ದೇವರಗುಡ್ಡದ ಕಾರ್ಣಿಕ ಭವಿಷ್ಯವಾಣಿ: ಯುವಕನಿಗೆ ಮುಖ್ಯಮಂತ್ರಿ ಪಟ್ಟ, ಸಮೃದ್ಧ ಬೆಳೆ
ಹಾವೇರಿ, ಅಕ್ಟೋಬರ್, 04: 'ಗುಡ್ಡಕ್ಕಲೆ ಶಿಶು ಏರಿತಲೇ ಪರಾಕ್' ಎಂದು ದೇವರಗುಡ್ಡದ ಗೊರವಪ್ಪ ನಾಗಪ್ಪ ಉರ್ಮಿ ಬಿಲ್ಲನ್ನೇರಿ ಇಂದು ಕಾರ್ಣಿಕವನ್ನು ನುಡಿದರು. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿ ಆಗಿದ್ದರು. ದಸರಾ ಹಬ್ಬದ ಸಮಯದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕೋತ್ಸವ, ವರ್ಷದ ಭವಿಷ್ಯವಾಣಿ ಅಂತಲೇ ನಂಬಲಾಗುತ್ತದೆ. ಹಾಗೂ ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.
ಸಣ್ಣ - ಸಣ್ಣ ರೈತರಿಗೂ ಜೀವನದ ಹಾದಿ ಉತ್ತಮ ಆಗಲಿದ್ದು, ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಇನ್ನು ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಕಾರ್ಣಿಕವನ್ನು ವಿಶ್ಲೇಷಿಸಿದ್ದಾರೆ. ಈ ಕುರಿತು ದೇವರಗುಡ್ಡ ದೇವಸ್ಥಾನದ ಪ್ರಧಾನ ಅರ್ಚಕರು ಗುರೂಜಿ ಸಂತೋಷ ಭಟ್ ಮಾಹಿತಿಯನ್ನು ನೀಡಿದ್ದಾರೆ.

ಗೊರವಪ್ಪ ಏರಿದ ಬಿಲ್ಲಿನ ಅಳತೆ?
ದೇವರಗುಡ್ಡ ಗ್ರಾಮದ ಮಾಲತೇಶ ದೇವರ ಕಾರ್ಣಿಕೋತ್ಸವ ಮಂಗಳವಾರ ಸಂಜೆ ನಡೆಯಿತು. ಸುಮಾರು 20 ಅಡಿ ಬಿಲ್ಲನ್ನೇರಿದ ಗೊರವಪ್ಪ ಕಾರ್ಣಿಕ ನುಡಿದು ಬಿಲ್ಲಿನಿಂದ ಕೆಳಗೆ ದುಮುಕಿದ್ದಾರೆ. 'ಆಕಾಶದೆತ್ತರದ ಗುಡ್ಡಕ್ಕೆ ಶಿಶು ಏರೀತಲೇ ಪರಾಕ್' ಎಂದು ಕೇಳಿ ಗೊರವಪ್ಪ ನಾಗಪ್ಪ ಕೆಳಗೆ ಧುಮುಕುತ್ತಿದ್ದಂತೆ ಭಕ್ತರು ನೆಲಕ್ಕೆ ತಾಗದಂತೆ ಅವರನ್ನು ಹಿಡಿದುಕೊಂಡಿದ್ದಾರೆ.
ದೇವರಗುಡ್ಡದ ಕಾರ್ಣಿಕ: ಗೊರವಪ್ಪ ನಾಗಪ್ಪ ಉರ್ಮಿ ಬಿಲ್ಲನ್ನೇರಿ ಇಂದು ನುಡಿದಿದ್ದೇನು? ವಿಡಿಯೋ ನೋಡಿ#haveri #karnika #video #karnataka #Prediction pic.twitter.com/UXBBtjHANx
— oneindiakannada (@OneindiaKannada) October 4, 2022
ಗೊರವಪ್ಪನ ದೇಹ ಯಾವ ಕಡೆ ಬೀಳುತ್ತದೆ, ತಲೆ ಯಾವ ಕಡೆ ಬೀಳುತ್ತದೆ ಎಂದು ನೋಡಲಾಗುತ್ತಿದೆ. ಯಾವ ಕಡೆ ತಲೆ ಬೀಳುತ್ತದೆಯೋ ಆ ಕಡೆ ಉತ್ತಮವಾಗಿ ಬೆಳೆ ಮಳೆ ಆಗುತ್ತೆ ಎಂದು ಭಕ್ತರು ನಂಬಿಕೆ ಆಗಿದೆ. ಕಾರ್ಣಿಕ ಆಗುತ್ತಿದ್ದಂತೆ ಭಕ್ತರು ಪ್ರಸ್ತುತ ಕಾರ್ಣಿಕದ ಅರ್ಥವನ್ನು ವಿಶ್ಲೇಷಿಸಿದ್ದಾರೆ.

ಗೊರವಪ್ಪರ ಪಾದಯಾತ್ರೆ ಹೇಗಿರುತ್ತದೆ?
ಈ ಭವಿಷ್ಯವಾಣಿಯನ್ನು ಮೈಲಾರಲಿಂಗೇಶ್ವರನೇ ಗೊರವಪ್ಪನಿಗೆ ನುಡಿಸುತ್ತಾನೆ ಎಂದು ಭಕ್ತರ ನಂಬಿಕೆ ಆಗಿದೆ. ಇನ್ನು ಕಾರ್ಣಿಕೋತ್ಸವ ಕೇಳಲು ರಾಜ್ಯದ ವಿವಿಧಡೆಯಿಂದ ಭಕ್ತರು ಸಾಗರವೇ ಆಗಮಿಸಿತ್ತು. ಕಾರ್ಣಿಕೋತ್ಸವ ಹಿನ್ನೆಲೆಯಲ್ಲಿ ದೇವರಗುಡ್ಡದ ಮಾಲತೇಶ ಗಂಗಮ್ಮ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಆಯುಧ ಪೂಜೆ ದಿನ ಇಲ್ಲಿ ಕಾರ್ಣಿಕೋತ್ಸವ ನಡೆದರೆ, ಮರುದಿನ ಪವಾಡಗಳು ನಡೆಯುತ್ತವೆ. ಕಂಚಾವೀರರು ಮುಳ್ಳಿನ ಪವಾಡ, ಸರಪಳಿ ಪವಾಡ, ಗೂಟದ ಪವಾಡ ಸೇರಿದಂತೆ ವಿವಿಧ ಪವಾಡಗಳನ್ನು ಮಾಡುವ ಮೂಲಕ ದೇವರಿಗೆ ನಮನ ಸಲ್ಲಿಸುತ್ತಾರೆ. ದೂರದ ಊರುಗಳಿಂದ ಗೊರವಪ್ಪರು ಪಾದಯಾತ್ರೆ ಮೂಲಕ ದೇವರಗುಡ್ಡಕ್ಕೆ ಆಗಮಿಸಿದ್ದರು. ಭಕ್ತರು ಬಾರಕೋಲ್ ಸೇವೆ ಸೇರಿದಂತೆ ಪಡ್ಡಲಗೆ ಸೇವೆ ಸಲ್ಲಿಸಿದರು.











Click it and Unblock the Notifications