ಮೈಲಾರ ಲಿಂಗೇಶ್ವರ ಭವಿಷ್ಯದಲ್ಲಿ ಅನಾಹುತದ ಸೂಚನೆ?
ಹಾವೇರಿ, ಅಕ್ಟೋಬರ್ 8: ದೇಶದ ಪ್ರಮುಖ ವ್ಯಕ್ತಿಗೆ ಮುಂದೆ ಗಂಡಾಂತರ ಕಾದಿದೆಯೇ? ಪ್ರಮುಖ ಸ್ಥಾನಮಾನದಲ್ಲಿರುವ ವ್ಯಕ್ತಿ, ಸಂಸ್ಥೆ, ಪಕ್ಷ ಅಥವಾ ರಾಜ್ಯ ಸಂಕಷ್ಟಕ್ಕೆ ಸಿಲುಕಲಿದೆಯೇ? ಈ ಬಾರಿ ಆದಂತೆಯೇ ನೆರೆ ಹಾವಳಿ ಅಥವಾ ಬರ ಪರಿಸ್ಥಿತಿ ಎದುರಾಗಲಿದೆಯೇ?- ಹೀಗೆ ಮೈಲಾರ ಲಿಂಗೇಶ್ವರ ಭವಿಷ್ಯ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಗೊರವಯ್ಯ ನುಡಿದ ಕಾರ್ಣಿಕದ ಬಗ್ಗೆ ಎಲ್ಲೆಡೆ ತೀವ್ರ ಚರ್ಚೆಯಾಗುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಆಯುಧ ಪೂಜೆಯ ದಿನದಂದು ಗೊರವಯ್ಯ ಇಪ್ಪತ್ತು ಅಡಿ ಎತ್ತರದ ಬಿಲ್ಲಿನ್ನು ಏರಿ ನುಡಿದ ಭವಿಷ್ಯದಲ್ಲಿ ಮುಂದೆ ಅಪಾಯವೊಂದು ಕಾದಿದೆ ಎಂಬ ಸೂಚನೆಯನ್ನು ಪರೋಕ್ಷವಾಗಿ ನೀಡಲಾಗಿದೆ. ಇದು ವ್ಯಕ್ತಿ ಅಥವಾ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದೇ ಅಥವಾ ರಾಜ್ಯ-ದೇಶಕ್ಕೆ ಸಂಬಂಧಿಸಿದ್ದೇ ಎಂಬ ಪ್ರಶ್ನೆ ಎದುರಾಗಿದೆ.
ಗೊರವಯ್ಯನ ಕಾರ್ಣಿಕದಲ್ಲಿ ಯಾವುದೇ ಹೇಳಿಕೆಯು ಸ್ಪಷ್ಟವಾಗಿರುವುದಿಲ್ಲ. ನಿಗೂಢಾರ್ಥದ ಸಾಲುಗಳನ್ನು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳುವ ಪ್ರಯತ್ನಗಳು ನಡೆಯುತ್ತವೆ. ಹೆಚ್ಚಿನ ಭವಿಷ್ಯಗಳನ್ನು ರಾಜಕೀಯ ಮತ್ತು ಪ್ರಾಕೃತಿಕ ಬದಲಾವಣೆಗಳಿಗೆ ಅನ್ವಯಿಸಿ ಕಾರ್ಣಿಕ ಹೇಳಿರುವುದು ಇದನ್ನೇ ಕುರಿತಾಗಿ ಇರಬೇಕು ಎಂದು ಊಹಿಸಲಾಗುತ್ತದೆ.

'ಘಟಸರ್ಪ ಕಂಗಾಲಾದೀತಲೇ'
ದೇವರಗುಡ್ಡ ಕ್ಷೇತ್ರದಲ್ಲಿ ಈ ಬಾರಿ ಆಯುಧ ಪೂಜೆಯ ದಿನವಾದ ಸೋಮವಾರ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೊರವಯ್ಯ 'ಘಟಸರ್ಪ ಕಂಗಾಲಾದೀತಲೇ ಪರಾಕ್' ಎಂದು ಕಾರ್ಣಿಕ ನುಡಿದಿದ್ದಾರೆ. ಗೊರವಯ್ಯ ನಾಗಪ್ಪಜ್ಜ ಉರ್ಮಿ, 'ಘಟಸರ್ಪ ಕಂಗಾಲಾದೀತಲೇ ಪರಾಕ್' ಎಂದು ನುಡಿದು 25 ಅಡಿ ಎತ್ತರದ ಬಿಲ್ಲಿನಿಂದ ಕೆಳಕ್ಕೆ ಹಾರಿದರು. ಆಗ ಇಡೀ ಭಕ್ತ ಸಮೂಹ ಮುಗಿಲುಮುಟ್ಟುವ ಉದ್ಗಾರ ತೆಗೆಯಿತು.

'ಘಟಸರ್ಪ' ಯಾವುದಕ್ಕೆ ಅನ್ವಯಿಸುತ್ತದೆ?
ಸಾವಿರಾರು ಭಕ್ತರು ನೆರೆದಿದ್ದರೂ ಗೊರವಯ್ಯ ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿಯುವ ವೇಳೆ ಇಡೀ ಮೈದಾನ ನಿಶ್ಶಬ್ಧವಾಗಿತ್ತು. ಗೊರವಯ್ಯ ನುಡಿಯುವ ಕಾರ್ಣಿಕ ಏನಿರಬಹುದು ಎಂಬ ಕುತೂಹಲದ ಜತೆಗೆ ಭಯ ಕೂಡ ಆವರಿಸಿತ್ತು. ನಾಗಪ್ಪಜ್ಜ ಬಳಸಿರುವ 'ಘಟಸರ್ಪ' ಎಂಬ ಪದವು ದೊಡ್ಡ ವ್ಯಕ್ತಿಯನ್ನು ಕುರಿತದ್ದಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಕಂಗಾಲಾದೀತಲೇ ಎನ್ನುವುದರಲ್ಲಿ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಮತ್ತೆ ಪ್ರಕೃತಿ ವಿಕೋಪದ ಸೂಚನೆ?
ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಳೆ, ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿವೆ. ದೇವರಗುಡ್ಡದ ಕಾರ್ಣಿಕದಲ್ಲಿ ಹೇಳಿರುವಂತೆ ಮತ್ತೆ ಇಂತಹ ಅಪಾಯ ಎದುರಾಗಲಿದೆಯೇ ಎಂಬ ಭಯವೂ ಭಕ್ತರಲ್ಲಿ ಉಂಟಾಗಿದೆ. ರಾಜಕೀಯ ವಲಯದಲ್ಲಿ ಭಾರಿ ಬದಲಾವಣೆಗಳು ಆಗಬಹುದು. ಪ್ರಮುಖ ರಾಜಕೀಯ ವ್ಯಕ್ತಿಗಳು ಸಂಕಷ್ಟಕ್ಕೆ ಒಳಗಾಗಬಹುದು ಎಂದು ಹೇಳಲಾಗುತ್ತಿದೆ.

ಮೋದಿ ಕುರಿತಾಗಿರುವುದೇ?
ಈ ಕಾರ್ಣಿಕ ನುಡಿಯಲಾಗಿದೆ ಎಂದು ದೇಶದ ಪ್ರಭಾವಿ ರಾಜಕೀಯ ವ್ಯಕ್ತಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ದೇಶ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಜತೆಗೆ ಉಗ್ರರ ದಾಳಿಯ ಭೀತಿ ಎದುರಾಗಿದೆ. ದೇಶದೊಳಗಿನ ಅನೇಕ ಸಮಸ್ಯೆಗಳು ಒಂದಾಗಿ ಸೇರಿ ನರೇಂದ್ರ ಮೋದಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ. ಘಟಸರ್ಪ ಎನ್ನುವುದು ಮನುಷ್ಯನಿಗೆ ಅನ್ವಯಿಸುವುದಾದರೆ ಅದು ಮೋದಿ ಅವರೇ ಆಗಿರಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ಕಳೆದ ಸಾಲಿನ ಭವಿಷ್ಯ
'ಸರ್ವರೂ ಸಂಪಲೆ ನಾಡೆಲ್ಲ ತಂಪಲೆ ಪರಾಕ್' ಕಳೆದ ದಸರಾ ವೇಳೆ ಆಯುಧಪೂಜೆಯ ದಿನದಂದು ಗೊರವಯ್ಯ ಕಾರ್ಣಿಕ ನುಡಿದಿದ್ದರು. ನಾಡಿನಲ್ಲಿ ಚೆನ್ನಾಗಿ ಮಳೆ ಬೆಳೆಯಾಗಿ ಎಲ್ಲವೂ ಸಮೃದ್ಧವಾಗಲಿದೆ ಎಂಬ ಸೂಚನೆ ಇದು ಎಂದು ಭಾವಿಸಲಾಗಿತ್ತು. ಆದರೆ ರಾಜ್ಯದ ಅನೇಕ ಭಾಗಗಳಲ್ಲಿ ವಿಪರೀತ ಮಳೆ ಸುರಿದು ಪ್ರವಾಹ ಉಂಟಾಗಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.












Click it and Unblock the Notifications