ಬ್ರಿಟಿಷರ ಬೂಟು ನೆಕ್ಕುವವರಿಂದ ನಾವು ಕಲಿಯಬೇಕಿಲ್ಲ: ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ: ಬಿಕೆಎಚ್
ಹುಬ್ಬಳ್ಳಿ, ಡಿಸೆಂಬರ್ 24: ಬಿಜೆಪಿಯವರು ಗೋಡ್ಸೆ ಅನುಯಾಯಿಗಳು. ಅವರಿಂದ ಏನೂ ನೀರಿಕ್ಷೆ ಮಾಡಲು ಸಾಧ್ಯ ಇಲ್ಲ. ಹಿಜಾಬ್ ಮತ್ತು ಭುರ್ಖಾ ನಡುವೆ ಸಾಕಷ್ಟು ವ್ಯತ್ಯಾಸ ಇದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಹಿಜಾಬ್ ಅನ್ನೋದು ತಲೆ ಮತ್ತೆ ಎದೆ ಮುಚ್ಚಿಕೊಳ್ಳೋಕೆ ಇರೋದು. ಈಗಾಗಲೇ ಕೆಲವು ಶಾಲಾ ಕಾಲೇಜುಗಳಲ್ಲಿ ಇದೆ. ಭುರ್ಖಾ ಅನ್ನೋದು ಸಂಪೂರ್ಣ ದೇಹ ಮುಚ್ಚಿಕೊಳ್ಳೋದು. ಹಿಜಾಬ್ ಮತ್ತು ಭುರ್ಖಾ ಮಧ್ಯೆ ವ್ಯತ್ಯಾಸವಿದೆ. ಶಾಲಾ ಕಂಪೌಂಡ್ ವರೆಗೂ ಭುರ್ಖಾ ಆ ನಂತರ ಹಿಜಾಬ್ ಇರಬೇಕು ಅನ್ನೋದು ನನ್ನ ಕಲ್ಪನೆ ಎಂದು ಹೇಳಿದರು.

ಭಾರತೀಯ ಜನತಾ ಪಾರ್ಟಿಯವರು ಸಮಾನತೆ ವಿಚಾರ ಮಾತನಾಡುತ್ತಾರೆ. ಅಹಾರ, ಉಡುಪಿನ ಹಕ್ಕು ಎಲ್ಲರ ವೈಯಕ್ತಿಕ. ಬಿಜೆಪಿಗೆ ರೈತರು, ಮಹಿಳೆಯರ ಶೋಷಣೆ ಬಗ್ಗೆ ಕಾಳಜಿ ಇಲ್ಲ. ಈ ವಿಚಾರ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಂವಿಧಾನ ರಕ್ಷಣೆ ಮಾಡುತ್ತೀವಿ. ನಮ್ದು ಜ್ಯಾತ್ಯಾತೀತ ರಾಷ್ಟ್ರ, ಎಲ್ಲ ಜಾತಿ ಧರ್ಮಗಳನ್ನು ಕಾಪಾಡಬೇಕು ಎಂದರು.
ತುಷ್ಟೀಕರಣ ರಾಜಕಾರಣ ಮಾಡುತ್ತಿರುವುದು ನೀವು
ಕಾಂಗ್ರೆಸ್ ತುಷ್ಟೀಕರಣ ಮಾಡುತ್ತಿಲ್ಲ. ಬಹು ಸಂಖ್ಯಾತರ ತುಷ್ಟೀಕರಣ ಮಾಡುತ್ತಿವುದು ಬಿಜೆಪಿ. ಹಿಂಸೆ ಮತ್ತು ಸುಳ್ಳುಗಳನ್ನು ಪ್ರಚಾರ ಮಾಡುತ್ತಿರುವುದು ಬಿಜೆಪಿ. ಅಲ್ಪ ಸಂಖ್ಯಾತರು, ಮೀಸಲಾತಿ ವಿಚಾರದಲ್ಲಿ ಇವರು ವಿರೋಧ. ನಾಗಪುರದಲ್ಲಿ ಇರೋ ಇವರ ಸೂತ್ರಧಾರರು ಜಾತಿ ಗಣತಿ ವಿರೋಧಿಗಳು ಎಂದು ಪರೋಕ್ಷವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ನಾಯಕರ ವಿರುದ್ಧ ಹರಿಪ್ರಸಾದ್ ಹರಿಹಾಯ್ದರು.
ಬಿಜೆಪಿಯವರಿಂದ ನಾವು ಕಲಿಯಬೇಕಾಗಿಲ್ಲ. ನಾವು ಟಿಪ್ಪು ಸುಲ್ತಾನ ಪಾರ್ಟ್ ಅಲ್ಲ. ನಾವು ಬ್ರಿಟಿಷರ ವಿರುದ್ದ ಹೋರಾಟ ಮಾಡಿದವರ ಪರ. ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು. ಪರೋಕ್ಷವಾಗಿ ಬಿಜೆಪಿಯವರು ಬೂಟು ನೆಕ್ಕೋರು ಎಂದು ಅವರು ವ್ಯಂಗ್ಯವಾಡಿದರು.

ನಾನು ಲೋಕಸಭಾ ಚುನಾವಣೆ ಆಕಾಂಕ್ಷೆ
ನಾನು ಲೋಕಸಭೆ ಚುನಾವಣೆಗೆ ಆಕಾಂಕ್ಷಿಯಾಗಿದ್ದು, ಈ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕಾಯಕ ಸಮಾಜದ ಪರ ಹೋರಾಟ ನಮ್ಮೆಲ್ಲರ ಇಚ್ಛೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆ ಬಗೆಹರಿಬೇಕು. ಇಂಡಿಯಾ ಮೈತ್ರಿ ಕೂಟದಿಂದ ಭಾರತದ ಪ್ರಧಾನಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೆಸರು ಆಯ್ಕೆ ಸೂಕ್ತವಾಗಿದೆ ಎಂದು ತಿಳಿಸಿದರು.
ಪ್ರಧಾನಿಮಂತ್ರಿ ಹುದ್ದಗೆ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ನಿರ್ಧಾರ ಸರಿ ಇದೆ. ಬೆಂಗಳೂರಿನಲ್ಲಿ ನಡೆದ ಬೃಹತ್ ಈಡಿಗ ಸಮಾವೇಶದಿಂದ ನಾನು ದೂರವೇ ಇದ್ದೆ. ದ್ವನಿ ಇಲ್ಲದವರಿಗೆ ದ್ವನಿ ಕೊಡಬೇಕು. ರಾಜಕಾರಣದಲ್ಲಿ ಯಾರನ್ನೂ ತುಳಿಯೋಕೆ ಆಗಲ್ಲ.
ಇಲ್ಲಿ ತುಳಿತೀನಿ ಅಂದರೆ ಅವರು ಭ್ರಮನಿರಸಣದಲ್ಲಿ ಇರುತ್ತಾರೆ ಎಂದು ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು. ಈ ಹಿಂದೆ ಈಡಿಗ ಸಮಾಜ ಕಾರ್ಯಕ್ರಮ ಇದ್ದಾಗಲೂ ಅವರು ನಾನು ತುಳಿದಷ್ಟು ಚೆಂಡಿನಂತೆ ಪುಟಿಯುತ್ತೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದರು.












Click it and Unblock the Notifications