ವಚನಾನಂದ 'ಬುದ್ದಿ'ಗೆ ಬುದ್ದಿ ಹೇಳಿದ ದಿಂಗಾಲೇಶ್ವರ ಸ್ವಾಮೀಜಿ..!
ಹಾವೇರಿ, ಜನವರಿ 15: "ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ಮಂಗಳವಾರ ನಡೆದ ಘಟನೆ ಬಗ್ಗೆ ಎಲ್ಲ ಮಠಾಧೀಶರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ" ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ ಹೇಳಿದ್ದಾರೆ.
ಹಾವೇರಿಯಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಮಾತನಾಡಿದ ಶ್ರೀಗಳು, "ನಾವೇ ಸಾಕಿದ ಆಕಳನ್ನು ನಂಬಿಸಿ ಹಾಲು ಕರೆಯಬೇಕು. ಬಲವಂತ ಮಾಡಿದರೇ ಅದು ಒದೆಯುತ್ತದೆ. ಸ್ವಾಮಿಗಳಿಗೂ ಒಂದು ಇತಿಮಿತಿಯಿರುತ್ತದೆ. ಆ ಮಿತಿಯನ್ನು ಮೀರಬಾರದು" ಎಂದರು. ಈ ಮೂಲಕ ಬಹಿರಂಗ ವೇದಿಕೆಯಲ್ಲಿ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೊತೆ ನಡೆದುಕೊಂಡಿರುವುದು ಸರಿಯಲ್ಲ ಎಂಬುದಾಗಿ ದಿಂಗಾಲೇಶ್ವರ ಶ್ರೀ ಹೇಳಿದ್ದಾರೆ.
"ಯಡಿಯೂರಪ್ಪನವರು ತುಂಬಾ ಶ್ರಮವಹಿಸಿ ಪಕ್ಷ ಕಟ್ಟಿ, ಇಂದು ಈ ಮಟ್ಟಕ್ಕೆ ಬೆಳದಿದ್ದಾರೆ. ಅವರಿಲ್ಲದೇ ರಾಜ್ಯ ಬಿಜೆಪಿ ಇಲ್ಲ ಎಂಬುದು ಆ ಪಕ್ಷದ ವರಿಷ್ಠರಿಗೂ ಅರಿವಾಗಿದೆ. ಯಡಿಯೂರಪ್ಪ ಮುಂದಿನ ಮೂರು ವರ್ಷ ಚೆನ್ನಾಗಿ ಆಡಳಿತ ನಡೆಸುತ್ತಾರೆ ಎನ್ನುವ ವಿಶ್ವಾಸವಿದೆ" ಎಂದು ಶ್ರೀಗಳು ಹೇಳಿದರು.

ವಚನಾನಂದ ಶ್ರಿ ಅವರ ಬಗ್ಗೆ ರಾಜ್ಯದಲ್ಲಿ ಅನೇಕ ಮಠಾಧೀಶರು ಬಹಿರಂಗ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವತಃ ಪಂಚಮಸಾಲಿ ಸಮಾಜದ ಮುಖಂಡರೂ ಕೂಡ ಶ್ರೀಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿವಾದಕ್ಕೆ ಸ್ವಾಮೀಜಿ ತೆರೆ ಎಳೆಯಲು ಮುಂದಾಗಿದ್ದಾರೆ.











Click it and Unblock the Notifications