ಶಿಗ್ಗಾವಿ ರಾಜಕೀಯ: 50 ಟಿಕೆಟ್ ಆಕಾಂಕ್ಷಿಗಳಿಗೆ ಮಾತು ಕೊಟ್ಟು ತಪ್ಪಿದರಾ ಬಸವರಾಜ ಬೊಮ್ಮಾಯಿ!
ಹಾವೇರಿ, ಅಕ್ಟೋಬರ್ 21: ರಾಜ್ಯ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಆಗಿದೆ.
ಇಲ್ಲಿ ಬಿಜೆಪಿಯಿಂದ ಹಾವೇರಿ-ಗದಗ ಸಂಸದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಶಿಗ್ಗಾವಿ ಟಿಕೆಟ್ ನೀಡಲಾಗಿದೆ. ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರೂ ಈ ಮೂಲಕ ಅವರನ್ನೆ ನಂಬಿದ್ದ ಟಿಕೆಟ್ ಆಕಾಂಕ್ಷಿಗಳಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಮೋಸ ಮಾಡಿದರೂ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸ್ವತಃ ಅವರೇ ಹೇಳಿದ್ದು ಏನು ಎಂಬುದು ಇಲ್ಲಿದೆ.

ಶಿಗ್ಗಾವಿಯಲ್ಲಿ ಸೋಮವಾರ 'ಟಿಕೆಟ್ ಆಕಾಂಕ್ಷಿಗಳಿಗೆ ಮಾತು ಕೊಟ್ಟು ತಪ್ಪಿದರಾ ಬಸವರಾಜ ಬೊಮ್ಮಾಯಿ' ಪ್ರಶ್ನೆಗೆ ಸ್ವತಃ ಅವರ ಉತ್ತರಿಸಿದ್ದಾರೆ. ನಾನು ಯಾರಿಗೂ ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡಿರಲಿಲ್ಲ. ನಾನು ಕಾರ್ಯಕರ್ತರಿಗೆ ಅನ್ಯಾಯ ಮಾಡಿಲ್ಲ ಎಂದು ಹೇಳಿದ್ದಾರೆ.
ಶಿಗ್ಗಾವಿ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತುಕೊಟ್ಟು ತಪ್ಪಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಯಾರಿಗೂ ಟಿಕೆಟ್ ಕೊಡಿಸುತ್ತೇನೆ ಎಂದು ಮಾತುಕೊಟ್ಟಿಲ್ಲ. ಸುಮಾರು 50 ಜನ ಆಕಾಂಕ್ಷಿಗಳು ಇದ್ದರು, ಎಲ್ಲರಿಗೂ ಪಕ್ಷದ ನಿರ್ಧಾರಕ್ಕೆ ಬದ್ದನಾಗಿರಬೇಕು ಎಂದು ತಿಳಿಸಿದ್ದೆ. ಇದು ನನ್ನ ನಿರ್ಣಯ ಅಲ್ಲಾ, ಪಕ್ಷದ ನಿರ್ಣಯ. ನಾನು ಯಾರಿಗೂ ಮಾತು ಕೊಟ್ಟಿಲ್ಲ. ಮಾತು ತಪ್ಪಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಗನಿಗೆ ಸ್ಪರ್ಧೆ ಬೇಡ ಅಂತಲೇ ಹೇಳಿದ್ದೆ: ಬೊಮ್ಮಾಯಿ
ನನ್ನ ಮಗನನ್ನು ನಿಲ್ಲಿಸಲು ಆಸಕ್ತಿ ಇರಲಿಲ್ಲ. ಕೊನೆಯ ಘಳಿಗೆವರಿಗೂ ಬೇಡ ಅಂತಲೇ ಹೇಳಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಟಿಕೆಟ್ ನೀಡಿದೆ. ಗೆಲ್ಲುವ ದೃಷ್ಟಿಯಿಂದ ಟಿಕೆಟ್ ನೀಡಿದೆ. ತಿರ್ಮಾನ ಮಾಡಿದೆ. ಪಕ್ಷದ ಆದೇಶವನ್ನು ಪರಿಪಾಲನೆ ಮಾಡುವುದು ನನ್ನ ಕಾರ್ಯ. ಕೇಂದ್ರ ಗೃಹ ಸಚಿವ ಅಮಿಶ್ ಶಾ ಮಾತನಾಡಿ ಟಿಕೆಟ್ ಅಂತಿಮಗೊಳಿಸಿದ್ದಾರೆ ಎಂದು ವಿವರಿಸಿದರು.
ಸಾಮಾನ್ಯ ಕಾರ್ಯಕರ್ತರಿಗೆ ಅನ್ಯಾಯ ಆಗಿದೆಯೇ? ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಕಾರ್ಯಕರ್ತರಿಗೆ ಅನ್ಯಾಯ ಮಾಡಿಲ್ಲ. ಅವರಿಗೆ ಕ್ಯಾಬಿನೆಟ್ ಸ್ಥಾನ ನೀಡಿದ್ದೇನೆ. ಹಲವಾರು ಸ್ಥಾನಮಾನ ಕೊಟ್ಟಿದ್ದೇವೆ.. ಶ್ರೀಕಾಂತ್ ದುಂಡಿಗೌಡರ ಜೊತೆ ಮಾತನಾಡುತ್ತೇನೆ. ಮನವೊಲಿಸಲು ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಯೋಗೇಶ್ವರ ಮನವೊಲಿಕೆ ಯತ್ನ ನಡೆದಿತ್ತು: ಬೊಮ್ಮಾಯಿ
ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ.ಪಿ ಯೋಗೇಶ್ವರ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇವತ್ತಿನ ಬೆಳವಣಿಗೆ ಗೊತ್ತಿಲ್ಲ. ನಿನ್ನೆ ತಡರಾತ್ರಿ ಮನವೊಲಿಸಲು ಪ್ರಯತ್ನ ನಡೆದಿತ್ತು. ರಾಷ್ಟ್ರೀಯ ವರಿಷ್ಠರು ಮಾತುಕತೆ ಮಾಡಿ ಮನವೊಲಿಸಲಿದ್ದಾರೆ ಎಲ್ಲವು ಸರಿಹೋಗಲಿದೆ ಚಿಂತೆ ಬೇಡ ಎಂದರು.
ಚನ್ನಪಟ್ಟಣದಿಂದ ಪಕ್ಷೇತರವಾಗಿ ಸಿ.ಪಿ ಯೋಗೇಶ್ವರ ಅವರು ಸ್ವರ್ಧೆ ಮಾಡುವ ಆಸೆ ಇದೆ. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಕ್ಷೇತ್ರ ಇದಾಗಿದೆ. ಅವರಿಬ್ಬರೂ ಮಾತುಕತೆ ಮಾಡಿಕೊಂಡು ಹೊಂದಾಣಿಕೆ ಆಗಬೇಕಿತ್ತು. ತಡವಾಗಿದ್ದಕ್ಕೆ ಈ ನಿರ್ಧಾರಕ್ಕೆ ಬಂದಿರಬಹುದು. ನಮ್ಮ ಪಕ್ಷದ ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ಸರಿಪಡಿಸುವ ಕಾರ್ಯ ಮಾಡುತ್ತದೆ. ಸಿ.ಪಿ. ಯೋಗಿಶ್ವರ ಕಾಂಗ್ರೆಸ್ ಮುಖಂಡರ ಜೊತೆ ಸಂಪರ್ಕದಲ್ಲಿರುವ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.












Click it and Unblock the Notifications