ಪಕ್ಷ ಬದಲಿಸುವವರ ಸಂಖ್ಯೆ ಹೆಚ್ಚಳ: ದೇವೇಗೌಡ ಭವಿಷ್ಯ
ಹಾಸನ, ನವೆಂಬರ್ 16 : ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣೆ ನಂತರ ರಾಜ್ಯ ಮತ್ತು ದೇಶದಲ್ಲಿ ಸಾಕಷ್ಟು ರಾಜಕೀಯದಲ್ಲಿ ಬದಲಾವಣೆಗಳು ಆಗಲಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಹಾಸನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎರಡೂ ರಾಷ್ಟ್ರೀಯ ಪಕ್ಷಗಳು ಗುಜರಾತ್ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿವೆ. ಅವುಗಳಿಗೆ ಅಭದ್ರತೆ ಕಾಡುತ್ತಿರುವ ಕಾರಣದಿಂದಲೇ ಈ ರೀತಿಯ ಆಮಿಷವೊಡ್ಡುತ್ತಿವೆ. ಆದ್ದರಿಂದ ಈ ಚುನಾವಣೆಯ ಫಲಿತಾಂಶ ಖಂಡಿತವಾಗಿ ರಾಷ್ಟ್ರ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ" ಎಂದು ಭವಿಷ್ಯ ನುಡಿದರು.

ಕರ್ನಾಟಕದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಲಿವೆ. ಪಕ್ಷ ಬದಲಿಸುವವರ ಸಂಖ್ಯೆ ಹೆಚ್ಚಲಿದೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಯಾತ್ರೆಗೆ ಅಭೂತಪೂರ್ವ ಬೆಂಬಲ ಕಂಡು ಬರುತ್ತಿದೆ.
ಈ ಹಿನ್ನೆಯಲ್ಲಿ ಹಳೇ ಮೈಸೂರು ಭಾಗದ ಜೊತೆಗೆ ಉತ್ತರ ಕರ್ನಾಟಕದಲ್ಲಿಯೂ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಜನರು ಈ ಬಾರಿ ಜೆಡಿಎಸ್ ಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.












Click it and Unblock the Notifications