ,'' ಎಂದರು.

"ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಚಾರ ಏನೆಂದರೆ, ಈ ಹಿಂದೆ ಬಿಜೆಪಿ ನಾಯಕರು ಜನರಿಗೆ ಕೊಟ್ಟಿದ್ದ ಮಾತು ಏನು? ಅಧಿಕಾರಕ್ಕೆ ಬಂದ ನಂತರ ಅವರು ಉಳಿಸಿಕೊಂಡಿದ್ದಾರಾ? ಇಲ್ಲವಾ? ಎಂಬುದಷ್ಟೇ. ಕೋವಿಡ್ ಸಂದರ್ಭದಲ್ಲಿ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡರಾ?," ಎಂದು ಪ್ರಶ್ನಿಸಿದರು.
"ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಕೊಡಿ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಈಗ ಎಲ್ಲ ರೈತರ ಆದಾಯ ಡಬಲ್ ಆಗಿದೆಯಾ ಎಂದು ರೈತರನ್ನು ಕೇಳಿದರೆ, ಎಲ್ಲರೂ ಆಗಿಲ್ಲ ಅಂತಲೇ ಹೇಳುತ್ತಿದ್ದಾರೆ. ಬದಲಿಗೆ ರಸಗೊಬ್ಬರ ಬೆಲೆ ಏರಿಕೆ ಹಾಗೂ ಮಾರುಕಟ್ಟೆ ಇಲ್ಲದೇ ಅವರ ಜೀವನ ದುಸ್ಥಿತಿಗೆ ಸಾಗಿದೆ," ಎಂದು ಆರೋಪಿಸಿದರು.
"ಇನ್ನು ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಸಿಕ್ಕಿಲ್ಲ. ಈ ಸರ್ಕಾರದಿಂದ ಯಾರೊಬ್ಬರಿಗೂ ಸಹಾಯವಾಗಿಲ್ಲ. ನಾನು ಕೇಳಿದ ರೈತ, ಕಾರ್ಮಿಕ, ಚಾಲಕ, ವರ್ತಕ, ಬೀದಿ ವ್ಯಾಪಾರಿಗಳು ಎಲ್ಲರೂ ಈ ಸರ್ಕಾರದಿಂದ ನಮಗೆ ಸಹಾಯವಾಗಿಲ್ಲ ಎಂದೇ ಹೇಳುತ್ತಿದ್ದಾರೆ. ಇಷ್ಟಾದರೂ ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ? ಜನ ಅವರಿಗೆ ಮತ ಯಾಕೆ ನೀಡಬೇಕು?,'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.












Click it and Unblock the Notifications