Amit Shah: ಲಿಂಗಾಯತ, ಒಕ್ಕಲಿಗರಿಗೆ ನೀಡಿರುವ ಮೀಸಲಾತಿ ತೆಗೆದುಹಾಕ್ತೀರಾ?; ಕಾಂಗ್ರೆಸ್ಗೆ ಸವಾಲೆಸೆದ ಅಮಿತ್ ಶಾ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯ ಸಜ್ಜಾಗಿದ್ದು, ಮೇ 10ರಂದು ನಡೆಯುವ ಮತದಾನಕ್ಕೂ ಮುನ್ನ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ.
ಕರುನಾಡ ಕುರುಕ್ಷೇತ್ರಕ್ಕೆ ರಾಜ್ಯ ನಾಯಕರಲ್ಲದೆ, ರಾಷ್ಟ್ರೀಯ ನಾಯಕರೂ ಭರಾಟೆಯ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಗುಬ್ಬಿ, ತಿಪಟೂರು, ರಾಣೇಬೆನ್ನೂರು ಮತ್ತು ಶಿವಮೊಗ್ಗದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ರೋಡ್ ಶೋನಲ್ಲಿ ಮಾತನಾಡಿದ ಅಮಿತ್ ಶಾ, "ಮೇ 10ರಂದು ನಡೆಯುವ ಮತದಾನದಲ್ಲಿ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರ ಬೆಂಬಲಿಸುವಂತೆ," ಜನರಲ್ಲಿ ಮನವಿ ಮಾಡಿದರು.
"ಕಾಂಗ್ರೆಸ್ ಮತ್ತು ಜೆಡಿಎಸ್ ಮುಸ್ಲಿಮರಿಗೆ ಪ್ರತ್ಯೇಕ ಶೇ.4 ಮೀಸಲಾತಿ ಕೊಟ್ಟಿದ್ದರು. ಇದೀಗ ಬಿಜೆಪಿ ಸರ್ಕಾರ ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿ ನೀಡಿದೆ. ಅಧಿಕಾರಕ್ಕೆ ಬದ್ದರೆ ಮೀಸಲಾತಿ ತೆಗೆಯುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಒಕ್ಕಲಿಗ, ಲಿಂಗಾಯತರ ಮೀಸಲಾತಿ ತೆಗೆದುಹಾಕ್ತೀರಾ ಡಿ.ಕೆ. ಶಿವಕುಮಾರ್?," ಎಂದು ಪ್ರಶ್ನಿಸಿದರು.

"ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ, ಒಕ್ಕಲಿಗ ಮತ್ತು ಲಿಂಗಾಯತರಿಗೆ ಕೊಟ್ಟಿರುವ ಮೀಸಲಾತಿ ತೆಗೆದು ಹಾಕುವುದಿಲ್ಲ," ಎಂದು ಅಮಿತ್ ಶಾ ಭರವಸೆ ನೀಡಿದರು.
ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಕರೆ ನೀಡಿದ ಅಮಿತ್ ಶಾ
2024ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಬೇಕೆ? ಬೇಡವೇ? ಎಂದು ಕೇಳಿದಾಗ, ಜನರು ಹೌದು ಎಂದರು. ರಾಣೇಬೆನ್ನೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಪೂಜಾರ್ಗೆ ಮತ ನೀಡಿ. ಶಿವಕುಮಾರ್ ಉದಾಸಿಯವರನ್ನು ಸಂಸದರನ್ನಾಗಿ ಮತ್ತೊಮ್ಮೆ ಆಯ್ಕೆ ಮಾಡಿ. ಮೇ 10ಕ್ಕೆ ಬಿಜೆಪಿಗೆ ಮತ್ತೊಮ್ಮೆ ಮತ ನೀಡುತ್ತೀರಲ್ವಾ? ಅರುಣ್ ಕುಮಾರ್ ಪೂಜಾರ್ ಅವರನ್ನು ಮತ್ತೆ ಆಯ್ಕೆ ಮಾಡ್ತೀರಲ್ವಾ? ಎಂದು ಮತದಾರರಿಗೆ ಅಮಿತ್ ಶಾ ಪ್ರಶ್ನಿಸಿದಾಗ, ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಜೈಕಾರ ಕೂಗಿದರು.
ರಾಣೇಬೆನ್ನೂರು ನಗರದಲ್ಲಿ ಅಮಿತ್ ಶಾ ರೋಡ್ ಶೋ ಹಿನ್ನೆಲೆ ಪ್ರಮುಖ ಬೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 500ಕ್ಕೂ ಹೆಚ್ಚು ಪೊಲೀಸರ ಭದ್ರತೆ ಒದಗಿಸಿದರು. ಅಮಿತ್ ಶಾ ರೋಡ್ ಶೋಗೆ ಅಪಾರ ಜನರು ಬಂದಿದ್ದರು. ರಾಣೇಬೆನ್ನೂರು ನಗರದ ಪ್ರಮುಖ ಬೀದಿಗಳು ಕೇಸರಿಮಯವಾಗಿತ್ತು. ಸುಮಾರು ಎರಡು ಕಿಮೀ ರೋಡ್ ಶೋನಲ್ಲಿ ಭಾಗವಹಿಸಿದರು.
ರಾಣೇಬೆನ್ನೂರು ಕ್ಷೇತ್ರದ ರೋಡ್ ಶೋ ನಂತರ ಅಮಿತ್ ಶಾ ಅವರು ಶಿವಮೊಗ್ಗ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಪರ ಭರ್ಜರಿ ಪ್ರಚಾರ ಮಾಡಿದರು. ಈ ವೇಳೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸಾಥ್ ನೀಡಿದರು.
ಗುಬ್ಬಿ, ತಿಪಟೂರಿನಲ್ಲಿ ಅಮಿತ್ ಶಾ ರೋಡ್ ಶೋ
ರಾಣೇಬೆನ್ನೂರು ರೋಡ್ ಶೋಗೂ ಮುನ್ನ ತುಮಕೂರು ಜಿಲ್ಲೆಯ ಗುಬ್ಬಿ ಹಾಗೂ ತಿಪಟೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಮಿತ್ ಶಾ ಅಬ್ಬರದ ಪ್ರಚಾರ ಮಾಡಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಹಸ್ರಾರು ಜನ ಅಮಿತ್ ಶಾ ಮತ್ತು ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು. ತೆರೆದ ವಾಹನದಲ್ಲಿದ್ದ ಅಮಿತ್ ಶಾ ಭಾರತ್ ಮಾತಾ ಕೀ ಘೋಷಣೆಗೆ ನೆರೆದ ಜನ ಒಕ್ಕೊರಲಿಂದ ಜೈಕಾರ ಕೂಗಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications