ಕಣ್ಣೇ ಇಲ್ಲದ ಕುಟುಂಬಕ್ಕೆ ಆತ್ಮಸ್ಥೈರ್ಯವೇ ಆಸರೆ
ಹುಬ್ಬಳ್ಳಿ, ಡಿಸೆಂಬರ್ 12 : ಒಂದೇ ತುಂಬಿದ ಕುಟುಂಬ, 6 ಜನ ಅಂಧರು.! ಸಹಾಯ ಮಾಡಲು ನಾ ಮುಂದೆ ತಾ ಮುಂದೆ ಎಂದು ಬಂದವರು ಹೆಚ್ಚು , ಆದರೆ ಬರೀ ಪ್ರಚಾರ ಪಡೆದುಕೊಂಡರೆ ಹೊರತು, ಸಹಾಯದ ಹಸ್ತ ಮಾತ್ರ ಚಾಚಲಿಲ್ಲ. ಅಂಧರಾದರೂ ಎಲ್ಲರಂತೆ ಬದುಕು ರೂಪಿಸಿಕೊಂಡು ಜೀವನ ಬಂಡಿ ಸಾಗಿಸುತ್ತಿದ್ದಾರೆ. ಇದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿನ ಬಾಣಕರ ಕುಟುಂಬದ ಚಿತ್ರ. ಈ ಕುಟುಂಬದ ಮುಖ್ಯಸ್ಥ ಕರೆಪ್ಪ ಬಾಣಕರ ಎಂಬಾತನಿಗೆ ನಾಲ್ಕು ಜನ ಹೆಣ್ಣು ಮಕ್ಕಳು. ಆದರೆ ನಾಲ್ಕು ಜನ ಹೆಣ್ಣು ಮಕ್ಕಳಿಗೆ ಬೆಳಕು ನೋಡುವ ಸೌಭಾಗ್ಯವೇ ಇಲ್ಲ.
ಮಂಗಳೂರಿನ ಡಿ.ಸಿ ಕಛೇರಿಯಲ್ಲೊಬ್ಬ ಕಣ್ಣು ಕಾಣದ ಅಸಾಮಾನ್ಯ ವ್ಯಕ್ತಿ
ಇಷ್ಟೆ ಅಲ್ಲದೇ, ಇತನ ಸಹೋದರ ಹಾಗೂ ಸಹೋದರಿ ಸಹ ಅಂಧರು. ಇದಕ್ಕೂ ಮೇಲಾಗಿ ಕಿತ್ತು ತಿನ್ನುವ ಬಡತನ. ಜಿಲ್ಲೆಗೆ ಯಾರಾದರೂ ನಾಯಕರು, ಅಧಿಕಾರಿಗಳು ಆಗಮಿಸಿದ್ದಾರೆಂದರೆ ಸಾಕು, 6 ಜನ ಅಂಧರು ಸಾಲಾಗಿ ನಿಂತು ಸಹಾಯಕ್ಕೆ ಅಂಗಲಾಚಿದ್ದಾರೆ. ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದ ನಾಯಕರನ್ನು, ಅಧಿಕಾರಿಗಳನ್ನು ತಮ್ಮ ಬದುಕಿಗೆ ಆಶಾಕಿರಣ ನೀಡಿ ಎಂದು ಕೇಳಿಕೊಂಡಿದ್ದಾರೆ .
ಆದರೆ ಕೇಳಿದ ಪ್ರತಿಯೊಬ್ಬರು ನಾನಿದ್ದೇನೆ ಎಂಬ ಭರವಸೆ ನೀಡಿದ್ದಾರೆಯೇ ಹೊರತು ಸಹಾಯದ ಕರುಣೆಯ ಮಾತ್ರ ಪ್ರದರ್ಶಿಸಿಲ್ಲ. ಇಂತಹ ಪೊಳ್ಳು ಭರವಸೆ ಮಾತುಗಳಿಂದ ರೋಸಿ ಹೋಗಿದ್ದಾರೆ.
ಅಂಧತ್ವವನ್ನು ಸವಾಲಾಗಿ ಸ್ವೀಕರಿಸಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಶೇಖರ್
ಇತ್ತ ಬಾಡಿಗೆ ಮನೆಯಲ್ಲಿ ಮಾಲೀಕರು ಬದುಕು ಸಾಗಿಸಿದರು ಬದುಕಿನಲ್ಲಿ ಆಶಾಭಾವನೆ ಹೊಂದಿದ್ದಾರೆ. ಕಾಂಗ್ರೆಸ್ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಧಾರವಾಡದ ಕಲಾಭವನದಲ್ಲಿ ಅಭಿಯಾನ ಸದಸ್ಯತ್ವದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದಾಗ, ಈ ಅಂಧರನ್ನು ಕಂಡು ಅಂದಿನ ರಾಜ್ಯಯುವ ಘಟಕದ ರಾಜ್ಯಾಧ್ಯಕ್ಷ ಕೃಷ್ಣಭೈರೇಗೌಡ ಹಾಗೂ ಅಂದಿನ ಜಿಲ್ಲಾಧಿಕಾರಿಗೆ ಇವರ ಯೋಗಕ್ಷೇಮದ ಜವಾಬ್ದಾರಿ ವಹಿಸಿಕೊಳ್ಳಿ ಎಂದು ತಿಳಿಸಿದ್ದರು.
ಆದರೆ ಭರವಸೆ ಮಾತ್ರ ಮತ್ತೆ ಕನಸಾಗಿಯೇ ಅಂಧರ ಪಾಲಿಗೆ ಉಳಿಯಿತು. ಇಂತಹ ಭರವಸೆ ಮಾತಿಗೆ, ಜನರ ಕೆಟ್ಟ ಅನುಕಂಪಕ್ಕೆ ಮನನೊಂದ ಅಂಧ ಕುಟುಂಬ ಸದ್ಯ ರಾಮನಗರದ ಆದಿ ಚುಂಚನಗಿರಿ ಆಶ್ರಮದಲ್ಲಿದೆ. ಕುಟುಂಬ ಮುಖ್ಯಸ್ಥ ಕರೆಪ್ಪ ಅಲ್ಲಿಯೇ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಆತನ ನಾಲ್ಕು ಜನ ಅಂಧ ಮಕ್ಕಳು ರೇಖಾ (14), ಸುರೇಖಾ(12), ಚಂದ್ರಿಕಾ (8), ರೇಖಾ (6) ರಾಮನಗರ ಜಿಲ್ಲೆಯ ಅಂಬಾಲ ಗಂಗಾಧರನಾಥ ಅಂಧ ಮಕ್ಕಳ ಶಾಲೆಯಲ್ಲಿದ್ದಾರೆ. ಬರುವ ನಾಲ್ಕೂವರೆ ಸಾವಿರ ಸಂಬಳದಲ್ಲಿ ಅಂಧ ಸಹೋದರ ಸಣ್ಣಕರೆಪ್ಪ (30), ಸಹೋದರಿ ಮಂಜುಳಾ (26), ತನ್ನ ಕುಟುಂಬ ಹಾಗೂ ಹೆಬ್ಬಳ್ಳಿಯಲ್ಲಿನ ವೃದ್ಧ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ.