ಹಾವೇರಿ: ಕರಜಗಿ ಗ್ರಾಮದ ಆ್ಯಕ್ಷನ್ ಕಿಂಗ್ ಓಂ ಹೋರಿ ಇನ್ನು ನೆನಪು ಮಾತ್ರ
ಹಾವೇರಿ, ಅಕ್ಟೋಬರ್, 07: ಹಾವೇರಿ ಜಿಲ್ಲೆಯ ಕರಜಗಿ ಗ್ರಾಮದಲ್ಲಿ ತನ್ನ ವಿಶಿಷ್ಟ ಆ್ಯಕ್ಷನ್ ಮತ್ತು ಸ್ಟೈಲ್ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಓ೦ 112 ಎನ್ನುವ ಹೋರಿ ಸಾವನ್ನಪ್ಪಿದೆ. ಇದನ್ನು ಪ್ರೀತಿಯಿಂದ ಕರ್ನಾಟಕದ ಹೋರಿ ಹಬ್ಬದ ಬ್ರಾಂಡ್ ಕರಜಗಿಯ ಓ೦ 112 ಎಂದು ಕರೆಯುತ್ತಿದ್ದರು. ನಿಜಕ್ಕೂ ಕರಜಗಿಯ ಓಂ ಕರ್ನಾಟಕದ ಹೋರಿ ಹಬ್ಬದ ಬ್ರಾಂಡ್ ಆಗಿಯೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಹೋರಿ ಓಟದ ಅಖಾಡದಲ್ಲಿ ತಾನು ಹೆದರುವ ಬದಲಾಗಿ ಸುತ್ತಲೂ ನೆರೆದಿರುವ ಪೈಲ್ವಾನರನ್ನು ಬೆದರಿಸಿ ಗುರಿ ತಲುಪುತ್ತಿತ್ತು. ಇದನ್ನು ಮುಟ್ಟಲು ಜನರು ಭಯಪಡುತ್ತಿದ್ದರು. ಮುಟ್ಟಿದರೂ ಕೂಡ ಹಿಡಿದು ನಿಲ್ಲಿಸಲು ಯಾರಿಂದಲೂ ಸಾಧ್ಯ ಇರುತ್ತಿರಲಿಲ್ಲ.
ಅನೇಕ ಪೈಲ್ವಾನರು ಹಿಡಿದು ನಿಲ್ಲಿಸುವ ಸಾಹಸಕ್ಕೆ ಕೈ ಹಾಕಿದರೂ ಬಗ್ಗುತ್ತಿರಲಿಲ್ಲ. ಆದರೂ ಯಾರ ಕೈಗೂ ಸಿಗದೆ ಮುನ್ನುಗ್ಗುವ ತಾಕತ್ತು 112 ನಂಬರ್ನ ಹೋರಿದಾಗಿತ್ತು. ಕೇವಲ ಎರಡು ವರ್ಷಗಳ ಕಾಲ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಭಾಗವಹಿಸಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿತ್ತು. ಆದರೆ ಇದೀಗ ಚರ್ಮ ಗಂಟು ರೋಗಕ್ಕೆ ತುತ್ತಾಗಿ ಬಾರದ ಲೋಕದತ್ತ ಪಯಣಿಸಿದೆ.

ಹೋರಿ ಸಾಕಿದ ಕುಟುಂಬಸ್ಥರು ಕಣ್ಣೀರು
ಹೋರಿಯನ್ನು ಸಾಕಿದ ಕುಟುಂಬಸ್ಥರು ಮತ್ತು ಲಕ್ಷಾಂತರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಲಕ್ಷಾಂತರ ಪೈಲ್ವಾನರ ಮದ್ಯ ಮಿಂಚಿನಂತಹ ಓಟ ನಿಲ್ಲಿಸಿ ಇದೀಗ ಹೋರಿ ಶಾಂತನಾಗಿ ಮಲಗಿದ್ದಾನೆ. ಓ೦ ಹೆಸರಿನ ಈ ಹೋರಿಯ ಪಾರ್ಥಿವ ಶರೀರವನ್ನು ಸಕಲ ವಾದ್ಯ ವೃಂದದ ಮೂಲಕ ಗ್ರಾಮಸ್ಥರು ಮತ್ತು ಅಭಿಮಾನಿಗಳು ಕರಜಗಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದು, ಕಣ್ಣೀರಿನ ವಿದಾಯ ಹೇಳಿದ್ದಾರೆ.

ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದ ಓ೦
ಕರಜಗಿ ಗ್ರಾಮದ ಕಬ್ಬಡಿ ಪೈಲ್ವಾನ್ ಎಂದೇ ಹೆಸರಾದ ಜಗದೀಶ್ ಮಾನೆಗಾರ ಎಂಬ ಯುವಕ ಎರಡು ವರ್ಷಗಳ ಹಿಂದೆ ಈ ಓ೦ ಹೋರಿಯನ್ನು ಖರೀದಿ ಮಾಡಿದ್ದರು. ಆಗಿನಿಂದ ಓ೦ ಮನೆ ಮಗನಾಗಿಯೇ ಬೆಳೆದಿತ್ತು. ಹೋರಿ ಹಬ್ಬಕ್ಕೆ ಓ೦ ಬರುತ್ತಿದೆ ಎಂದರೆ ಲಕ್ಷಾಂತರ ಅಭಿಮಾನಿಗಳು ಇದರ ಗಾಂಭೀರ್ಯವನ್ನು ನೋಡಲು ಜಮಾಯಿಸುತ್ತಿದ್ದರು. ಯಾಕಂದರೆ ತನ್ನದೇ ಆದ ಅಭಿಮಾನಿಗಳ ತಂಡ ಹೊಂದಿತ್ತು ಈ ಹೋರಿ.

ಹೋರಿ ಹಬ್ಬದ ಸ್ಪೆಷಲ್ ಬ್ರಾಂಡ್ ಓಂ
ಎಲ್ಲ ಹೋರಿಯಂತೇ ಓಂ ಹೋರಿ ಇರಲಿಲ್ಲ, ಬದಲಾಗಿ ಇದರ ವರ್ಚಸ್ಸು ವಿಭಿನ್ನ ರೀತಿಯಲ್ಲಿ ವಿಶೇಷ ಆಗಿತ್ತು. ಆಕ್ಷನ್ ಮತ್ತು ಮಿಂಚಿನ ಓಟದ ಮೂಲಕ ಕೇವಲ ಎರಡೆ ವರ್ಷದಲ್ಲಿ ಹೋದಲ್ಲೆಲ್ಲಾ ಬಂಪರ್ ಬಹುಮಾನ ತನ್ನದಾಗಿಸಿಕೊಂಡಿತ್ತು ಇದು. ಬೈಕ್, ಬಂಗಾರ, ಚಿನ್ನದ ಪದಕ, ಫ್ರಿಡ್ಜ್, ಟ್ರಜುರಿ ಸೇರಿದಂತೆ ಹೀಗೆ ಅನೇಕ ಬಹುಮಾನಗಳನ್ನು ಪಡೆದು ಕರ್ನಾಟಕದ ಹೋರಿ ಹಬ್ಬದ ಸ್ಪೆಷಲ್ ಬ್ರಾಂಡ್ ಆಗಿ ಹೆಸರುವಾಸಿ ಆಗಿತ್ತು.

ಚರ್ಮ ಗಂಟು ರೋಗಕ್ಕೆ ತುತ್ತಾಗಿದ್ದ ಆ್ಯಕ್ಷನ್ ಕಿಂಗ್
ಹೀಗೆ ಕೇವಲ ಎರಡೇ ವರ್ಷದಲ್ಲಿ ಹೊರಿ ಹಬ್ಬದಲ್ಲಿ ಮಿಂಚಿದ್ದ ಓ೦ ಸುಮಾರು ತಿಂಗಳಿನಿಂದ ಚರ್ಮ ಗಂಟು ರೋಗದಿಂದ ಬಳಲುತ್ತಿತ್ತು. ಮಾಲೀಕರು ಬಹಳಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ಕೋಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಓ೦ ಮೃತಪಟ್ಟಿದೆ. ಮೃತಪಟ್ಟ ಸುದ್ದಿಯನ್ನು ಕೇಳಿ ಆತನ ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆದರು. ಮನುಷ್ಯರ ಅಂತಿಮ ಯಾತ್ರೆಯಂತೆ ಓ೦ ಹೋರಿಯ ಅಂತಿಮ ಯಾತ್ರೆಯನ್ನು ಮಾಡಿದ್ದಾರೆ. ಅಭಿಮಾನಿಗಳ ಹೋರಿಯ ಸಾಧನೆಯನ್ನು ಮೇಲಕು ಹಾಕುತ್ತಾ ಭಾವ ಪೂರ್ಣ ವಿದಾಯ ಸಲ್ಲಿದ್ದು, ಹೋರಿ ಮಾಲೀಕ ಜಗದೀಶ್ ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.












Click it and Unblock the Notifications