ರಾಣೇಬೆನ್ನೂರು: ನಾಮಪತ್ರ ಸಲ್ಲಿಕೆ ವೇಳೆ ಬುಟ್ಟಿಯಲ್ಲಿ 10 ಸಾವಿರ ನಾಣ್ಯ ತಂದಿಟ್ಟ ಎಎಪಿ ಅಭ್ಯರ್ಥಿ
ಹಾವೇರಿ, ಏಪ್ರಿಲ್ 17: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಮ್ ಆದ್ಮಿ ಪಕ್ಷ ಈಗಾಗಲೇ ರಾಜ್ಯದ ಬಹುತೇಕ ಭಾಗಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಆಮ್ ಆದ್ಮಿ ಪಕ್ಷಕ್ಕೆ ಇತ್ತೀಚಿಗಷ್ಟೇ ರಾಷ್ಟ್ರೀಯ ಪಕ್ಷ ಮಾನ್ಯತೆ ನೀಡಿ ಕೇಂದ್ರ ಚುನಾವಣಾ ಆಯೋಗವು ಆದೇಶ ಹೊರಡಿಸಿತ್ತು. ಹೀಗಾಗಿ ಆಪ್ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಆಮ್ ಆದ್ಮಿ ಪಕ್ಷ ಈಗಾಗಲೇ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಕೂಡ ನಡೆಯುತ್ತಿದೆ. ರಾಣೇಬೆನ್ನೂರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಅಪರೂಪದ ಘಟನೆ ನಡೆದಿದೆ.

ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಇಡಲು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಬುಟ್ಟಿಯಲ್ಲಿ ರಾಶಿ ರಾಶಿ ನಾಣ್ಯಗಳನ್ನು ತಂದು ಚುನಾವಣಾ ಅಧಿಕಾರಿಗಳ ಮುಂದಿಟ್ಟಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ತಂದಿಟ್ಟ ಅವಾಂತರಕ್ಕೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಚುನಾವಣಾ ಅಧಿಕಾರಿಗಳು ಸುಸ್ತಾಗಿದ್ದಾರೆ.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಎನ್ನುವಾತ ಸೋಮವಾರ ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಠೇವಣಿ ಇಡಲು ಹನುಮಂತಪ್ಪ ಕಬ್ಬಾರ ತಾವು ಕೂಡಿಟ್ಟ ನಾಣ್ಯಗಳನ್ನು ತೆಗೆದುಕೊಂಡು ಬಂದಿದ್ದಾರೆ. ಸುಮಾರು 10 ಸಾವಿರ ರೂಪಾಯಿ ನಾಣ್ಯಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಬಂದು ಚುನಾವಣಾ ಅಧಿಕಾರಿಗಳಿಗೆ ನೀಡಿದ್ದಾರೆ.
ರಾಣೇಬೆನ್ನೂರಿನ ಚುನಾವಣಾಧಿಕಾರಿ ಇಬ್ರಾಹಿಂ ದೊಡ್ಡಮನಿ, ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ತಂದ ಹಣವನ್ನು ಎಣಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. 10 ಸಾವಿರ ನಾಣ್ಯಗಳನ್ನು ಎಣಿಸಿದ ಚುನಾವಣಾ ಸಿಬ್ಬಂದಿ ಕೊನೆಗೆ ಒಟ್ಟು ಲೆಕ್ಕ ಹಾಕಿ 10 ಸಾವಿರ ನಾಣ್ಯಗಳನ್ನು ಸ್ಥಳೀಯ ಬ್ಯಾಂಕ್ಗೆ ನೀಡಿ ಅದರ ಬದಲಾಗಿ ನೋಟು ತೆಗೆದುಕೊಂಡು ಪಡೆದಿದ್ದಾರೆ.
ಹನುಮಂತಪ್ಪ ಕಬ್ಬಾರ ರಾಣೇಬೆನ್ನೂರಿನ ರೈತ ಮುಖಂಡರಾಗಿದ್ದು, ಚುನಾವಣೆಗೆ ಪ್ರಚಾರಕ್ಕಾಗಿ 10 ಸಾವಿರ ನಾಣ್ಯಗಳನ್ನು ಬುಟ್ಟಿಯಲ್ಲಿ ತಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಚುನಾವಣಾ ಠೇವಣಿಗಾಗಿ ಜನರಿಂದ 1 ರೂ. ದೇಣಿಗೆ ಪಡೆದ ಬಿಜೆಪಿ ಅಭ್ಯರ್ಥಿ
ಗದಗ: ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಜನರಿಂದ ಪಡೆದ 1 ರೂ. ದೇಣಿಗೆಯನ್ನು ಚುನಾವಣೆ ಠೇವಣಿಯಾಗಿ ಬಳಸಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಅನಿಲ ಮೆಣಸಿನಕಾಯಿ ಚುನಾವಣೆಗೂ ಪೂರ್ವದಲ್ಲಿಯೇ ಮತಕ್ಷೇತ್ರದ ಜನರ ಮನೆ ಬಾಗಿಲಿಗೆ ಹೋಗಿ ಒಂದು ರೊಟ್ಟಿ, 1 ರೂ. ನಾಣ್ಯ ದೇಣಿಗೆಯಾಗಿ ಪಡೆದಿದ್ದೇನೆ. ಹೀಗೆ ದೇಣಿಗೆ ನೀಡಿದ ಎಲ್ಲರನ್ನು ನಾಮಪತ್ರ ಸಲ್ಲಿಕೆ ಬರುವಂತೆ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಏಪ್ರಿಲ್ 18ರಂದು ಬೆಳಗ್ಗೆ 10.30ಕ್ಕೆ ಸಚಿವ ಸಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ರೋಡ್ ಶೋ ನಡೆಸುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications