2018 ಅಸೆಂಬ್ಲಿಗೆ ಹಾವೇರಿ ಜಿಲ್ಲೆಯ ಅಭ್ಯರ್ಥಿಗಳನ್ನು ಘೋಷಿಸಿದ ಸಿದ್ದರಾಮಯ್ಯ
ಹಾವೇರಿ, ಡಿಸೆಂಬರ್ 22: 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹಾವೇರಿಯ 6 ವಿಧಾನಸಭಾ ಕ್ಷೇತ್ರಗಳಿಗೂ ತಮ್ಮ ಅಭ್ಯರ್ಥಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ನವಕರ್ನಾಟಕ ನಿರ್ಮಾಣ ಯಾತ್ರೆಯಲ್ಲಿರುವ ಸಿದ್ದರಾಮಯ್ಯ ಅವರು ಇಂದು (ಡಿಸೆಂಬರ್ 23) ಹಾವೇರಿಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಹಾವೇರಿಯ ಆರು ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದರು.
ಉರಿ ಬಿಸಿಲಿನಲ್ಲಿ ಹಾವೇರಿ ಜಿಲ್ಲೆ ಕ್ಷೇತ್ರ ಪರಿಚಯ
ಹಿರೆಕೇರೂರು ಕ್ಷೇತ್ರಕ್ಕೆ ಬಿ.ಸಿ.ಪಾಟೀಲ್, ಬ್ಯಾಡಗಿ-ಬಸವರಾಜ್ ಶಿವಣ್ಣನವರ್, ಹಾವೇರಿ-ರುದ್ರಪ್ಪ ಲಮಾಣಿ, ಹಾನಗಲ್-ಮನೋಹರ್ ತಹಶೀಲ್ದಾರ್, ಶಿಗ್ಗಾಂವ್ ಕ್ಷೇತ್ರಕ್ಕೆ ಅಜ್ಜಂಫೀರ್ ಖಾದ್ರಿ, ರಾಣೆಬೆನ್ನೂರು- ಕೆಬಿ ಕೋಳಿವಾಡ ಹೆಸರು ಘೋಷಿಸಿದರು.
ಹಾವೇರಿ ಜಿಲ್ಲೆ : ಗೆದ್ದವರು, ಸೋತವರು
ವೇದಿಕೆಯಲ್ಲಿ ಈ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಹೇಳಿ ಗೆಲ್ಲಿಸಿಕೊಡುವಂತೆ ಸಿದ್ದರಾಮಮಯ್ಯ ಅವರು ಜನತೆಯಲ್ಲಿ ಮನವಿ ಮಾಡಿದರು. ಇನ್ನು ಜಿಲ್ಲೆಯ ಒಟ್ಟು ಆರು ಕ್ಷೇತ್ರಗಲ್ಲಿ ಪಕ್ಷಗಳ ಬಲಾಬಲ ನೋಡುವುದಾರೆ 2013ರಲ್ಲಿ ಕಾಂಗ್ರೆಸ್ 4ರಲ್ಲಿ ಜಯಿಸಿದ್ದು, ಬಿಜೆಪಿ 1 ಹಾಗೂ ಕೆಜೆಪಿ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. 2013ರ ಚುನಾವಣೆಯ ಆರು ಕ್ಷೇತ್ರದ ಫ್ಲ್ಯಾಶ್ ಬ್ಲಾಕ್ ಇಂತಿದೆ.
ಹಾನಗಲ್ ಕ್ಷೇತ್ರ
2013ರ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಮನೋಹರ್ ತಹಸೀಲ್ದಾರ್ ಅವರು 6624 ಮತಗಳನ್ನು ಪಡೆದ ಪ್ರತಿಸ್ಪರ್ಧಿ ಅಂದಿನ ಕೆಜೆಪಿ ಅಭ್ಯರ್ಥಿಯಾಗಿದ್ದ ಬಲಿಷ್ಠ ನಾಯಕ ಸಿಎಂ ಉದಾಸಿ ಅವರನ್ನು ಅವರನ್ನು ಸೋಲಿಸಿದ್ದು. ಇದೀಗ 2018 ಚುನಾವಣಗೆ ಹಾನಗಲ್ ಕ್ಷೇತ್ರದಿಂದ ಮನೋಹರ್ ತಹಸೀಲ್ದಾರ್ ಅವರಿಗೆ ಟಿಕೆಟ್ ಎಂದು ಸಿದ್ದರಾಮಯ್ಯ ಘೋಷಿಸಿದರು.
ಶಿಗ್ಗಾಂವ್ ಕ್ಷೇತ್ರ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶಿಗ್ಗಾಂವ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಜ್ಜಂಫೀರ್ ಖಾದ್ರಿ ಅವರು ಬಿಜೆಪಿಯ ಬಸವರಾಜ್ ಬೊಮ್ಮಾಯಿ ವಿರುದ್ಧ ಪರಾಭವಗೊಂಡಿದ್ದರು. ಇದೀಗ 2018ರ ಚುನಾವಣೆಗೆ ಸಿದ್ದರಾಮಯ್ಯ ಅವರು ಅಜ್ಜಂಫೀರ್ ಖಾದ್ರಿ ಅವರನ್ನು ಕಣಕ್ಕಿಸಲು ತೀರ್ಮಾನಿಸಿದ್ದಾರೆ.
ಹಾವೇರಿ ಕ್ಷೇತ್ರ
2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನೆಹರು ಓಲೇಕಾರ್ ಅವರನ್ನು ಕಾಂಗ್ರೆಸ್ ನ ರುದ್ರಪ್ಪ ಲಮಾಣಿ ಸೋಲಿಸಿ ವಿಧಾನಸಭೆಗೆ ಪ್ರವೇಶಿದ್ದಾರೆ. ಮುಂದಿನ ಚುನಾವಣೆಯಲ್ಲೂ ಇವರೇ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಅವರು ಇಂದು ನಡೆದ ನವಕರ್ನಾಟಕ ಯಾತ್ರೆಯಲ್ಲಿ ಘೋಷಿಸಿದರು.
ಬ್ಯಾಡಗಿ ಕ್ಷೇತ್ರ
ಕಳೆದ ಚುನಾವಣೆಯಲ್ಲಿ ಕೆಜೆಪಿಯ ಶಿವಾಜ್ ಸಜ್ಜನ್ ಅವರನ್ನು ಮಣಿಸಿದ್ದ ಕಾಂಗ್ರೆಸ್ ನ ಪ್ರಸ್ತುತ ಎಂಎಲ್ ಎ ಬಸವರಾಜ್ ಶಿವಣ್ಣನವರ್ ಅವರೇ 2018ರ ಚುನಾವಣೆಯಲ್ಲಿ ಬ್ಯಾಡಗಿ ಕ್ಷೇತ್ರದಿಂದ ಕಣಕ್ಕಿಳಿಯುವುದರ ಬಗ್ಗೆ ಸಿದ್ದರಾಮಯ್ಯ ಅವರು ಖಚಿತಪಡಿಸಿದರು.
ಹಿರೇಕೆರೂರ್ ಕ್ಷೇತ್ರ
ಕಳೆದ ಬಾರಿ ಅಂದರೆ 2013ರಲ್ಲಿ ಹಿರೇಕೆರೂರ್ ವಿಧಾನಸಬಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧೆಗಿಳಿದಿದ್ದ ಬಿ.ಸಿ.ಪಾಟೀಲ್ ಅವರು ಕೆಜೆಪಿಯ ಯುಬಿ ಬಣಗರ್ ವಿರುದ್ಧ ಪರಾಭವಗೊಂಡಿದ್ದರು. ಇದೀಗ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದದಂತೆ ಮುಂದಿನ ಚುನಾವಣೆಗೆ ಬಿ.ಸಿ.ಪಾಟೀಲ್ ಅವರಿಗೆ ಟಿಕೆಟ್ ಸಿಗುವುದು ಪಕ್ಕಾ ಆಗಿದಂತಾಗಿದೆ.
ರಾಣೇಬೆನ್ನೂರು ಕ್ಷೇತ್ರ
ರಾಣೇಬೆನ್ನೂರು ಪ್ರಸ್ತುತ ಸ್ಪೀಕರ್ ಆಗಿರುವ ಕೆಬಿ ಕೋಳಿವಾಡ ಅವರ ಕ್ಷೇತ್ರವಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಹುತೇಕ ಕೋಳಿವಾಡ ಅವರೆ ಕಣಕ್ಕಿಳಿಯುವ ಎಲ್ಲಾ ಸಾಧ್ಯತೆಗಲಿವೆ. ಮತ್ತೊಂದೆಡೆ ಕೋಳಿವಾಡ ಅವರು ತಮ್ಮ ಮಗನಿಗೆ ಕ್ಷೇತ್ರ ಬಿಟ್ಟು ಕೊಡಲಿದ್ದಾರೆ ಎನ್ನುವ ಗುಸು-ಗುಸು ಸುದ್ದಿಗಳು ಸಹ ಕ್ಷೇತ್ರದಲ್ಲಿ ಹರಿದಾಡುತ್ತಿವೆ.