ಹಾಸನದಲ್ಲಿ ಅಪ್ರಾಪ್ತ ಬಾಲಕರಿಂದ ಕಾರಿನಲ್ಲಿ ಜಾಲಿ ರೈಡ್: ಪೋಷಕರಿಗೆ ಸಂಕಷ್ಟ
ಹಾಸನ, ಆಗಸ್ಟ್ 07: ಪೋಷಕರ ನಿರ್ಲಕ್ಷದಿಂದ ಅಪ್ರಾಪ್ತ ಬಾಲಕನೊಬ್ಬ ಕಾರು ಚಲಾಯಿಸಿ ಅಪಘಾತವಾದ ಘಟನೆ ಹಾಸನ ನಗರದ ಕೆ.ಆರ್.ಪುರಂನಲ್ಲಿ ನಡೆದಿದೆ. ಘಟನೆಯಲ್ಲಿ ಕಾರುಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ಬಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ನಗರದ ಕೆ.ಆರ್.ಪುರಂನಲ್ಲಿ ಬಾಲಕರು ಕಾರಿನಲ್ಲಿ ಜಾಲಿರೈಡ್ ಮಾಡಿದ್ದು, ಕೊನೆಯಲ್ಲಿ ನಿಯಂತ್ರಣಕ್ಕೆ ಸಿಗದೇ ನೂರಾರು ವಾಹನಗಳು ಸಂಚಾರ ಮಾಡುವ ಹೈಸ್ಕೂಲ್ ಫೀಲ್ಡ್ ರೋಡ್ ದಾಟಿ ಹೋಟೆಲ್ ಪೋರ್ಟಿಕೊದಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ನೋಡನೋಡುತ್ತಿದ್ದಂತೆ ಬಾಲಕ ವೇಗವಾಗಿ ಬಂದು ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸಿದ್ದಾನೆ. ಘಟನೆಯಲ್ಲಿ ಅಪ್ರಾಪ್ತ ಚಲಾಯಿಸುತ್ತಿದ್ದ ಕಾರು ಸೇರಿ ಎರಡು ಕಾರುಗಳು ಜಖಂ ಆಗಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಬಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಹಾಸನ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಾರನ್ನು ವಶಕ್ಕೆ ಪಡೆದ ಸಂಚಾರಿ ಪೊಲೀಸರು ಬಾಲಕನ ಪೋಷಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇನ್ನು ಅಪಘಾತದ ಎದೆ ಝಲ್ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿಕ್ಕಮಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಕರಡಿ ದಾಳಿ
ಚಿಕ್ಕಮಗಳೂರು: ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಬೆಳ್ಳಂಬೆಳಗ್ಗೆ ಕರಡಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದುಗ್ಲಾಪುರ ಗ್ರಾಮದಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದ ದುಗ್ಲಾಪುರ ಗ್ರಾಮದ ರಸ್ತೆಯಲ್ಲಿ ಕರಡಿ ಎಲ್ಲೆಂದರಲ್ಲಿ ಓಡಾಡುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಇಂದು ಬೆಳಗ್ಗೆ ರೈತ ಸೋಮಶೇಖರಪ್ಪ ಎನ್ನುವವರು ಜಮೀನಿಗೆ ತೆರಳುತ್ತಿದ್ದ ವೇಳೆ ಕರಡಿ ಏಕಾಏಕಿ ರೈತನ ಮೇಲೆ ದಾಳಿ ಮಾಡಿದೆ. ಕೂದಲೆಳೆ ಅಂತರದಲ್ಲಿ ರೈತ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕರಡಿ ದಾಳಿಯಿಂದ ಸೋಮಶೇಖರಪ್ಪ ಅವರ ದೇಹದ ಮೇಲೆ ಪರಚಿದ ಗಾಯಗಳಾಗಿವೆ. ಇನ್ನು ಕಳೆದ 20 ದಿನಗಳಿಂದ ದುಗ್ಲಾಪುರ ಸುತ್ತಮುತ್ತ ಕರಡಿ ಅಲೆದಾಟ ಜೋರಾಗಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಘಟನೆ ನಡೆದಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಸದ್ಯ ಕರಡಿ ಓಡಾಟದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದ್ದು, ಕೂಡಲೇ ಕರಡಿಯನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.












Click it and Unblock the Notifications